2 ಸಾವಿರ ಕೋಟಿ ರು. ಹೂಡಿಕೆ, 14 ಸಾವಿರ ಉದ್ಯೋಗ ಸೃಷ್ಟಿ
ಬೆಂಗಳೂರು, ಮಾರ್ಚ್ 23 : ರಾಜ್ಯದ ನಾನಾ ಕಡೆಗಳಲ್ಲಿ ಅಸ್ತಿತ್ವಕ್ಕೆ ಬರಲಿರುವ 44 ಕೈಗಾರಿಕಾ ಯೋಜನೆ ಪ್ರಸ್ತಾವನೆಗಳಿಗೆ ಶುಕ್ರವಾರ ನಡೆದ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನೆ ಸಮಿತಿ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.
ಈ ಯೋಜನೆಗಳಿಂದ ರಾಜ್ಯದಲ್ಲಿ ಒಟ್ಟು 2061.32 ಕೋಟಿ ರೂಪಾಯಿ ಮೊತ್ತದ ಬೃಹತ್ ಹೂಡಿಕೆಯಾಗಲಿದ್ದು, 14,303 ಉದ್ಯೋಗಗಳು ಸೃಷ್ಟಿಯಾಗಲಿವೆ. ಮಾರ್ಚ್ 2 ಮತ್ತು 23ರಂದು ನಡೆದ ಸಮಿತಿಯ 109 ಮತ್ತು 110ನೇ ಸಭೆಗಳಲ್ಲಿ ಈ ಅನುಮೋದನೆ ನೀಡಲಾಗಿದೆ ಎಂದು ಅವರು ಶುಕ್ರವಾರ ಹೇಳಿದರು.
ಹಗರಣಗಳ ನೆಪದಲ್ಲಿ ಉದ್ಯಮಿಗಳನ್ನು ಶಿಕ್ಷಿಸುವುದು ಸರಿಯಲ್ಲ: ಆರ್.ವಿ.ದೇಶಪಾಂಡೆ
ಈ ಯೋಜನೆಗಳು ಏರೋಸ್ಪೇಸ್, ಆಟೋಮೊಬೈಲ್, ಎಂಜಿನಿಯರಿಂಗ್, ಮೂಲಸೌಲಭ್ಯ, ಲಾಜಿಸ್ಟಿಕ್ಸ್ ಮತ್ತು ವೇರ್ಹೌಸಿಂಗ್, ಪ್ಲಾಸ್ಟಿಕ್, ಸಕ್ಕರೆ, ಜವಳಿ, ರಾಸಾಯನಿಕಗಳು, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಆಹಾರ, ಸಾಫ್ಟ್ವೇರ್, ಪ್ರವಾಸೋದ್ಯಮ ಮತ್ತಿತರ ವಲಯಗಳಿಗೆ ಸೇರಿವೆ ಎಂದು ದೇಶಪಾಂಡೆ ಮಾಹಿತಿ ನೀಡಿದರು.
ಇವುಗಳ ಪೈಕಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 15, ಬೆಂಗಳೂರು ನಗರ ಜಿಲ್ಲೆಯಲ್ಲಿ 7, ಧಾರವಾಡದಲ್ಲಿ 2, ಕೋಲಾರದಲ್ಲಿ 9, ತುಮಕೂರಿನಲ್ಲಿ 6, ದಕ್ಷಿಣ ಕನ್ನಡ, ಬೆಳಗಾವಿ, ಮೈಸೂರು, ಹಾಸನ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ತಲಾ 1 ಯೋಜನೆಗಳು ಜಾರಿಗೆ ಬರಲಿವೆ ಎಂದು ದೇಶಪಾಂಡೆಯವರು ತಿಳಿಸಿದರು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಈಗ ಅನುಮೋದಿಸಲಾಗಿರುವ ಪ್ರಸ್ತಾವನೆಗಳಲ್ಲಿ ಹೆಸರಾಂತ ಸಂಸ್ಥೆಗಳಾದ ಹ್ಯೂಲೆಟ್-ಪ್ಯಾಕರ್ಡ್, ಸೀಯೆಂಟ್ ಲಿಮಿಟೆಡ್, ಕೆನ್ನಮೆಟಲ್ ಇಂಡಿಯಾ ಲಿಮಿಟೆಡ್, ಸೆಂಟ್ರಲ್ ವೇರ್ಹೌಸಿಂಗ್ ಕಾರ್ಪೊರೇಷನ್, ಬಿಆರ್ಎಸ್ ಎಕ್ಸಿಮ್ಸ್ ಪ್ರೈವೇಟ್ ಲಿಮಿಟೆಡ್, ಅದ್ವೈತ ಶಾಶ್ವತ್ ಪ್ರೈವೇಟ್ ಲಿಮಿಟೆಡ್ ಮತ್ತು ಎಲೈಟ್ ಪ್ರಾಜೆಕ್ಟ್ ಮುಂತಾದ ಕಂಪನಿಗಳು ಸಲ್ಲಿಸಿರುವ ಪ್ರಸ್ತಾವನೆಗಳಿವೆ ಎಂದು ಅವರು ತಿಳಿಸಿದರು.
ಉದ್ಯೋಗ ಸೃಷ್ಟಿಗೆ ಅದ್ಯತೆ ಅತ್ಯಗತ್ಯ: ಸಚಿವ ಆರ್ ವಿ ದೇಶಪಾಂಡೆ