ವಿಶೇಷ: ಭಾರತೀಯ ಬ್ಯಾಂಕ್ಗಳಿಗೆ ₹1.47 ಲಕ್ಷ ಕೋಟಿ ಸಾಲ ಬಾಕಿ..!
ಬೆಂಗಳೂರು, ಜುಲೈ 20: ದೇಶದ ಆರ್ಥಿಕ ವಲಯದಲ್ಲಿ ಮೊದಲ ಮಹಾ ಕ್ರಾಂತಿ ನಡೆದು ಬರೋಬ್ಬರಿ 51 ವರ್ಷ ಘಟಿಸಿದೆ. ಬ್ಯಾಂಕ್ಗಳ ರಾಷ್ಟ್ರೀಕರಣದ 51ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಬ್ಯಾಂಕ್ ನೌಕರರ ಸಂಘದಿಂದ ಸಾಲಗಾರರ ಪಟ್ಟಿ ಬಿಡುಗಡೆಯಾಗಿದೆ.
ಈ ಪಟ್ಟಿಯಲ್ಲಿ ಒಟ್ಟು 2,426 ಸಾಲದ ಕುಳಗಳ ಹೆಸರು ಪ್ರಸ್ತಾಪಿಸಲಾಗಿದೆ. ಬಹುದೊಡ್ಡ ಮೊತ್ತದ ಸಾಲ ಬಾಕಿ ಉಳಿಸಿಕೊಂಡಿರುವ ದೊಡ್ಡ ದೊಡ್ಡ ತಿಮಿಂಗಿಲಗಳು ಈ ಪಟ್ಟಿಯಲ್ಲಿದ್ದಾರೆ. ಅಷ್ಟಕ್ಕೂ ಇವರೆಲ್ಲಾ ಬಾಕಿ ಇಟ್ಟುಕೊಂಡಿರುವ ಸಾಲದ ಮೊತ್ತ ಒಂದೆರಡು ಕೋಟಿಯಲ್ಲ, ಬರೋಬ್ಬರಿ 1,47,350 ಕೋಟಿ ರೂಪಾಯಿ.
ಉದ್ದೇಶಪೂರ್ವಕ ಸುಸ್ತಿದಾರರ ಪಟ್ಟಿಯಲ್ಲಿ ಮೆಹುಲ್ ಚೋಕ್ಸಿ ನಂ.1
ಸರಿಯಾಗಿ ಈ ಅಂಕಿಗಳನ್ನ ಓದೋದಕ್ಕೆ ಕೆಲ ಸೆಕೆಂಡ್ಗಳು ಬೇಕೆ ಬೇಕು. ಇವರೆಲ್ಲಾ ಅಷ್ಟು ದೊಡ್ಡ ಮೊತ್ತದ ಸಾಲವನ್ನ ಬಾಕಿ ಉಳಿಸಿಕೊಂಡಿದ್ದಾರೆ. ಅಷ್ಟಕ್ಕೂ ಈ ಪಟ್ಟಿಯಲ್ಲಿ ಪ್ರಸ್ತಾಪ ಮಾಡಿರುವವರು ಉದ್ದೇಶಪೂರ್ವಕವಾಗಿ ಸಾಲ ತೀರಿಸದೆ ಇರುವವರು. ಈ ಮೂಲಕ ಬ್ಯಾಂಕ್ಗಳಿಗೆ ನಾಮ ಹಾಕಿದವರು. ಹೀಗೆ ಲಕ್ಷಾಂತರ ಕೋಟಿ ಮೋಸ ಮಾಡಿರುವವರ ಪಟ್ಟಿಯನ್ನ, ಬ್ಯಾಂಕ್ಗಳ ರಾಷ್ಟ್ರೀಕರಣದ ವಾರ್ಷಿಕೋತ್ಸವ ನೆನಪಲ್ಲಿ ಬ್ಯಾಂಕ್ ನೌಕರರ ಸಂಘ ರಿವೀಲ್ ಮಾಡಿದೆ.
ರಾತ್ರೋ ರಾತ್ರಿ ಖಾಸಗಿ ಬ್ಯಾಂಕ್ಗಳು ವಶಕ್ಕೆ..!
ಅದು ಜುಲೈ 19, 1969ರ ರಾತ್ರಿ. ಆದರೆ ಮರುದಿನ ಬೆಳಗ್ಗೆ ದೇಶದಲ್ಲಿ ಮಹತ್ವದ ಬೆಳವಣಿಗೆಯೊಂದು ಘಟಿಸಲಿದೆ ಅನ್ನೋದು ಜನ ಸಾಮಾನ್ಯರಿಗೆ ಗೊತ್ತೇ ಇರಲಿಲ್ಲ. ಅಂದಿನ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಸುಗ್ರೀವಾಜ್ಞೆ ಮೂಲಕ 50 ಕೋಟಿ ರೂಪಾಯಿಗೂ ಹೆಚ್ಚಿನ ಠೇವಣಿ ಇರುವ 14 ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡಿದ್ದರು. ಅರ್ಥಾತ್ ಒಟ್ಟು 14 ಖಾಸಗಿ ಬ್ಯಾಂಕ್ಗಳನ್ನ ಸರ್ಕಾರದ ಒಡೆತನಕ್ಕೆ ತಂದಿದ್ದರು. ಬಳಿಕ ರಾಷ್ಟ್ರವನ್ನುದ್ದೇಶಿಸಿ ಆಕಾಶವಾಣಿ ಮೂಲಕ ಭಾಷಣ ಮಾಡಿದ್ದ ಇಂದಿರಾ ಗಾಂಧಿ, ಬ್ಯಾಂಕುಗಳ ರಾಷ್ಟ್ರೀಕರಣದ ಹಿಂದಿನ ಉದ್ದೇಶ ಹಾಗೂ ಬ್ಯಾಂಕ್ಗಳ ರಾಷ್ಟ್ರೀಕರಣದ ಮುಂದಿನ ಯೋಜನೆಗಳನ್ನು ಜನರ ಮುಂದೆ ವಿವರಿಸಿದ್ದರು.
2ನೇ ಬಾರಿಗೂ ಖಾಸಗಿ ಬ್ಯಾಂಕ್ಗಳಿಗೆ ಶಾಕ್..!
ಬ್ಯಾಂಕ್ಗಳ ರಾಷ್ಟ್ರೀಕರಣದ ಪರ್ವ ನಿಂತ ನೀರಾಗಲಿಲ್ಲ. ಬದಲಾಗಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿಯ ನಂತರ ಹೀನಾಯ ಸೋಲು ಕಂಡು ಪುನಃ 1980ರಲ್ಲಿ ಅಧಿಕಾರಕ್ಕೆ ಬಂದರು. ಆಗ ಮತ್ತೆ 200 ಕೋಟಿಗೂ ಹೆಚ್ಚಿನ ಡೆಪಾಸಿಟ್ ಇದ್ದ 6 ಬ್ಯಾಂಕುಗಳನ್ನ ಸರ್ಕಾರದ ಸುಪರ್ದಿಗೆ ತೆಗೆದುಕೊಂಡರು. ಮೊದಲ ಸುತ್ತಿನ ರಾಷ್ಟ್ರೀಕರಣದ ಪರಿಣಾಮ ದೇಶದಲ್ಲಿ 85% ಬ್ಯಾಂಕಿಂಗ್ ವ್ಯವಹಾರಗಳು ಸರ್ಕಾರಿ ಬ್ಯಾಂಕುಗಳಿಗೆ ದೊರೆತರೆ, ನಂತರ ಅಂದರೆ 2ನೇ ಸುತ್ತಿನ ರಾಷ್ಟ್ರೀಕರಣದಿಂದ 91%ರಷ್ಟು ವ್ಯವಹಾರ ಸರ್ಕಾರಿ ಬ್ಯಾಂಕುಗಳಿಗೆ ದೊರಕಿತ್ತು. ಇದು ದೇಶದ ಆರ್ಥಿಕತೆಗೆ ಆನೆಬಲ ತುಂಬಿದ್ದಲ್ಲದೆ, ಆಧುನಿಕ ಭಾರತದ ಬ್ಯಾಂಕಿಂಗ್ ವ್ಯವಸ್ಥೆಗೂ ಭದ್ರ ಬುನಾದಿ ಹಾಕಿತ್ತು.
ಕನ್ನಡಿಗರ ಬ್ಯಾಂಕುಗಳ ಮೇಲೆ ಮೋದಿ ಸವಾರಿ; ವಿಲೀನ ಎಷ್ಟು ಸರಿ?
ಬ್ಯಾಂಕ್ಗಳ ರಾಷ್ಟ್ರೀಕರಣ ನಡೆದಿದ್ದು ಏಕೆ..?
ಇದು ಬಹುತೇಕರನ್ನ ಇಂದಿಗೂ ಕಾಡುತ್ತಿರುವ ಪ್ರಶ್ನೆ. ಆದರೆ ಅಂದು ಬ್ಯಾಂಕ್ಗಳನ್ನ ರಾಷ್ಟ್ರೀಕರಣಗೊಳಿಸುವ ಅನಿವಾರ್ಯತೆಯನ್ನ ಬ್ಯಾಂಕ್ಗಳೇ ಸೃಷ್ಟಿಸಿದ್ದವು. ಮೊದಲನೆಯದಾಗಿ ಅಂದಿನ ಕಾಲಕ್ಕೆ ಸಾಮಾನ್ಯ ಜನರಿಗೆ ಬ್ಯಾಂಕ್ ಉದ್ಯೋಗ ಮರೀಚಿಕೆಯಾಗಿತ್ತು. ಈ ಕ್ರಮಕ್ಕೆ 2ನೇ ಕಾರಣವೆಂದರೆ ಸುಮಾರು 300 ಬ್ಯಾಂಕ್ಗಳನ್ನು ನಿಯಂತ್ರಿಸುವುದು, ಮೇಲ್ವಿಚಾರಣೆ ನಡೆಸುವುದು ಭಾರತೀಯ ರಿಸರ್ವ್ ಬ್ಯಾಂಕ್ಗೆ ದೊಡ್ಡ ಸವಾಲಾಗಿತ್ತು. ಈ ಸವಾಲುಗಳ ನಡುವೆ ಬಹುತೇಕ ಬ್ಯಾಂಕ್ಗಳು ಟ್ರೇಡ್ ಫೈನಾನ್ಸ್ಗೆ ಅಂದರೆ ವಾಣಿಜ್ಯ ಉದ್ದೇಶಗಳಿಗೆ ಮಾತ್ರ ಒತ್ತು ನೀಡುತ್ತಿದ್ದವು. ಆದರೆ ದೇಶದ ಪರಿಪೂರ್ಣ ಅಭಿವೃದ್ಧ್ದಿಗೆ ಅನಿವಾರ್ಯವಾಗಿದ್ದ ಕೃಷಿ ಕ್ಷೇತ್ರ ಹಾಗೂ ಸಣ್ಣ ಉದ್ದಿಮೆಗಳನ್ನ ಸಂಪೂರ್ಣವಾಗಿ ನಿರ್ಲಕ್ಷಿಸಿದ್ದವು ಎಂಬ ಆರೋಪವಿತ್ತು. ಇದೇ ಕಾರಣಕ್ಕೆ ಇಂದಿರಾ ಗಾಂಧಿ ಬ್ಯಾಂಕ್ಗಳನ್ನ ರಾಷ್ಟ್ರೀಕರಣಗೊಳಿಸುವ ಮಹತ್ವದ ಕ್ರಮ ಕೈಗೊಂಡಿದ್ದರು.
10 ಬ್ಯಾಂಕುಗಳು ವಿಲೀನವಾಗಿ 4 ಬ್ಯಾಂಕ್, ಉದ್ಯೋಗ ಕಡಿತ ಭೀತಿ ಬೇಡ
ಬ್ಯಾಂಕ್ಗಳ ರಾಷ್ಟ್ರೀಕರಣದ ಸಾಧನೆಯಾದರೂ ಏನು..?
ನಗರ ಪ್ರದೇಶಗಳಿಗೆ ಹಾಗೂ ಶ್ರೀಮಂತರಿಗೆ ಮಾತ್ರ ಸೀಮಿತವಾಗಿದ್ದಂತೆ ಕಾರ್ಯನಿರ್ವಹಿಸುತ್ತಿದ್ದ ಬ್ಯಾಂಕ್ ಶಾಖೆಗಳು ದೇಶದ ಮೂಲೆ ಮೂಲೆಗೂ ಹರಡಿದವು. ಅಲ್ಲಿಯವರೆಗೂ ನಿರ್ಲಕ್ಷಿಸಿದ್ದ ಗ್ರಾಮಾಂತರ ಪ್ರದೇಶ ಹಾಗೂ ಗ್ರಾಮೀಣ ಜನರನ್ನು ಬ್ಯಾಂಕಿಂಗ್ ವ್ಯವಸ್ಥೆಗೆ ಒಳಪಡಿಸಲು ಇದು ಸಹಕಾರಿಯಾಯಿತು. ಬಡವರಿಗೆ ಬ್ಯಾಂಕಿಂಗ್ ಸೌಲಭ್ಯ ದೊರಕುವಂತೆ ಮಾಡಲಾಯಿತು. ಅಷ್ಟೇ ಅಲ್ಲ ಗ್ರಾಮೀಣ ಪ್ರದೇಶದಲ್ಲಿ ಬ್ಯಾಂಕ್ ಶಾಖೆ ತೆಗೆಯಲು ಹಿಂದೇಟು ಹಾಕುತ್ತಿದ್ದ ಬ್ಯಾಂಕ್ಗಳ ಮೇಲೆ ಕಠಿಣ ನಿಯಮ ಹೇರಲಾಗಿತ್ತು. ಪರಿಣಾಮ ದೇಶದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆಗಳು ಸಂಭವಿಸಿದ್ದವು. ಅಲ್ಲಿಯವರೆಗೂ ಕೇವಲ ಲಾಭದ ಉದ್ದೇಶವನ್ನೇ ಮೂಲವಾಗಿ ಕೆಲಸ ಮಾಡುತ್ತಿದ್ದ ಬ್ಯಾಂಕಿಂಗ್ ವ್ಯವಸ್ಥೆ, ಸಾಮಾಜಿಕ ಜವಾಬ್ದಾರಿ ಹೊರಲು ಮುಂದಾಗಿತ್ತು. ಇದು ಜನರ ಹಣೆಬರಹದ ಜೊತೆ ಜೊತೆಗೆ ಬ್ಯಾಂಕ್ಗಳ ಹಣೆಬರಹವನ್ನೂ ಬದಲಾಯಿಸಿತ್ತು.