ಉದ್ಯೋಗಿ ಬಳಿ ಉದ್ದೋಉದ್ದಕ್ಕೆ ಕ್ಷಮೆ ಕೇಳಿದ ಟೆಕ್ ಮಹೀಂದ್ರ
ಬೆಂಗಳೂರು, ಜುಲೈ 8: ಮಹೀಂದ್ರ ಗ್ರೂಪ್ ನ ಕಾರ್ಯನಿರ್ವಾಹಕ ಅಧ್ಯಕ್ಷ ಆನಂದ್ ಮಹೀಂದ್ರ, ಟೆಕ್ ಮಹಿಂದ್ರಾದ ಉಪಾಧ್ಯಕ್ಷರಾದ ವಿನೀತ್ ನಯ್ಯರ್ ಮತ್ತು ಸಿಇಒ ಸಿಪಿ ಗುರ್ನಾನಿ ಈ ಮೂವರು ವೈಯಕ್ತಿಕವಾಗಿ ತಮ್ಮದೇ ಕಂಪೆನಿಯ ಉದ್ಯೋಗಿಯ ಬಳಿ ಕ್ಷಮೆ ಯಾಚಿಸಿದ್ದಾರೆ.
ಟೆಕ್ ಮಹೀಂದ್ರ ಕಂಪೆನಿಯ ಉದ್ಯೋಗಿಯೊಬ್ಬರಿಗೆ ಕರೆ ಮಾಡಿದ್ದ ಮಾನವ ಸಂಪನ್ಮೂಲ (ಎಚ್ ಆರ್) ವಿಭಾಗದವರು ತಕ್ಷಣವೇ ಕೆಲಸಕ್ಕೆ ರಾಜೀನಾಮೆ ನೀಡುವಂತೆ ಕೇಳಿದ್ದರು. ಅದರ ರೆಕಾರ್ಡೆಡ್ ಆಡಿಯೋ ತುಣುಕು ಶುಕ್ರವಾರ ಎಲ್ಲೆಡೆ ಹರಿದಾಡಿತ್ತು.
ಉದ್ಯೋಗಿಗೆ ಪಿಂಕ್ ಸ್ಲಿಪ್, ವೈರಲ್ ಆಗಿದೆ ಆಡಿಯೋ ತುಣುಕು
"ನಾನು ವೈಯಕ್ತಿಕವಾಗಿ ಕ್ಷಮೆ ಕೇಳುತ್ತಿದ್ದೇನೆ. ನಮ್ಮ ಮೌಲ್ಯಗಳಲ್ಲೇ ವೈಯಕ್ತಿಕ ಗೌರವ ಕಾಪಾಡುವುದು ಸಹ ಒಳಗೊಂಡಿದೆ. ಇನ್ನು ಭವಿಷ್ಯದಲ್ಲಿ ಹೀಗೆ ಆಗುವುದಿಲ್ಲ ಎಂದು ಖಾತ್ರಿ ಕೊಡ್ತೀನಿ" ಎಂದು ಟ್ವೀಟ್ ಮಾಡಲಾಗಿದೆ.
ಸಂಭಾಷಣೆ ನಡೆದ ರೀತಿಗೆ ತೀವ್ರ ವಿಷಾದ ವ್ಯಕ್ತಪಡಿಸಿರುವ ಗುರ್ನಾನಿ, ಭವಿಷ್ಯದಲ್ಲಿ ಹೀಗಾಗದ ರೀತಿಯಲ್ಲಿ ಕ್ರಮ ತೆಗೆದುಕೊಂಡಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ. ಯಾವ ಉದ್ಯೋಗಿಯ ಜತೆಗೆ ಆ ರೀತಿ ಮಾತನಾಡಲಾಯಿತು ಎಂಬ ಮಾಹಿತಿ ಬಹಿರಂಗವಾಗಿಲ್ಲ.
"ಕಂಪನಿಯಲ್ಲಿ ಕಾಸ್ಟ್ ಆಪ್ಟಿಮೈಸೇಷನ್ ನಡೆಯುತ್ತಿದೆ. ರಾಜೀನಾಮೆ ಪಡೆಯುತ್ತಿರುವವ ಉದ್ಯೋಗಿಗಳ ಪಟ್ಟಿಯಲ್ಲಿ ನಿಮ್ಮ ಹೆಸರೂ ಇದೆ. ನಾಳೆ ಬೆಳಿಗ್ಗೆ 10 ಗಂಟೆಯೊಳಗೆ ನೀವಾಗಿಯೇ ರಾಜೀನಾಮೆ ನೀಡಿದರೆ, ನಿಮ್ಮನ್ನು ಗೌರವಯುತವಾಗಿ ಕಳಿಸಿಕೊಡಲಾಗುತ್ತದೆ. ಇಲ್ಲದಿದ್ದರೆ, ನಿಮ್ಮನ್ನು ಕೆಲಸದಿಂದ ತೆಗೆದುಹಾಕಲಾಗುತ್ತದೆ. ಹೀಗಾದರೆ ನಿಮಗೆ ಯಾವ ಲಾಭವೂ ಸಿಗುವುದಿಲ್ಲ..." ಎಂದು ಎಚ್ ಆರ್ ನವರು ಹೇಳಿದ್ದರು.