ಐಸಿಐಸಿಐ ಬ್ಯಾಂಕ್ ಹಗರಣ; ಚಂದಾ ಕೊಚ್ಚರ್ ಎಲ್ಲ ಆಸ್ತಿಗಳ ಬಗ್ಗೆ ತನಿಖೆ
ಮುಂಬೈ, ಸೆಪ್ಟೆಂಬರ್ 3: ಐಸಿಐಸಿಐ ಬ್ಯಾಂಕ್ ನ ಸಿಇಒ ಆಗಿ ಅಧಿಕಾರ ಸ್ವೀಕರಿಸಿದ ದಿನದಿಂದ ಚಂದಾ ಕೊಚ್ಚರ್ ಕುಟುಂಬ ನಡೆಸಿದ ಎಲ್ಲ ಆಸ್ತಿ ವ್ಯವಹಾರಗಳ ಬಗ್ಗೆ ತನಿಖೆ ನಡೆಸಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಐಸಿಐಸಿಐ ಬ್ಯಾಂಕ್ ನ ಆಡಳಿತ ಮಂಡಳಿಯು ನ್ಯಾ.ಬಿ.ಎನ್.ಶ್ರೀಕೃಷ್ಣ ಅವರ ಬಳಿ ಮನವಿ ಮಾಡಿ, ಬ್ಯಾಂಕ್ ನ ಸಿಇಒ ಆಗಿದ್ದ ಚಂದಾ ಕೊಚ್ಚರ್ ವಿರುದ್ಧದ ಎಲ್ಲ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ಕೇಳಿಕೊಂಡಿದೆ.
ಚಂದಾ ಕೊಚ್ಚರ್ ಐಸಿಐಸಿಐ ಬ್ಯಾಂಕ್ ನ ಸಿಇಒ ಆದ ನಂತರ ಆಕೆಯ ಕುಟುಂಬ ಖರೀದಿಸಿದ ಆಸ್ತಿಗಳ ಮೌಲ್ಯವನ್ನು ಪರಿಶೀಲಿಸಿ, ಅವುಗಳನ್ನು ಮಾರುಕಟ್ಟೆ ಮೌಲ್ಯಕ್ಕಿಂತ ಕಡಿಮೆ ಬೆಲೆ ಅಥವಾ ರಿಯಾಯಿತಿ ದರದಲ್ಲಿ ಪಡೆದಿದ್ದಾರೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಲು ಕೇಳಿಕೊಳ್ಳಲಾಗಿದೆ.
ಐಸಿಐಸಿಐ ಬ್ಯಾಂಕ್ 2,810 ಕೋಟಿ ಎನ್ ಪಿಎ ಕೇಸಿನ ಥ್ರಿಲ್ಲಿಂಗ್ ಡೀಟೇಲ್ಸ್!
ಇನ್ನು ಕೊಚ್ಚರ್ ವಿರುದ್ಧದ ಆರೋಪದ ಬಗ್ಗೆ ತನಿಖೆ ನಡೆಸುತ್ತಿರುವ ಶ್ರೀಕೃಷ್ಣ, ಕೊಚ್ಚರ್ ಕುಟುಂಬದವರಿಗೆ ಮಾರಾಟ ಮಾಡಿದ ಬಿಲ್ಡರ್ ಗಳು ಅಥವಾ ಆಸ್ತಿ ಮಾರಾಟಗಾರರಿಗೆ ಐಸಿಐಸಿಐ ಬ್ಯಾಂಕ್ ನೊಂದಿಗಿಂತ ಬ್ಯಾಂಕಿಂಗ್ ನಂಟು, ಸಾಲದ ನಿಯಮಾವಳಿಗಳು ಅಥವಾ ದೊರೆತ ಬ್ಯಾಂಕಿಂಗ್ ಅನುಕೂಲಗಳು ಬಗ್ಗೆ ಕೂಡ ಪರಿಶೀಲನೆ ಮಾಡುತ್ತಾರೆ.
2009ರಲ್ಲಿ ಐಸಿಐಸಿಐ ಬ್ಯಾಂಕ್ ಸಿಇಒ ಆಗಿ ಅಧಿಕಾರ
"ಅದು ನಿಜ. ಆಕೆ ವಿರುದ್ಧ ಬಂದಿರುವ ಹಲವು ಆರೋಪಗಳ ಬಗ್ಗೆ ನಾನು ತನಿಖೆ ನಡೆಸುತ್ತಿದ್ದೇನೆ" ಎಂದು ನ್ಯಾ.ಶ್ರೀಕೃಷ್ಣ ತಿಳಿಸಿದ್ದಾರೆ. ಚಂದಾ ಕೊಚ್ಚರ್ 2009ರಲ್ಲಿ ಐಸಿಐಸಿಐ ಬ್ಯಾಂಕ್ ಸಿಇಒ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಬ್ಯಾಂಕ್ ನ ನಿಯಮಾವಳಿ ಉಲ್ಲಂಘಿಸಿ ಕೆಲವರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂಬ ಬಗ್ಗೆ ಸಿಇಒ ಚಂದಾ ಕೊಚ್ಚರ್ ವಿರುದ್ಧ ಆರೋಪ ಕೇಳಿಬಂದಿತ್ತು.
ಸ್ವತಂತ್ರ ವಿಚಾರಣೆಯೊಂದಕ್ಕೆ ಆದೇಶ
ಆ ಮೇಲೆ ಐಸಿಐಸಿಐ ಬ್ಯಾಂಕ್ ಆಡಳಿತ ಮಂಡಳಿಯು ಆಕೆ ವಿರುದ್ಧ ಸ್ವತಂತ್ರ ವಿಚಾರಣೆಯೊಂದಕ್ಕೆ ಆದೇಶ ನೀಡಿತ್ತು. ಕೊಚ್ಚರ್ ವಿರುದ್ಧ ಹಿತಾಸಕ್ತಿ ಸಂಘರ್ಷದ ಆರೋಪ ಕೇಳಿಬಂದಿತ್ತು. ಐಸಿಐಸಿಐ ಬ್ಯಾಂಕ್ ನ ಷೇರುದಾರರೊಬ್ಬರು ಹಾಗೂ ಉದ್ಯೋಗಿಯೊಬ್ಬರು ಚಂದಾ ಕೊಚ್ಚರ್ ವಿರುದ್ಧ ಆರೋಪ ಮಾಡಿದ್ದರು. ಆಕೆ ಇದ್ದ ಬ್ಯಾಂಕ್ ನ ಸಾಲ ಸಮಿತಿಯು 2012ರಲ್ಲಿ ವೀಡಿಯೋಕಾನ್ ಸಮೂಹಕ್ಕೆ ಮಂಜೂರು ಮಾಡಿದ್ದ 3,250 ಕೋಟಿ ಸಾಲದ ಬಗ್ಗೆ ಕೊಚ್ಚರ್ ವಿರುದ್ಧ ಆರೋಪ ಮಾಡಿದ್ದರು.
ಚಂದಾ ಕೊಚ್ಚರ್ ಪತಿ ಜತೆಗೆ ಅನುಮಾನಾಸ್ಪದ ವ್ಯವಹಾರ
ವೀಡಿಯೋಕಾನ್ ಸಮೂಹದ ವೇಣುಗೋಪಾಲ್ ಧೂತ್ ಹಾಗೂ ಚಂದಾ ಕೊಚ್ಚರ್ ಪತಿ ದೀಪಕ್ ಮಧ್ಯೆ ಅನುಮಾನಾಸ್ಪದ ವ್ಯವಹಾರ ನಡೆದ ಬಗ್ಗೆ ದೂರಿದೆ. ಆದರೆ ಇದನ್ನು ಚಂದಾ ಕೊಚ್ಚರ್ ನಿರಾಕರಿಸಿದ್ದಾರೆ. ಐಸಿಐಸಿಐ ಬ್ಯಾಂಕ್ ನಿಂದ ವೀಡಿಯೋಕಾನ್ ಸಮೂಹಕ್ಕೆ ಸಾಲ ಮಂಜೂರು ಮಾಡಿಕೊಡುವ ಸಲುವಾಗಿ ಚಂದಾ ಕೊಚ್ಚರ್ ತಮ್ಮ ಪತಿಯ ಮೂಲಕ ಅನುಕೂಲ ಪಡೆದುಕೊಂಡಿದ್ದಾರೆ ಎಂಬುದು ಆರೋಪ.
ಎರಡೂವರೆ ತಿಂಗಳಲ್ಲಿ ತನಿಖಾ ವರದಿ ಬರುತ್ತದೆ
ಇನ್ನು ಐಸಿಐಸಿಐ ಬ್ಯಾಂಕ್ ನಿಂದ ಯಾವ ಸಂಸ್ಥೆಗಳಿಗೆ ಸಾಲ ನೀಡಲಾಗಿದೆಯೋ ಅಂಥ ಸಂಸ್ಥೆಗಳಿಂದ ರಿಯಾಯಿತಿ ದರದಲ್ಲಿ ಚಂದಾ ಕೊಚ್ಚರ್ ಆಸ್ತಿ ಖರೀದಿ ಮಾಡಿದ್ದಾರೆ ಎಂಬ ಆರೋಪ ಸಹ ಇದೆ. ಈ ಎಲ್ಲದರ ಬಗ್ಗೆ ಇದೀಗ ತನಿಖೆ ನಡೆಯಲಿದೆ. ಇನ್ನು ಎರಡೂವರೆ ತಿಂಗಳಲ್ಲಿ ಶ್ರೀಕೃಷ್ಣ್ ಸಮಿತಿಯು ವರದಿ ನೀಡುತ್ತದೆ ಎಂದು ಐಸಿಐಸಿಐ ಬ್ಯಾಂಕ್ ಅಧ್ಯಕ್ಷ ಜಿ.ಸಿ.ಚತುರ್ವೇದಿ ಹೇಳಿದ್ದಾರೆ.