ರಾಷ್ಟ್ರೀಕೃತ ಬ್ಯಾಂಕ್ ಗಳ ಎರಡು ದಿನ ಬಂದ್: ಬೇಡಿಕೆ ಏನು, ಬಂದ್ ಏಕೆ?
ಮೇ 30, 31 ಎರಡು ದಿನಗಳ ಬಂದ್ ಗೆ ರಾಷ್ಟ್ರೀಕೃತ ಬ್ಯಾಂಕ್ ಗಳ ನೌಕರರ ವಿವಿಧ ಒಕ್ಕೂಟಗಳು ಕರೆ ನೀಡಿವೆ. ತಿಂಗಳ ಕೊನೆಯ ಭಾಗದಲ್ಲಿ ಇರುವುದರಿಂದ ಪಿಂಚಣಿದಾರರಿಗೆ, ವ್ಯವಹಾರಸ್ಥರಿಗೆ ಒಟ್ಟಾರೆ ವಿವಿಧ ವರ್ಗದ ಜನರಿಗೆ ಈ ಬಂದ್ ನಿಂದ ಭಾರೀ ಸಮಸ್ಯೆಯಾಗಿದೆ. ವೇತನ ಪರಿಷ್ಕರಣೆಯೊಂದೇ ಬಂದ್ ನ ಕಾರಣವಾಗಿದೆ.
ಬ್ಯಾಂಕ್ ಗಳ ನೌಕರರ ವೇತನ ಪರಿಷ್ಕರಣೆ ಪ್ರತಿ ಐದು ವರ್ಷಕ್ಕೊಮ್ಮೆ ಆಗುತ್ತದೆ. ಕಳೆದ ವರ್ಷದ ನವೆಂಬರ್ ನಲ್ಲೇ ವೇತನ ಪರಿಷ್ಕರಣೆ ಬಾಕಿ ಇತ್ತು. ಆದರೆ ಈ ವರೆಗೆ ಆಗಿಲ್ಲ. ನೌಕರರ ಒಕ್ಕೂಟವು ಶೇ ಹದಿನೈದರಷ್ಟು ಏರಿಕೆಗೆ ಒತ್ತಾಯಿಸುತ್ತಿದ್ದರೆ, ಆಡಳಿತದ ಕಡೆಯಿಂದ ಶೇ ಎರಡರಷ್ಟು ವೇತನ ಹೆಚ್ಚಳದ ಪ್ರಸ್ತಾವ ಇಡಲಾಗಿದೆ.
ಮೇ 30ರಿಂದ 2 ದಿನ ಬ್ಯಾಂಕ್ ಮುಷ್ಕರ: ಸೇವೆಯಲ್ಲಿ ವ್ಯತ್ಯಯ ಸಾಧ್ಯತೆ
ರಾಷ್ಟ್ರೀಕೃತ ಬ್ಯಾಂಕ್ ಗಳು ನಷ್ಟದಲ್ಲಿರುವುದು, ಎನ್ ಪಿಎ ಹೆಚ್ಚಳ ಆಗಿರುವುದು ಸೇರಿದಂತೆ ನಾನಾ ಕಾರಣಗಳನ್ನು ಮುಂದೊಡ್ಡಿ ಒಕ್ಕೂಟದ ಬೇಡಿಕೆ ಅನ್ವಯ ವೇತನ ಹೆಚ್ಚಳ ಸಾಧ್ಯವಿಲ್ಲ ಎಂಬ ಮಾತನ್ನು ಹೇಳಲಾಗುತ್ತಿದೆ. ಆದರೆ ಇಂಥ ಕಾರಣಗಳನ್ನು ಹೇಳಿದರೆ ಒಪ್ಪಲು ಸಾಧ್ಯವಿಲ್ಲ ಎಂಬುದು ವಿವಿಧ ಒಕ್ಕೂಟಗಳ ಮಾತು.
ಬ್ಯಾಂಕ್ ನೌಕರಿಯಲ್ಲಿ ಹೆಚ್ಚುತ್ತಿರುವ ಒತ್ತಡ
ಈಚೆಗೆ ಬ್ಯಾಂಕ್ ಗಳಲ್ಲಿ ಒತ್ತಡ ಹೆಚ್ಚಾಗಿದೆ. ನೌಕರರ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಬೆಲೆ ಏರಿಕೆ ಸೇರಿದಂತೆ ನಾನಾ ಸವಾಲುಗಳಿವೆ. ಎನ್ ಪಿಎ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಕಾರಣ ಹುಡುಕಿ, ಅದಕ್ಕೆ ಕಾರಣ ಆದವರನ್ನು ಶಿಕ್ಷೆಗೆ ಗುರಿ ಪಡಿಸಬೇಕೇ ವಿನಾ ಎಲ್ಲ ಉದ್ಯೋಗಿಗಳನ್ನು ಇದಕ್ಕೆ ಜವಾಬ್ದಾರಿ ಮಾಡುವುದು ಸರಿಯಲ್ಲ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಉದ್ಯೋಗಿ.
ಐದು ವರ್ಷಕ್ಕೆ ಒಮ್ಮೆ ವೇತನ ಪರಿಷ್ಕರಣೆ
ಖಾಸಗಿ ಬ್ಯಾಂಕ್ ಗಳಲ್ಲಿ ವೇತನ ಪರಿಷ್ಕರಣೆ ವಿಧಾನವೇ ಬೇರೆ. ಆದರೆ ರಾಷ್ಟ್ರೀಕೃತ ಬ್ಯಾಂಕ್ ಉದ್ಯೋಗಿಗಳು ಪ್ರತಿ ಐದು ವರ್ಷಕ್ಕೊಮ್ಮೆ ಈ ರೀತಿ ಬಂದ್- ಪ್ರತಿಭಟನೆ ನಡೆಸಿಯೇ ಹೆಚ್ಚಳ ಮಾಡಿಸಿಕೊಳ್ಳಬೇಕು ಎಂಬ ಸ್ಥಿತಿ ಇದೆ. ಅಪನಗದೀಕರಣದ ನಂತರ ಕೆಲಸದ ಒತ್ತಡ ವಿಪರೀತ ಹೆಚ್ಚಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದೊಳಗೆ ಇತರ ಬ್ಯಾಂಕ್ ಗಳ ವಿಲೀನ ಆಗಿರುವುದರಿಂದ ವಿಪರೀತ ನಷ್ಟವಾಗಿದೆ ಅನ್ನೋದು ಆಡಳಿತ ಮಂಡಳಿ ಸಮರ್ಥನೆ.
ಸಂಕಷ್ಟದಲ್ಲಿವೆ ರಾಷ್ಟ್ರೀಕೃತ ಬ್ಯಾಂಕ್ ಗಳು
ಬ್ಯಾಂಕ್ ಗಳ ವಿಲೀನ ಹಾಗೂ ಎನ್ ಪಿಎ ಸಮಸ್ಯೆಗಳು ಮುಂಚಿತವಾಗಿಯೇ ಗೊತ್ತಿರುವಂಥದ್ದು. ಇಂಥ ಕಾರಣಗಳನ್ನು ಮುಂದೆ ಮಾಡಿ, ಉದ್ಯೋಗಿಗಳಿಗೆ ಸರಿಯಾದ ಪ್ರಮಾಣದಲ್ಲಿ ವೇತನ ಹೆಚ್ಚಳ ಮಾಡದಿದ್ದಲ್ಲಿ ಮತ್ತೆ ಇನ್ನು ಐದು ವರ್ಷಗಳ ಕಾಲ ಯಾವುದೇ ವ್ಯತ್ಯಾಸ ಆಗುವುದಿಲ್ಲ. ಆದ್ದರಿಂದ ಇಂಥ ಸಮರ್ಥನೆ ಕೇಳಲು ಸಾಧ್ಯವಿಲ್ಲ ಅನ್ನೋದು ನೌಕರರ ಕಡೆಯ ವಾದ.
ಹತ್ತು ಲಕ್ಷ ಮಂದಿ ಬ್ಯಾಂಕ್ ನೌಕರರು ಭಾಗಿ
ಎರಡು ದಿನಗಳ ಬಂದ್ ನಿಂದ ಎಚ್ಚೆತ್ತು, ಒಪ್ಪಿಗೆಯಾಗುವಂಥ ಸಂಧಾನ ಅಥವಾ ತೀರ್ಮಾನವೊಂದಕ್ಕೆ ಬಂದರೆ ಪರವಾಗಿಲ್ಲ. ಇಲ್ಲದಿದ್ದಲ್ಲಿ ಮುಂದೆ ಅನಿರ್ದಿಷ್ಟಾವಧಿ ಬಂದ್ ಮಾಡುವುದು ಅನಿವಾರ್ಯ ಆಗುತ್ತದೆ. ಈಗ ಜನರಿಗೆ ತೊಂದರೆ ಆಗದ ರೀತಿಯಲ್ಲಿ ತೀರ್ಮಾನ ಕೈಗೊಂಡಿದ್ದೇವೆ. ಇನ್ನು ಮುಂದಿನ ಅನಾಹುತಕ್ಕೆ ಸರಕಾರವೇ ಹೊಣೆ ಎಂಬುದು ಪ್ರತಿಭಟನಾನಿರತರ ಮಾತು. ದೇಶದಾದ್ಯಂತ ಇರುವ ಹತ್ತು ಲಕ್ಷ ಮಂದಿ ರಾಷ್ಟ್ರೀಕೃತ ಬ್ಯಾಂಕ್ ನೌಕರರು ಎರಡು ದಿನಗಳ ಬಂದ್ ಕೈಗೊಂಡಿದ್ದಾರೆ.