14 ತಿಂಗಳಲ್ಲಿ 35,000 ಕೋಟಿ ರೂ ಸಾಲ ತೀರಿಸಿದ ಅಂಬಾನಿ
ಮುಂಬೈ, ಜೂನ್ 11: ಸಾಲದ ಹೊರೆಯಲ್ಲಿ ಸಿಲುಕಿರುವ ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ, ಆರ್ಥಿಕ ಬಿಕ್ಕಟ್ಟಿಂದ ಹೊರಬರಲು ಹೂಡಿಕೆದಾರರನ್ನು ಸೆಳೆಯಲು ಸತತ ಪ್ರಯತ್ನ ನಡೆಸಿದ್ದಾರೆ. ತಮ್ಮ ಎಲ್ಲ ಆರ್ಥಿಕ ಹೊರೆಗಳನ್ನು ಸಂಪೂರ್ಣವಾಗಿ ಪಾವತಿಸಲು ಬದ್ಧರಾಗಿದ್ದು, ಕಳೆದ 14 ತಿಂಗಳಿನಲ್ಲಿಯೇ 35 ಸಾವಿರ ಕೋಟಿ ರೂಪಾಯಿ ಸಾಲ ಮರುಪಾವತಿ ಮಾಡಿರುವುದಾಗಿ ಅವರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅನಿಲ್ ಅಂಬಾನಿ, ಸವಾಲಿನ ಪರಿಸ್ಥಿತಿ ನಡುವೆಯೂ ಮತ್ತು ಹಣಕಾಸುದಾರರಿಂದ ಯಾವುದೇ ಆರ್ಥಿಕ ಬೆಂಬಲ ಇಲ್ಲದೆಯೂ ರಿಲಯನ್ಸ್ ಸಮೂಹವು 2018ರ ಏಪ್ರಿಲ್ 1ರಿಂದ 2019ರ ಮೇ 31ರವರೆಗೆ 24,800 ಕೋಟಿ ರೂ ಅಸಲು ಮತ್ತು 10,600 ಕೋಟಿ ರೂ ಬಡ್ಡಿಯನ್ನು ತೀರಿಸಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಮೇಲೆ ಹೂಡಿದ್ದ ಕೇಸು ವಾಪಸ್ ಪಡೆಯಲಿದ್ದಾರೆ ಅನಿಲ್ ಅಂಬಾನಿ
ಅನಗತ್ಯವಾದ ವದಂತಿಗಳು, ಊಹಾಪೋಹಗಳು ಹರಿದಾಡುತ್ತಿವೆ. ಕಳೆದ ಕೆಲವು ವಾರಗಳಿಂದ ರಿಲಯನ್ಸ್ ಸಮೂಹದ ಕಂಪೆನಿಗಳ ಎಲ್ಲ ಷೇರುಗಳು ಬಿದ್ದುಹೋಗುತ್ತಿವೆ ಎಂದು ಹೇಳಲಾಗುತ್ತಿದೆ. ಈ ರೀತಿಯ ವದಂತಿ ನಮ್ಮ ಎಲ್ಲ ಷೇರುದಾರರಿಗೆ ಹಾನಿ ಉಂಟುಮಾಡಿದೆ ಎಂದು ಆರೋಪಿಸಿದ್ದಾರೆ.
ಈ 35 ಸಾವಿರ ಕೋಟಿ ರೂಪಾಯಿ ಸಾಲವು ರಿಲಯನ್ಸ್ ಕ್ಯಾಪಿಟಲ್, ರಿಲಯನ್ಸ್ ಪವರ್ ಮತ್ತು ರಿಲಯನ್ಸ್ ಇನ್ಫ್ರಾ ಹಾಗೂ ಅದಕ್ಕೆ ಸಂಬಂಧಿಸಿದ ಸಂಸ್ಥೆಗಳಿಗೆ ಸಂಬಂಧಿಸಿದ್ದಾಗಿದೆ.
ಎಲ್ಲ ಸಾಲ ತೀರಿಸಲು ಬದ್ಧ
ರಿಲಯನ್ಸ್ ಸಮೂಹವು ತನ್ನ ಎಲ್ಲ ಸಾಲಗಳನ್ನು ಕಾಲಕ್ಕನುಗುಣವಾಗಿ ಆಸ್ತಿ ನಗದೀಕರಣ ಯೋಜನೆಗಳ ಮೂಲಕ ತೀರಿಸಲು ಸಂಪೂರ್ಣವಾಗಿ ಬದ್ಧವಾಗಿದೆ. ಈಗಾಗಲೇ ವಿವಿಧ ಹಂತಗಳಲ್ಲಿ ಅದು ಜಾರಿಯಾಗುತ್ತಿದೆ ಎಂದು ಅಂಬಾನಿ ಅವರು ಹೂಡಿಕೆದಾರರು ಸಮೂಹದ ಮೇಲೆ ಪುನಃ ಭರವಸೆ ಇರಿಸುವಂತೆ ಕೋರಿದ್ದಾರೆ.
ನ್ಯಾಯಾಲಯದ ತೀರ್ಪುಗಳಿಂದ ಹಿನ್ನಡೆ
ಸಮೂಹದ ಕೆಲವು ಸಮಸ್ಯೆಗಳಿಗೆ ನಿಯಂತ್ರಣ ಸಂಸ್ಥೆಗಳು ಮತ್ತು ನ್ಯಾಯಾಲಯಗಳನ್ನು ದೂಷಿಸಿರುವ ಅನಿಲ್ ಅಂಬಾನಿ, ಸಮೂಹಕ್ಕೆ ಬರಬೇಕಿದ್ದ 30 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಬಾಕಿ ಹಾಗೆಯೇ ಉಳಿದುಕೊಳ್ಳಲು ನ್ಯಾಯಾಲಯದ ತೀರ್ಪುಗಳು ಹೊರಬರದಿರುವುದು ಎಂದು ಹೇಳಿದ್ದಾರೆ.
ರಾಹುಲ್ ಸರ್ಕಾರದಿಂದಲೇ 1 ಲಕ್ಷ ಕೋಟಿ ಗುತ್ತಿಗೆ ಪಡೆದಿದ್ದೇನೆ: ಅನಿಲ್ ಅಂಬಾನಿ
ಬ್ಯಾಂಕ್ಗಳಿಂದ ಸಾಲ ದೊರೆತಿಲ್ಲ
ಅತ್ಯಂತ ಸವಾಲಿನ ಹಣಕಾಸು ವಾತಾವರಣದಲ್ಲಿ ಮತ್ತು ಸಾಕಷ್ಟು ಅಡ್ಡಿ ಆತಂಕಗಳ ನಡುವೆಯೇ 35 ಸಾವಿರ ಕೋಟಿ ರೂ ಸಾಲ ಮರುಪಾವತಿ ಮಾಡಲಾಗಿದೆ. ಕಳೆದ 14 ತಿಂಗಳ ಅವಧಿಯಲ್ಲಿ ಬ್ಯಾಂಕುಗಳು, ಮ್ಯೂಚುವಲ್ ಫಂಡ್ಗಳು, ವಿಮಾ ಕಂಪೆನಿಗಳು, ಭವಿಷ್ಯ ನಿಧಿ ಅಥವಾ ಎನ್ಬಿಎಫ್ಸಿಗಳು ಸೇರಿದಂತೆ ಯಾವ ಹಣಕಾಸು ಸಂಸ್ಥೆಗಳೂ ರಿಲಯನ್ಸ್ ಸಮೂಹಕ್ಕೆ ಯಾವುದೇ ಹೆಚ್ಚುವರಿ ಆರ್ಥಿಕ ಸಹಾಯ, ಸಾಲ ನೀಡಿಲ್ಲ ಎಂದು ತಿಳಿಸಿದ್ದಾರೆ.
ಸಂಪತ್ತು ನಗದೀಕರಣ
35 ಸಾವಿರ ಕೋಟಿ ರೂ,ಗೂ ಅಧಿಕ ಸಾಲದ ಮೊತ್ತವನ್ನು ಬಹುತೇಕ ಸಂಪೂರ್ಣವಾಗಿ ಆಸ್ತಿ ನಗದೀಕರಣದ ಮೂಲಕವೇ ತೀರಿಸಲಾಗಿದೆ. ಹಣಕಾಸು ವ್ಯವಸ್ಥೆಯಿಂದ ಯಾವುದೇ ಬೆಂಬಲ ಸಿಗದ ದಯನೀಯ ಸ್ಥಿತಿಯ ಮುಂದುವರಿಕೆಯು ಸಾಲದಾರರ ಹಿತಾಸಕ್ತಿಗಳಿಗೇ ಧಕ್ಕೆ ತಂದಿದೆ. ಸಾಲದ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸಿ, ಬಂಡವಾಳವನ್ನು ಹೆಚ್ಚಿಸುವ, ಈಕ್ವಿಟಿಯ ಮರಳಿಸುವಿಕೆಯನ್ನು ವೃದ್ಧಿಸುವ ಹಾಗೂ ಷೇರುದಾರರ ಮೌಲ್ಯವನ್ನು ಹೆಚ್ಚಿಸುವ ವಿಶ್ವಾಸವಿದೆ ಎಂದಿದ್ದಾರೆ.
ಮೋದಿಯಿದ್ದರೆ ಇದೆಲ್ಲ ಸಾಧ್ಯ: ಅಂಬಾನಿ ಸಾಲಮನ್ನಾಕ್ಕೆ ಕಾಂಗ್ರೆಸ್ ಟೀಕೆ