ಉಡುಪಿಯ ವಿವಾದಿತ ಉಷ್ಣ ವಿದ್ಯುತ್ ಸ್ಥಾವರಕ್ಕೆ ಅದಾನಿ ದುಡ್ಡು!
ಬೆಂಗಳೂರು, ಫೆ. 04: ಉಡುಪಿಯ ಎಲ್ಲೂರು ಗ್ರಾಮದಲ್ಲಿರುವ ವಿವಾದಿತ ಯುಪಿಸಿಎಲ್ (ಉಡುಪಿ ಪವರ್ ಕಾರ್ಪೊರೇಷನ್ ಲಿಮಿಟೆಡ್) ಘಟಕ ವಿಸ್ತರಣೆಗೆ ಸಾವಿರಾರು ಕೋಟಿ ರು ಹೂಡಿಕೆ ಮಾಡುವುದಾಗಿ ಅದಾನಿ ಗ್ರೂಪ್ ಘೋಷಿಸಿದೆ. ಇನ್ವೆಸ್ಟ್ ಕರ್ನಾಟಕ 2016ರಲ್ಲಿ ಮಾತನಾಡಿದ ಅದಾನಿ ಸಂಸ್ಥೆಯ ಮಾಲೀಕ ಗೌತಮ್ ಅದಾನಿ ಅವರು 600 ಹೆಚ್ಚುವರಿ ಉದ್ಯೋಗ ಅವಕಾಶದ ಭರವಸೆ ನೀಡಿದ್ದಾರೆ.
ಯುಪಿಸಿಎಲ್ ಘಟಕ ವಿಸ್ತರಣೆ, ಹಾರು ಬೂದಿ ಸಮಸ್ಯೆ ಮತ್ತೆ ಕೆದಕಿದ್ದಂತಾಗಿದೆ. ಅದಾನಿ ಸಮೂಹ 11,500 ಕೋಟಿ ರು ಹೂಡಿಕೆ ಮಾಡುವ ಮೂಲಕ ಹಾಲಿ ಇರುವ ಘಟಕದ ಸಾಮರ್ಥ್ಯವನ್ನು 1,200 ಮೆಗಾ ವ್ಯಾಟ್ ನಿಂದ 1,600 ಮೆ.ವ್ಯಾಗೆ ಏರಿಸಲು ಚಿಂತಿಸಿದೆ. ಇದಲ್ಲದೆ ಉತ್ತರ ಕನ್ನಡ ಜಿಲ್ಲೆಯ ತದಡಿ ಬಂದರನ್ನು ಅಭಿವೃದ್ಧಿ ಪಡಿಸಲು 2,000 ಕೋಟಿ ರು ಹೂಡಿಕೆ ಮಾಡುವುದಾಗಿ ಗೌತಮ್ ಹೇಳಿದ್ದಾರೆ.[ಇನ್ವೆಸ್ಟ್ ಕರ್ನಾಟಕದಲ್ಲಿ ರಾಹುಲ್ ಉಲ್ಲೇಖಿಸುತ್ತಿದ್ದ 2 ಉದ್ಯಮಿಗಳು]
ಈಗ ಯುಪಿಸಿಎಲ್ ಉಷ್ಣ ವಿದ್ಯುತ್ ಸ್ಥಾವರದಿಂದ 9 ಮಿಲಿಯನ್ ಮನೆಗಳಿಗೆ ಉಪಯೋಗವಾಗುತ್ತಿದೆ. 20 ಮಿಲಿಯನ್ ಮನೆಗಳಿಗೆ ಉಪಯೋಗವಾಗಲಿದೆ. ಸುಮಾರು 600ಕ್ಕೂ ಅಧಿಕ ಮಂದಿಗೆ ಉದ್ಯೋಗ ದೊರೆಯಲಿದೆ ಎಂದು ಅದಾನಿ ಹೇಳಿದ್ದಾರೆ.
ಇದರ ಜೊತೆಗೆ ಪುನರ್ ಬಳಕೆ ಇಂಧನ ಕ್ಷೇತ್ರದಲ್ಲಿ ಸುಮಾರು 700 ಕೋಟಿ ರು ಹೂಡಿಕೆ ಮಾಡಲಿರುವ ಅದಾನಿ ಸಮೂಹ 1,000 ಮೆ. ವ್ಯಾ ಸಾಮರ್ಥ್ಯದ ಸೌರ ಘಟಕವನ್ನು ಕರ್ನಾಟಕದಲ್ಲಿ ಸ್ಥಾಪಿಸಲಿದೆ.
ಯುಪಿಸಿಎಲ್
ನಿಂದಾಗಿ
ಶುದ್ಧ
ಗಾಳಿ,
ನೀರು
ಇಲ್ಲದೆ
ಪರಿತಪಿಸುತ್ತಿರುವ
ಇಲ್ಲಿನ
ಸ್ಥಳೀಯ
ರೈತರ,
ಜನ
ಸಾಮಾನ್ಯರ
ಅರಣ್ಯ
ರೋದನಕ್ಕೆ
ಬೆಲೆ
ಕೊಡದೆ
ಕರ್ನಾಟಕ
ಸರ್ಕಾರ
ಅದಾನಿಗೆ
ಕೆಂಪು
ಹಾಸಿನ
ಸ್ವಾಗತ
ಕೋರಿದೆ.
ರಾಹುಲ್ ಟೀಕಿಸಿದ್ದ ಅದಾನಿಯಿಂದ ಭಾರಿ ಹೂಡಿಕೆ
ಇನ್ವೆಸ್ಟ್ ಕರ್ನಾಟಕಕ್ಕೆ ಅದಾನಿ ಸಂಸ್ಥೆಯನ್ನು ಕರೆಸಿಕೊಂಡು ಸಿಎಂ ಸಿದ್ದರಾಮಯ್ಯ ಅವರು ಎಲ್ಲರ ಹುಬ್ಬೇರಿಸಿದ್ದಾರೆ. ಅದಾನಿ, ಅಂಬಾನಿಯನ್ನು ಓಲೈಸುವ ಮೋದಿ ಅವರದ್ದು ಸೂಟು ಬೂಟಿನ ಸರ್ಕಾರ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಪದೇ ಪದೇ ಟೀಕಿಸುತ್ತಿದ್ದರು ಎಂಬುದು ಗಮನಾರ್ಹ.ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಭಾಗವಹಿಸಿರುವ ಅದಾನಿ ಸಂಸ್ಥೆ ಕರ್ನಾಟಕದಲ್ಲಿ 11,500 ಕೋಟಿ ರು ಹೂಡಿಕೆ ಮಾಡುವುದಾಗಿ ಘೋಷಿಸಿದೆ.
ರೈತರಿಂದ ನಿರಂತರ ಪ್ರತಿಭಟನೆ, ಹೋರಾಟ
ಯುಪಿಸಿಎಲ್ ನಿಂದಾಗಿ ಶುದ್ಧ ಗಾಳಿ, ನೀರು ಇಲ್ಲದೆ ಪರಿತಪಿಸುತ್ತಿರುವ ಇಲ್ಲಿನ ಸ್ಥಳೀಯ ರೈತ ಸಂಘಟನೆಗಳ ನೆರವಿನಿಂದ ನಿರಂತರವಾಗಿ ಪ್ರತಿಭಟನೆ ನಡೆಸುತ್ತಾ ಬಂದಿದ್ದಾರೆ. ಕುಡಿಯುವ ನೀರಿಗೆ ರಾಸಾಯನಿಕ ಮಿಶ್ರಣಗೊಂಡು ರೋಗ ರುಜಿನಗಳು ಆವರಿಸಿದೆ. ಎಲ್ಲೂರು ಗ್ರಾಮದಲ್ಲಿರುವ ಯುಪಿಸಿಎಲ್ (ಉಡುಪಿ ಪವರ್ ಕಾರ್ಪೋರೇಶನ್ ಲಿ.) ಉಷ್ಣ ವಿದ್ಯುತ್ ಸ್ಥಾವರವನ್ನು ಸ್ಥಗಿತಗೊಳಿಸಬೇಕು ಎಂದು ರೈತ ಸಂಘಟನೆ ಆಗ್ರಹಿಸುತ್ತಲೇ ಇದೆ ಬಿಜೆಪಿ ಸರ್ಕಾರ ಹೋಗಿ ಈಗ ಕಾಂಗ್ರೆಸ್ ಸರ್ಕಾರ ಬಂದಿದೆ. ಆದರೆ, ಪರಿಸ್ಥಿತಿ ಇನ್ನೂ ಹದಗೆಡುತ್ತಿದೆ.
ಮಾರಕವಾದ ಇಂಥ ಯೋಜನೆ ಬೇಕಿಲ್ಲ
ದೇವೇಗೌಡನವರು ಪ್ರಧಾನಿಯಾಗಿದ್ದ ಕಾಲದಲ್ಲಿ ಇಲ್ಲಿಗೆ ನಾಗಾರ್ಜುನ ಯೋಜನೆ ಜಾರಿಯಾಯಿತು. ರಾಜ್ಯದ ಕಾಂಗ್ರೆಸ್, ಬಿಜೆಪಿ ಹಾಗೂ ಮತ್ತೆ ಕಾಂಗ್ರೆಸ್ ಸರ್ಕಾರ ಯೋಜನೆಯನ್ನು ಬೆಳೆಸಿಕೊಂಡು ಬಂದಿವೆ. ಯುಪಿಸಿಎಲ್ ಧೂಳು ಕಣ ವಿವಾದದ ಬಗ್ಗೆ ಹೆಚ್ಚು ವಿವರಣೆ ಬೇಕಿಲ್ಲ. ಜನ ಸಾಮಾನ್ಯರಿಗೆ ಮಾರಕವಾಗಿ ಇಂಥ ಯೋಜನೆ ಬೇಕಿಲ್ಲ. ಇಲ್ಲಿ ಉತ್ಪಾದನೆಯಾಗುವ ವಿದ್ಯುತ್ ಬೆಂಗಳೂರಿಗೆ ಸೇರುತ್ತದೆ. ಯುರೋಪ್, ಅಮೆರಿಕಾಗಳಂತಹ ರಾಷ್ಟ್ರಗಳಲ್ಲಿ ತಿರಸ್ಕೃತವಾದ ಮತ್ತು ಕಳಚಲ್ಪಟ್ಟ ಯೋಜನೆ ಸ್ಥಾವರಗಳನ್ನು ಪಶ್ಚಿಮಘಟ್ಟದ ತಪ್ಪಲಿನಲ್ಲಿ ಸ್ಥಾಪಿಸಲು ಹುನ್ನಾರ ಇದಾಗಿದೆ ಎಂದು ರೈತರು ಆರೋಪಿಸಿದ್ದಾರೆ.
35,000 ಎಕರೆ ಭೂಮಿ ಫಲವತ್ತತೆ ನಾಶ
ಉಡುಪಿ, ಪಡುಬಿದ್ರಿ ಸೇರಿದಂತೆ 35,000 ಎಕರೆ ಭೂಮಿಯನ್ನು ರಾಸಾಯನಿಕಗಳು ಹಾಳುಗೆಡವಿದೆ. ಮಣ್ಣಿನ ಫಲವತ್ತತೆ ಹಾಳಾಗಿದೆ. ವಾಯು ಮಾಲಿನ್ಯ ಸಮಸ್ಯೆ ಜೊತೆಗೆ 250ಕ್ಕೂ ಅಧಿಕ ನೀರನ ಮೂಲಗಳು ಹಾಳಾಗಿವೆ. ಯುಪಿಸಿಎಲ್ ನ ಸಮಸ್ಯೆ ಬಗ್ಗೆ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ನೀಡಿದರೂ ಪ್ರಯೋಜನವಾಗಿಲ್ಲ. ಜಾತಿ, ಮತ, ಪಂಥ ಮರೆತು ರೈತ ಸಂಘಟನೆಗಳೊಂದಿಗೆ ಕೋಮು ಸೌಹಾರ್ದ ವೇದಿಕೆ, ಜಿಲ್ಲಾ ಮುಸ್ಲಿಂ ಒಕ್ಕೂಟ, ಕ್ಯಾಥೋಲಿಕ್ ಸಭಾ, ಮೈತ್ರಿ ಯುವಕ ಮಂಡಲ್ ಕೈಜೋಡಿಸಿ ಹೋರಾಟ ನಡೆಸುತ್ತಿವೆ.