ಕೊವಿಡ್ 19 ನಡುವೆ ಲಾಭ ಗಳಿಸಿದ ಶ್ರೀ ಚರಣ್ ಸೌಹಾರ್ದ ಬ್ಯಾಂಕ್
ಬೆಂಗಳೂರು, ನ 22: ಕೊವಿಡ್ 19 ಸಂದರ್ಭದಲ್ಲಿ ವಿಶ್ವದೆಲ್ಲೆಡೆ ಆರ್ಥಿಕ ಸಂಕಷ್ಟ ಮುಂದುವರೆದಿದೆ. ಆದರೆ, ಶ್ರೀ ಚರಣ್ ಸೌಹಾರ್ದ ಸಹಕಾರ ಬ್ಯಾಂಕ್ ನಿಯಮಿತ 2019-20 ನೇ ಹಣಕಾಸು ಸಾಲಿನಲ್ಲಿ 159.30 ಲಕ್ಷ ರೂಪಾಯಿಗಳ ನಿವ್ವಳ ಲಾಭ ದಾಖಲಿಸಿದೆ.
ಬ್ಯಾಂಕಿನ ಈ ಸಾಧನೆ ಮತ್ತು ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿರುವ ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷ ಬಿ.ವಿ.ದ್ವಾರಕನಾಥ್ ಅವರು, ''2019-20 ನೇ ಹಣಕಾಸು ಸಾಲಿನಲ್ಲಿ ಬ್ಯಾಂಕು ತನ್ನ 10 ಶಾಖೆಗಳಲ್ಲಿ ಷೇರು ಬಂಡವಾಳ, ಠೇವಣಾತಿಯ ಸಂಗ್ರಹ, ಸದಸ್ಯರಿಗೆ ಸಮಗ್ರ ರೀತಿಯಲ್ಲಿ ಸಾಲಗಳ ವಿತರಣೆ ಮತ್ತು ಹೂಡಿಕೆಗಳ ನಿರ್ವಹಣೆ ಸೇರಿದಂತೆ ಭಾರತೀಯ ರಿಸರ್ವ್ ಬ್ಯಾಂಕ್ ನಿಗದಿಪಡಿಸಿರುವ ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದೆ'' ಎಂದರು.
2020 ರ ಮಾರ್ಚ್ ಅಂತ್ಯಕ್ಕೆ ಕೊನೆಗೊಂಡ 2019-20 ನೇ ಸಾಲಿನಲ್ಲಿ ಷೇರು ಬಂಡವಾಳದೊಂದಿಗೆ 4459.65 ಲಕ್ಷ ರೂಪಾಯಿಗಳಷ್ಟು ಸ್ವಂತ ನಿಧಿಯನ್ನು ಕ್ರೋಢೀಕರಿಸಿದೆ ಮತ್ತು 72,417.26 ಲಕ್ಷ ರೂಪಾಯಿಯಷ್ಟು ದುಡಿಯುವ ಬಂಡವಾಳದೊಂದಿಗೆ ಪ್ರಗತಿಪಥದೆಡೆಗೆ ಸಾಗಿದೆ ಎಂದು ಹೇಳಿದರು.
ವಿಶ್ವದಾದ್ಯಂತ ಕೊರೋನಾ ವೈರಸ್ ನ ಪರಿಣಾಮದಿಂದ ತೀವ್ರ ಸಂಕಷ್ಟ ಎದುರಾಗಿದೆ. ಆರ್ಥಿಕ ಕ್ಷೇತ್ರದ ಮೇಲೆ ಇದರ ಪರಿಣಾಮ ಸಾಕಷ್ಟು ಆಗಿದೆ. ಆದರೆ, ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿಯೂ ನಮ್ಮ ಬ್ಯಾಂಕ್ 1,59,30,000 ರೂಪಾಯಿಗಳ ನಿವ್ವಳ ಲಾಭವನ್ನು ಗಳಿಸಿರುವುದು ನಮಗೆಲ್ಲರಿಗೂ ಸಂತಸವನ್ನುಂಟು ಮಾಡಿದೆ ಎಂದು ಹೇಳಿದರು.
ಬ್ಯಾಂಕಿನ ಈ ಅಭೂತಪೂರ್ವವಾದ ಸಾಧನೆಗೆ ನಮ್ಮ ನೆಚ್ಚಿನ ಗ್ರಾಹಕರು, ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ, ಅಧಿಕಾರಿಗಳು ಮತ್ತು ಹಿತೈಷಿಗಳು ಕಾರಣರಾಗಿದ್ದಾರೆ. ಅವರಿಗೆ ನಮ್ಮ ಬ್ಯಾಂಕಿನ ವತಿಯಿಂದ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ಹೇಳಿದರು.
Recommended Video