ಅನುತ್ಪಾದಕ ಆಸ್ತಿಯ ಭಾರದಲ್ಲಿ ಕುಸಿದ ಬ್ಯಾಂಕ್ ಗಳಿಗೆ ಮುದ್ರಾ ಸಾಲದ ಚಪ್ಪಡಿ
ಮೊದಲೇ ಸುಸ್ತಾದ ವ್ಯಕ್ತಿಯ ತಲೆ ಮೇಲೆ ಭಾರವಾದ ಚಪ್ಪಡಿಯೂ ಹೊರಿಸಿದರೆ ಏನಾಗುತ್ತದೆ? ಅಂಥದೇ ಪರಿಸ್ಥಿತಿ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳದಾಗಿದೆ. ಅನುತ್ಪಾದಕ ಆಸ್ತಿ (ಎನ್ ಪಿಎ) ಹೊರೆಗೆ ಇಷ್ಟಿಷ್ಟೇ ಕುಗ್ಗುತ್ತಿದ್ದ ಸಾರ್ವಜನಿಕ ಬ್ಯಾಂಕ್ ಗಳ ಮೇಲೆ ಮುದ್ರಾ ಯೋಜನೆಯ ಸಾಲ ಇನ್ನಷ್ಟು ತ್ರಾಸು ನೀಡಿದೆ.
ಈ ಬಗ್ಗೆ ಸ್ವತಃ ಆರ್ಥಿಕ ಸಚಿವಾಲಯದ ದತ್ತಾಂಶಗಳು ಮಾಹಿತಿ ಬಯಲು ಮಾಡಿವೆ. ಮುದ್ರಾ ಎಂಬುದು ಸ್ವಂತ ಉದ್ಯೋಗ ಮಾಡಿಕೊಳ್ಳುವ ಸಲುವಾಗಿ ಜಾರಿಗೆ ತಂದಿರುವ ಪ್ರಧಾನ ಮಂತ್ರಿಗಳ ಮಹತ್ವಾಕಾಂಕ್ಷಿ ಸಾಲ ನೀಡಿಕೆ ಯೋಜನೆ. 2016-17ರಲ್ಲಿ ದಾಖಲಾದ ಅನುತ್ಪಾದಕ ಸಾಲದ ಮೊತ್ತ 3,790.35 ಕೋಟಿಯಾದರೆ, ಅದು 2017-18ರ ಸಾಲಿಗೆ 7,277.31 ಕೋಟಿಗೆ ಏರಿಕೆ ಆಗಿದೆ.
ಮೋದಿಯವರ ಮುದ್ರಾ ಯೋಜನೆಯ ಯಶಸ್ಸಿನ ಜಾಡು
ಈ ಅವಧಿಯಲ್ಲಿ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳು ಮುದ್ರಾ ಯೋಜನೆ ಅಡಿ ನೀಡಿದ ಸಾಲ 22% ಹೆಚ್ಚಳವಾಗಿದ್ದು 2017-18ನೇ ಸಾಲಿನಲ್ಲಿ 92,492.69 ಕೋಟಿ ತಲುಪಿದೆ. ಇದೇ ಯೋಜನೆ ಅಡಿ 2016-17ನೇ ಸಾಲಿನಲ್ಲಿ 71,953.66 ಕೋಟಿ ರುಪಾಯಿ ಸಾಲ ನೀಡಲಾಗಿತ್ತು.
ಮೂರು ವರ್ಷಗಳ ಲೆಕ್ಕಾಚಾರ ಇಲ್ಲಿದೆ
ಕಳೆದ ಮೂರು ವರ್ಷಗಳಲ್ಲಿ ಪ್ರಧಾನಮಂತ್ರಿ ಮುದ್ರಾ ಯೋಜನೆ ಅಡಿ ಅನುತ್ಪಾದಕ ಆಸ್ತಿ ಆಗಿರುವ ಮೊತ್ತದ ಮಾಹಿತಿಯನ್ನು ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳು ತಿಳಿಸಿದ್ದು, ಅವುಗಳ ವಿವರ ಇಂತಿದೆ: 2015-16 596.72 ಕೋಟಿ, 2016-17 3,790.35 ಕೋಟಿ, 2017-18 7,277.31 ಕೋಟಿ. ಮಾರ್ಚ್ 31, 2018ರ ಅಂತ್ಯಕ್ಕೆ ಲೆಕ್ಕ ಹಾಕಿರುವ ಪ್ರಕಾರ ಬ್ಯಾಂಕ್ ಗಳು ವಿತರಿಸಿದ ಸಾಲದಲ್ಲಿ 3.48%ನಷ್ಟು ಅನುತ್ಪಾದಕ ಸಾಲವಾಗಿದೆ.
ಬಡ್ಡಿ ದರ ವಾರ್ಷಿಕ 8ರಿಂದ 12 ಪರ್ಸೆಂಟ್
ಪ್ರಧಾನಮಂತ್ರಿ ಮುದ್ರಾ ಯೋಜನಾ ಆರಂಭವಾಗಿದ್ದು ಏಪ್ರಿಲ್ 8, 2015ರಲ್ಲಿ. ಸಣ್ಣ ಪ್ರಮಾಣದಲ್ಲಿ ಸಾಲ ಪಡೆಯುವವರಿಗೆ, ಆದಾಯ ಉತ್ಪಾದನೆ ಚಟುವಟಿಕೆಗಳಿಗೆ ಕೃಷಿಯೇತರ ವಲಯಗಳಿಗೆ ಬ್ಯಾಂಕ್ ಗಳು ಹಾಗೂ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ನೀಡುವುದೇ ಮುದ್ರಾ ಸಾಲ. 2017-18ರಲ್ಲಿ ಮುದ್ರಾ ಸಾಲ ಯೋಜನೆ ಅಡಿ 2.53 ಲಕ್ಷ ಕೋಟಿ ನೀಡಲಾಗಿದೆ. 2016-17ರಲ್ಲಿ ಈ ಪ್ರಮಾಣ 1.80 ಲಕ್ಷ ಕೋಟಿ ರುಪಾಯಿ. ಮುದ್ರಾ ಸಾಲದ ಮೇಲಿನ ಬಡ್ಡಿ ದರ ವಾರ್ಷಿಕ 8ರಿಂದ 12 ಪರ್ಸೆಂಟ್. ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳು ಹೊರತುಪಡಿಸಿ ಖಾಸಗಿ ಬ್ಯಾಂಕ್ ಗಳು, ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಮತ್ತು ಇತರ ಸಂಸ್ಥೆಗಳು ಸಹ ಮುದ್ರಾ ಯೋಜನೆ ಅಡಿ ಸಾಲ ನೀಡುತ್ತವೆ.
ಮೋದಿ ಸರ್ಕಾರಕ್ಕೆ 4ರ ಸಂಭ್ರಮ, ಟಾಪ್ 15ಯೋಜನೆಗಳು
ವಾಹನ ಖರೀದಿಗೆ ನೀಡಿದ ಸಾಲ ಬಹುತೇಕ ಹಿಂತಿರುಗಿವೆ
ಇನ್ನು ಸಾಲ ಮರುಪಾವತಿ ವಿಚಾರಕ್ಕೆ ಬಂದಾಗ ಆಟೋಮೊಬೈಲ್ ಸಾಲಗಳು ಹಾಗೂ ಎಲೆಕ್ಟ್ರಿಕ್ ರಿಕ್ಷಾ ಸಾಲಗಳು ಮುದ್ರಾ ಯೋಜನೆಯಡಿ ಉತ್ತಮ ಆಯ್ಕೆಗಳಾಗಿವೆ. ಕೃಷಿಯೇತರ ಚಟುವಟಿಕೆ ಮೂಲಕ ಆದಾಯ ಸಿಗಲಿ ಎಂಬ ಕಾರಣಕ್ಕೆ ಈ ಮುದ್ರಾ ಯೋಜನೆ ತರಲಾಗಿದೆ. ಇದರಲ್ಲಿ ಬಹುತೇಕ ಉದ್ದೇಶಗಳಿಗೆ ಜಾಮೀನುದಾರರ ಅಗತ್ಯವಿಲ್ಲ. ಆಟೋ ಅಥವಾ ಟ್ಯಾಕ್ಸಿ ಖರೀದಿಗಾಗಿ ನೀಡುವ ಸಾಲ ಸುರಕ್ಷಿತವಾಗಿರುತ್ತದೆ. ಏಕೆಂದರೆ ಅವೇ ಅಡಮಾನ ಆಗಿರುತ್ತವೆ. ಆದರೆ ಉಳಿದ ಸಾಲಗಳ ವಿಚಾರಗಳಲ್ಲಿ ಅನುತ್ಪಾದಕ ಆಸ್ತಿ ಆಗುವ ಸಾಧ್ಯತೆಗಳು ಹೆಚ್ಚು.
ರಿಸರ್ವ್ ಬ್ಯಾಂಕ್ ನಿಯಮಾವಳಿಗಳೇ ಅನುಸರಿಸಲಾಗುತ್ತದೆ
ಪ್ರಧಾನಮಂತ್ರಿ ಮುದ್ರಾ ಸಾಲ ಯೋಜನೆಯ ಮರು ಪಾವತಿಯ ವಿಚಾರದಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್ ಗಳು ಪ್ರತ್ಯೇಕ ನಿಯಮವನ್ನೇನೂ ಅನುಸರಿಸುವುದಿಲ್ಲ. ಬ್ಯಾಂಕ್ ಮಂಡಳಿಯಿಂದ ಯಾವ ನಿಯಮ ಇದೆಯೋ ಅದನ್ನೇ ಅನುಸರಿಸಲಾಗುತ್ತದೆ. ಜತೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿಯಮಾವಳಿಗಳನ್ನು ಸಹ ಅನುಸರಿಸಲಾಗುತ್ತದೆ. ಅನುತ್ಪಾದಕ ಆಸ್ತಿ ಪ್ರಮಾಣವನ್ನು ನಿಯಮಿತವಾದ ಅವಧಿಯಲ್ಲಿ ಪರಿಶೀಲನೆ ನಡೆಸುತ್ತಾ ಬಾಕಿ ಇರುವ ಮೊತ್ತವನ್ನು ವಸೂಲಿ ಮಾಡಲಾಗುತ್ತದೆ ಎಂದು ಬ್ಯಾಂಕ್ ನ ಹಿರಿಯ ಅಧಿಕಾರಿಗಳು ಹೇಳುತ್ತಾರೆ.