ಆಟೋ ಇಂಡಸ್ಟ್ರಿ ಬಿಕ್ಕಟ್ಟು: 'ನಿರ್ಮಲಾ ತಾಯ್' ಹೇಳದೆ ಉಳಿಸಿದ ಅಸಲಿ ಕಾರಣಗಳು!
ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಯಾವ ಸಂಗತಿಗಳೂ ಗಂಭೀರವಾಗಿರುವ ಸಾರ್ವಜನಿಕ ಚರ್ಚೆಗೆ ಒಳಪಡುವ ಸಾಧ್ಯತೆಗಳು ಕಾಣಿಸುತ್ತಿಲ್ಲ. ಅದರಲ್ಲೂ ಸಾಮಾಜಿಕ ಜಾಲತಾಣಗಳ ಈ ಸಮಯದಲ್ಲಿ ಪ್ರತಿಯೊಂದು ಗೇಲಿ, ಕುಹಕ, ಮೇಲ್ಮಟ್ಟದ ವಾದ- ಪ್ರತಿವಾದಗಳನ್ನೇ ಕೊನೆಯಾಗುತ್ತಿವೆ. ಇದಕ್ಕೆ ಇತ್ತೀಚಿನ ಉದಾಹರಣೆ, ಆಟೋಮೊಬೈಲ್ ಕ್ಷೇತ್ರ ಎದುರಿಸುತ್ತಿರುವ ಬಿಕ್ಕಟ್ಟು ಮತ್ತು ಅದಕ್ಕೆ ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೀಡಿದ ಕಾರಣದ ಸುತ್ತ ನಡೆದ ಸಾರ್ವಜನಿಕ ಸಂವಾದ.
ಎಲ್ಲರೂ ಗಮನಿಸದ ಹಾಗೆ, ಭಾರತದ ನೋಟುಗಳ ಅಮಾನ್ಯೀಕರಣದ ನಂತರ ಆರ್ಥಿಕ ಬಿಕ್ಕಟ್ಟೊಂದನ್ನು ಎದುರಿಸುತ್ತಿದೆ ಮತ್ತು ಇದು ನಾನಾ ಸ್ವರೂಪಗಳಲ್ಲಿ ಜನರನ್ನು ಕಾಡುತ್ತಿದೆ. ಇದರ ಮುಂದುವರಿದ ಭಾಗವಾಗಿ ದೇಶದ ಆಟೋಮೊಬೈಲ್ ಕ್ಷೇತ್ರ ಹಿಂದೆಂದೂ ಕಾಣದ ಕುಸಿತ ಕಂಡಿದೆ. ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರ್ಸ್ ಸೊಸೈಟಿ ಬಿಡುಗಡೆ ಮಾಡಿರುವ ದತ್ತಾಂಶದ ಪ್ರಕಾರ, ಕ್ಷೇತ್ರ ಸತತನ ಹತ್ತನೇ ತಿಂಗಳು ವಾಹನ ಮಾರಾಟದಲ್ಲಿ ಇಳಿಮುಖ ಕಾಣುತ್ತಿದೆ. ಆಗಸ್ಟ್ ತಿಂಗಳಿನಲ್ಲಿ ಇಳಿಮುಖದ ಪ್ರಮಾಣ ಶೇ. 31.57 ತಲುಪಿದೆ. ಅಂದರೆ ತಯಾರಾಗುತ್ತಿರುವ 100 ಕಾರುಗಳ ಪೈಕಿ ಸರಿಸುಮಾರು 38 ಕಾರುಗಳು ಮಾರಾಟವಾಗದೆ ಉಳಿದಿವೆ. ಮಾರುತಿಯಂತಹ ದೇಶಿಯ ಆಟೋ ಕಂಪನಿಗಳು ಉತ್ಪಾದನೆಯನ್ನೇ ಕಡಿತಗೊಳಿಸಿವೆ. ಹೀಗೆ ಬಿಕ್ಕಟ್ಟು ನಾನಾ ಸ್ವರೂಪಗಳಲ್ಲಿ ಕಾಣಿಸಿಕೊಂಡಿವೆ.
ಕುಸಿದ ವಾಹನ ಉದ್ಯಮ ಚೇತರಿಕೆಗೆ ನಿರ್ಮಲಾ ಸೀತಾರಾಮನ್ ಮದ್ದು
ಯಾಕೆ ಹೀಗಾಗುತ್ತಿದೆ? ಇದನ್ನು ಜನರ ಮುಂದಿಡುವ ಹೊಣೆಗಾರಿಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಅವರದ್ದಾಗಿತ್ತು. ಆದರೆ ಅವರಿಂದ ಹೊರಬಿದ್ದ ಉತ್ತರ ಈಗಾಗಲೇ ಗೇಲಿಗೆ, ಕುಹಕಕ್ಕೆ ಆಹಾರವಾಗಿದೆ. ಈ ಕುರಿತು ಹೆಚ್ಚಿನ ಚರ್ಚೆಯ ಅಗತ್ಯವಿಲ್ಲ ಕೂಡ. ಹಾಗಾದರೆ ಭಾರತದ ಆಟೋ ಇಂಡಸ್ಟ್ರಿ ಕುಸಿತಕ್ಕೆ ನಿಜವಾದ ಕಾರಣಗಳೇನಿರಬಹುದು? ಇದನ್ನು ಹುಡುಕಿ ನಿಮ್ಮ ಮುಂದಿಡುವ ಕೆಲಸವನ್ನು 'ಇನ್ ಇಂಡಿಯಾ ಕನ್ನಡ' ಇಲ್ಲಿ ಮಾಡಿದೆ.
BS IV ವಾಹನಗಳ ಪರಿಚಯ
BS VI ಅರ್ಥಾತ್ ಭಾರತ್ ಸ್ಟೇಜ್ VIರ ಬಗ್ಗೆ ಭಾರತದ ವಾಹನ ಖರೀದಿದಾರರಲ್ಲಿ ಗೊಂದಲಗಳು ಸೃಷ್ಟಿಯಾಗಿವೆ. ಇದನ್ನು ದೇಶದಲ್ಲಿ ಅಳವಡಿಸಿಕೊಂಡ ಮೇಲೆ BS IV ವಾಹನಗಳು ಏನಾಗುತ್ತವೆ ಎಂಬ ಆತಂಕ ಇದರ ಹಿಂದಿದೆ. ಏಪ್ರಿಲ್ 1, 2020ನೇ ಇಸವಿಯಿಂದ BS VI ಭಾರತದಲ್ಲಿ ಅಳವಡಿಸಿಕೊಳ್ಳಲಾಗುತ್ತದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ತಯಾರಾಗಿರುವ BS IV ವಾಹನಗಳನ್ನು ಕೊಳ್ಳಲು ಜನ ಹಿಂದೇಟು ಹಾಕುತ್ತಿದ್ದಾರೆ. ಇದು ಹತ್ತು ತಿಂಗಳ ಹಿಂದೆ ಆಟೋ ಇಂಡಸ್ಟ್ರಿ ಮೊದಲ ಬಾರಿ ಕುಸಿತ ಕಂಡಾಗ ನೀಡಲಾದ ಪ್ರಮುಖ ಕಾರಣಗಳಲ್ಲೊಂದು.
ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಜಿಡಿಪಿ ಇಳಿಕೆ ಒಂದು ಭಾಗವಷ್ಟೇ: ನಿರ್ಮಲಾ
ತಯಾರಿಕಾ ವೆಚ್ಚ ಹೆಚ್ಚಳ
ಇದರ ಜತೆಗೆ ಕಳೆದ ಒಂಬತ್ತು ತಿಂಗಳಲ್ಲಿ ಕಾರು ತಯಾರಿಕೆ ವೆಚ್ಚದಲ್ಲಿ ಶೇಕಡಾ 15ರಷ್ಟು ಹೆಚ್ಚಾಗಿದೆ ಎಂಬುದು ಒಟ್ಟಾರೆ ಕ್ಷೇತ್ರದ ಬಿಕ್ಕಟ್ಟಿಗೆ ಇರುವ ಮತ್ತೊಂದು ಕಾರಣ. ಏರ್ ಬ್ಯಾಗ್, ರಿವರ್ಸ್ ಸೆನ್ಸಾರ್, ಎಬಿಎಸ್ನಂತಹ ಅಳವಡಿಕೆಗಳನ್ನು ಕಡ್ಡಾಯಗೊಳಿಸಲಾಗಿದೆ. ಇದರಿಂದ ಸಣ್ಣ ಕಾರುಗಳ ಬೆಲೆಯಲ್ಲೂ ಹೆಚ್ಚಳವಾಗಿದೆ. ಮಾರಾಟ ಕುಸಿತವಾಗಿರುವ ಹಿನ್ನೆಲೆಯಲ್ಲಿ ಕಂಪನಿಗಳ ಉತ್ಪಾದನೆ ವೆಚ್ಚ ಹಾಗೂ ಮಾರಾಟದ ಆದಾಯದ ನಡುವೆ ಅಂತರ ಕಡಿಮೆಯಾಗಿದೆ. ಅರ್ಥಾತ್ ಲಾಭಾಂಶದಲ್ಲಿ ಇಳಿಕೆ ಕಂಡು ಬಂದಿದೆ.
ದ. ಭಾರತದ ಸಿನಿಮಾದಲ್ಲಾದರೂ ತರ್ಕ ಹುಡುಕಬಹುದು, ಆದರೆ ಸಚಿವೆ ನಿರ್ಮಲಾ?
ಇಂಧನ ಬೆಲೆ ಏರಿಕೆ
ಕಳೆದ ನಾಲ್ಕು ವರ್ಷಗಳಲ್ಲಿ ಪೆಟ್ರೋಲ್ ದರ ಶೇ. 15ರಷ್ಟು ಹೆಚ್ಚಾಗಿದೆ. ಅದಕ್ಕೆ ಕಾರಣ ಆಗಿರುವುದು ಕೇಂದ್ರ ಸರಕಾರ ಹೆಚ್ಚಿಸಿಕೊಂಡು ಬಂದ ಎಕ್ಸೈಸ್ ಡ್ಯೂಟಿ. ಈ ವರ್ಷದ ಬಜೆಟ್ ನಲ್ಲಿ ಕೂಡ ಪೆಟ್ರೋಲ್ - ಡೀಸೆಲ್ ಮೇಲಿನ ಸುಂಕವನ್ನು ಒಂದು ರುಪಾಯಿ ಹೆಚ್ಚಿಸಲಾಗಿತ್ತು. ಇದರಿಂದ ಕಾರು ಖರೀದಿಗಿಂತ ನಗರ ಪ್ರದೇಶಗಳಲ್ಲಿನ ಜನ ಬಾಡಿಗೆ ವಾಹನವೇ ಸೂಕ್ತ ಎಂದು ತೀರ್ಮಾನಕ್ಕೆ ಬಂದಿರಬಹುದು. ನಿರ್ಮಲಾ ಸೀತಾರಾಮನ್, ಬಾಡಿಗೆ ವಾಹನ ಬಳಕೆಯ ಬಗ್ಗೆ ಮಾತನಾಡಿದರು, ಆದರೆ ಯಾಕೆ ಎಂಬುದನ್ನು ಅವರು ಆಲೋಚನೆ ಮಾಡಿದಂತೆ ಕಾಣಿಸುತ್ತಿಲ್ಲ. ಇದರ ಜತೆಗೆ ಜಿಡಿಪಿ ಕುಸಿತ, ಆರ್ಥಿಕ ಬಿಕ್ಕಟ್ಟುಗಳು ಒಟ್ಟಾರೆ ಕೊಳ್ಳುವ ಶಕ್ತಿಯನ್ನೇ ಜನರಿಂದ ಕಿತ್ತುಕೊಂಡಿವೆ. ಇಂತಹ ಸಮಯದಲ್ಲಿ ಕಾರುಗಳ ಮಾರಾಟ ದಾಖಲೆ ಪ್ರಮಾಣದಲ್ಲಿ ಕುಸಿಯುವುದು ಸಹಜ ಕೂಡ.
ವಿಮೆಯ ಭಾರ ಹೊರುವವರು ಯಾರು?
ವಾಹನಗಳ ವಿಮೆ ನಿಯಮಗಳಲ್ಲೂ ಈಚೆಗೆ ಬದಲಾವಣೆ ತರಲಾಗಿದೆ. ಈಗ ಬರೀ ಒಂದು ವರ್ಷಕ್ಕೆ ಇನ್ಷೂರೆನ್ಸ್ ಮಾಡಲು ಸಾಧ್ಯವಿಲ್ಲ. ಜತೆಗೆ ಥರ್ಡ್ ಪಾರ್ಟಿ ಇನ್ಷೂರೆನ್ಸ್ ಕೂಡ ಕಡ್ಡಾಯ. ಹಾಗಂದರೆ, ಕಾರಿನಲ್ಲಿ ಹೋಗುವಾಗ ಅಪಘಾತವಾದರೆ ಎದುರಿಗಿನ ವಾಹನ- ವ್ಯಕ್ತಿಯ ವಿಮೆಯೂ ಒಳಗೊಂಡಿರಬೇಕು. ನೋಂದಣಿಯೂ ದುಬಾರಿ ಆಗಿದೆ. ಕೇಂದ್ರದಿಂದ ನೋಂದಣಿ ಶುಲ್ಕ ಹದಿಮೂರು ಪಟ್ಟು ಏರಿಸಲಾಗಿದೆ. ಸದ್ಯಕ್ಕೆ ಮುಂದಿನ ವರ್ಷದ ಜೂನ್ ತನಕ ಅದನ್ನು ತಡೆಹಿಡಿಯಲಾಗಿದೆ. ಆದರೆ ಇನ್ಷೂರೆನ್ಸ್ ಮೊತ್ತದ ಭಾರವನ್ನು ಗ್ರಾಹಕ ಹೊರುವುದು ಕಷ್ಟವಿದೆ.
2 ದಶಕದಲ್ಲಿಯೇ ವಾಹನ ಉದ್ಯಮಕ್ಕೆ ಭಾರಿ ಸಂಕಷ್ಟ: ಕೆಲಸ ಕಳೆದುಕೊಂಡ 2.30 ಲಕ್ಷ ಮಂದಿ
ಜಿಎಸ್ಟಿ ಇಪ್ಪತ್ತೆಂಟು ಪರ್ಸೆಂಟ್
ಜಿಎಸ್ಟಿ ಹೆಸರಿನಲ್ಲಿ ಮಧ್ಯರಾತ್ರಿ ಕ್ರಾಂತಿ ಮಾಡಲು ಹೊರಟ ಮೋದಿ ನೇತೃತ್ವದ ಸರಕಾರ ಸಂಕಷ್ಟಗಳ ಸರಮಾಲೆಯನ್ನೇ ಇದರಿಂದ ಸೃಷ್ಟಿಸಿದೆ. ಇದು ಆಟೋ ಕ್ಷೇತ್ರವನ್ನೂ ಬಿಟ್ಟಿಲ್ಲ ಎಂಬುದು ಗಮನಾರ್ಹ. ಕಾರುಗಳ ಮೇಲೆ ಈಗ ವಿಧಿಸುತ್ತಿರುವ ಇಪ್ಪತ್ತೆಂಟು ಪರ್ಸೆಂಟ್ ಜಿಎಸ್ ಟಿ ದರವನ್ನು ಹದಿನೆಂಟು ಪರ್ಸೆಂಟ್ಗೆ ಇಳಿಸಿ ಎಂದು ಆರಂಭದಿಂದಲೂ ಕ್ಷೇತ್ರದ ಪರಿಣಿತರು ಕೇಳಿಕೊಂಡು ಬಂದರು. ಆದರೆ ಈವರೆಗೂ ಆ ಕುರಿತು ಯಾವುದೇ ತೀರ್ಮಾನ ಹೊರಬಿದ್ದಿಲ್ಲ. ಇದು ಕೂಡ ಒಟ್ಟಾರೆ ಬಿಕ್ಕಟ್ಟಿಗೆ ತನ್ನದೇ ಕೊಡುಗೆ ನೀಡಿದೆ.
ಪರ್ಯಾಯ ಇಂಧನದತ್ತ ಒಲವು
ಕೇಂದ್ರ ಸರಕಾರದಿಂದ ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ ನೀಡಲು ಹಲವು ಯೋಜನೆಗಳನ್ನು ಘೋಷಿಸಲಾಗಿದೆ. ಪೆಟ್ರೋಲ್/ಡೀಸೆಲ್ ವಾಹನಗಳಿಗೆ ಹೋಲಿಸಿದರೆ ಎಲೆಕ್ಟ್ರಿಕಲ್ ವಾಹನದ ಕಾರಿಗೆ ಆಗುವ ಖರ್ಚು ಕಡಿಮೆ ಎಂಬ ಭಾವನೆ ಇದೆ. ಜತೆಗೆ ಇನ್ನು ಕೆಲವೇ ಸಮಯದಲ್ಲಿ ಕೈಗೆಟುಕುವ ದರದಲ್ಲಿ ಎಲೆಕ್ಟ್ರಿಕಲ್ ಕಾರು ಬಿಡುಗಡೆ ಮಾಡುವುದಾಗಿ ವಾಹನ ತಯಾರಿಕೆ ಸಂಸ್ಥೆಗಳು ಹೇಳುತ್ತಿವೆ. ಆ ಕಾರಣಕ್ಕೂ ಕಾರು ಖರೀದಿಗೆ ಜನರು ಹಿಂದೆ- ಮುಂದೆ ಆಲೋಚಿಸುತ್ತಿದ್ದಾರೆ.
ಕಾರಿನ ಇಎಂಐಗಿಂತ ಟ್ರಾಫಿಕ್ ದಂಡವೇ ಹೆಚ್ಚು!
ಇವೆಲ್ಲವೂ ಸಾಲದು ಎಂಬಂತೆ ಈಗ ಟ್ರಾಫಿಕ್ ದುಬಾರಿ ದಂಡ ಸಂಹಿತೆಯನ್ನು ಕೇಂದ್ರ ಸರಕಾರ ದೇಶಾದ್ಯಂರ ಪರಿಚಯಿಸಿದೆ. ಸೆಪ್ಟೆಂಬರ್ನಿಂದ ಮೋಟಾರು ವಾಹನ ಕಾಯ್ದೆ ತಿದ್ದುಪಡಿಯಾಗಿ, ಸಂಚಾರ ನಿಯಮ ಮುರಿದಾಗ ದೊಡ್ಡ ಮಟ್ಟದ ದಂಡ ತೆರಬೇಕಾಗಿದೆ. ಒಂದು ಕಾರಿನ ಇಎಂಐ ಅದಕ್ಕಿಂತ ಕಡಿಮೆ ಇರುತ್ತದೆ. ಅಂಥದ್ದರಲ್ಲಿ ಇಷ್ಟು ದೊಡ್ಡ ಮೊತ್ತದ ದಂಡ ಬೀಳುತ್ತದೆ ಎಂಬ ಆತಂಕ ಇದ್ದೇ ಇದೆ. ಕಾರು ರಸ್ತೆಗೆ ಇಳಿದ ಮೇಲೆ ಅದನ್ನು ಓಡಿಸುವುದೇ ಆತಂಕದ ವಿಚಾರವಾಗಿಬಿಟ್ಟರೆ ಹೇಗೆ? ಗೊತ್ತಿದ್ದೋ- ಗೊತ್ತಿಲ್ಲದೆಯೋ ನೋ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದರೆ ಅಥವಾ ಇನ್ಷೂರೆನ್ಸ್ ರಿನೀವಲ್ ಮರೆತುಬಿಟ್ಟಿದ್ದರೆ... ಇಂಥ 'ರೆ'ಗಳಿಗೆ ಸಾವಿರಾರು ರೂಪಾಯಿ ಬೆಲೆ ತೆರುವ ಆರ್ಥಿಕ ಚೈತನ್ಯ ಹಿಂದೆಂದಿಗಿಂತ ಈಗ ಕುಸಿದಿದೆ.
ಗ್ರಾಹಕರಿಗೆ ವರ್ಗಾವಣೆಯಾಗದ ಲಾಭ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ನಿರಂತರವಾಗಿ ರೆಪೋ ದರ ಇಳಿಕೆ ಮಾಡುತ್ತಲೇ ಬರಲಾಗುತ್ತದೆ. ಹೀಗೆ ಮಾಡಿದ್ದರ ಪರಿಣಾಮ ಸಾಲದ ಮೇಲಿನ ಬಡ್ಡಿ ದರ ಕಡಿಮೆ ಆಗಬೇಕಿತ್ತು. ಆದರೆ ತುಂಬ ಸ್ಪಷ್ಟವಾಗಿ ಗೊತ್ತಾಗುತ್ತದೆ, ಆ ಅನುಕೂಲವನ್ನು ಬ್ಯಾಂಕ್ ಗಳು ಗ್ರಾಹಕರಿಗೆ ವರ್ಗಾಯಿಸಿಲ್ಲ. ಇನ್ನು ಸಾಲ ವಾಪಸ್ ಬರುತ್ತದೋ ಇಲ್ಲವೋ ಎಂಬ ಆತಂಕದಲ್ಲಿ ಸಾಲ ವಿತರಣೆಯಲ್ಲೇ ಕಠಿಣ ನಿಯಮಗಳನ್ನು, ನಿರ್ಧಾರವನ್ನು ಬ್ಯಾಂಕ್ ಗಳು ತೆಗೆದುಕೊಂಡಿರುವುದರಿಂದ ವಾಹನ ಸಾಲ ಸಿಗುವುದೇ ಕಷ್ಟ ಎಂಬ ಸ್ಥಿತಿ ಏರ್ಪಟ್ಟಿದ್ದು, ನೇರವಾಗಿ ವಾಹನ ಮಾರಾಟದ ಮೇಲೆ ಪರಿಣಾಮ ಬೀರುತ್ತಿದೆ.
ಕಳೆದ ಆಗಸ್ಟ್ ನಲ್ಲಿ ಪ್ರಯಾಣಿಕರ ವಾಹನ ಮಾರಾಟ 31.57%, ವಾಣಿಜ್ಯ ವಾಹನ ಮಾರಾಟ 38.71%, ತ್ರಿಚಕ್ರ ವಾಹನ ಮಾರಾಟ 6.93%, ದ್ವಿಚಕ್ರ ವಾಹನ ಮಾರಾಟ 22.24% ಕುಸಿದಿದೆ. ಮತ್ತು, ಇದಕ್ಕೆ ಅಸಲಿ ಕಾರಣಗಳು ಮೇಲಿನ ಪಟ್ಟಿಯಲ್ಲಿವೆ. ಇದನ್ನು ಒಪ್ಪಿಕೊಳ್ಳುವುದನ್ನು ಬಿಟ್ಟು ಆರ್ಥಿಕ ಸಚಿವೆ ದಿಕ್ಕು ತಪ್ಪಿಸಲು ಮುಂದಾದರೆ, ಜನ ಕೂಡ ತಪ್ಪು ದಿಕ್ಕಿನಿಂದಲೇ ಪ್ರತಿಕ್ರಿಯಿಸುತ್ತಾರೆ. ಪರಿಣಾಮ ಗಂಭೀರ ಸಂಗತಿಯೊಂದು ಹಳ್ಳ ಹಿಡಿಯುತ್ತದೆ, ಅಷ್ಟೆ.