ಬ್ಯಾಂಕ್ ವಿಲೀನ ವಿರೋಧಿಸಿ, ಅಕ್ಟೋಬರ್ 22ರಂದು ಮುಷ್ಕರಕ್ಕೆ ಕರೆ
ನವದೆಹಲಿ, ಅಕ್ಟೋಬರ್ 20: ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ವಿಲೀನವನ್ನು ವಿರೋಧಿಸಿ ಬ್ಯಾಂಕ್ ಸಿಬ್ಬಂದಿಗಳ ಒಕ್ಕೂಟ ಮುಷ್ಕರಕ್ಕೆ ಕರೆ ನೀಡಿವೆ ಎಂದು ಬ್ಯಾಂಕ್ ಒಕ್ಕೂಟಗಳು ಭಾನುವಾರದಂದು ಖಚಿತಪಡಿಸಿವೆ.
ದೇಶದ 10 ಪ್ರಮುಖ ಬ್ಯಾಂಕ್ ಗಳನ್ನು ವಿಲೀನ ಪ್ರಕ್ರಿಯೆಗೆ ಒಳಪಡಿಸಲಾಗುತ್ತಿದ್ದು, ನಾಲ್ಕು ಬ್ಯಾಂಕ್ ಗಳಾಗಲಿವೆ. ಈ ವಿಲೀನ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ದೇಶದಲ್ಲಿ 12 ಸಾರ್ವಜನಿಕ ವಲಯದ ಬ್ಯಾಂಕ್ ಗಳು ಮಾತ್ರ ಕಾರ್ಯನಿರ್ವಹಿಸಲಿವೆ. 2017ರಲ್ಲಿ 27 ಸಾರ್ವಜನಿಕ ವಲಯ ಬ್ಯಾಂಕ್ ಗಳಿದ್ದವು.
All India Bank Employees Association (AIBEA) and Bank Employees Federation of India (BEFI) have called an all-India bank strike on October 22 in protest against the mergers of 10 public sector banks.
— ANI (@ANI) October 20, 2019
ಸೆಪ್ಟೆಂಬರ್ ತಿಂಗಳ ಅಂತ್ಯದಲ್ಲಿ ಮುಷ್ಕರ ನಡೆಯುವ ಸಾಧ್ಯತೆಯಿತ್ತು. ಆದರೆ ಕೇಂದ್ರ ಹಣಕಾಸು ಕಾರ್ಯದರ್ಶಿ ರಾಜೀವ್ ಕುಮಾರ್ ಅವರು ನೀಡಿದ ಭರವಸೆ ಮೇರೆಗೆ ಎರಡು ದಿನಗಳ ಬಂದ್ ಮುಂದೂಡಲಾಗಿತ್ತು.
ಆದರೆ, ಈಗ ಅಕ್ಟೋಬರ್ 22ರಂದು ಮುಷ್ಕರಕ್ಕೆ ಮತ್ತೊಮ್ಮೆ ಕರೆ ನೀಡಲಾಗಿದೆ. ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘಟನೆ(AIBOC), ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ(AIIBOA), ಭಾರತೀಯ ರಾಷ್ಟ್ರೀಯ ಬ್ಯಾಂಕ್ ಅಧಿಕಾರಿಗಳ ಕಾಂಗ್ರೆಸ್(INBOC), ಬ್ಯಾಂಕ್ ಅಧಿಕಾರಿಗಳ ರಾಷ್ಟ್ರೀಯ ಸಂಘಟನೆ(NOBO)ಯ ವತಿಯಿಂದ ಮುಷ್ಕರಕ್ಕೆ ಕರೆ ನೀಡಲಾಗಿದೆ.
ಕೇಂದ್ರ ಸರ್ಕಾರವು ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ನವೆಂಬರ್ ಎರಡನೇ ವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘಟನೆಯ ಪ್ರಧಾನ ಕಾರ್ಯದರ್ಶಿ ದೀಪಲ್ ಕುಮಾರ್ ಶರ್ಮಾ ಘೋಷಿಸಿದ್ದಾರೆ.
ಈ ಹಿಂದೆ ಬ್ಯಾಂಕ್ ಆಫ್ ಬರೋಡಾ, ವಿಜಯ ಬ್ಯಾಂಕ್ ಹಾಗೂ ದೇನಾ ಬ್ಯಾಂಕ್ ವಿಲೀನವಾಗಿದ್ದು, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ವಿಲೀನದ ಬಳಿಕ ಸಿಬ್ಬಂದಿಗಳನ್ನು ಕೆಲಸದಿಂದ ತೆಗೆದು ಹಾಕಿಲ್ಲ, ಹೀಗಾಗಿ, ಈಗ 10 ಬ್ಯಾಂಕ್ ವಿಲೀನದ ಬಳಿಕ ಹೊರ ಹೊಮ್ಮುವ 4 ಬ್ಯಾಂಕ್ ಗಳ ಉದ್ಯೋಗಿಗಳು ಸೇರಿದಂತೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಕಡಿತದ ಭೀತಿ ಬೇಡ" ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.