ಚಿಕಿತ್ಸೆಗೂ, ಶವ ಸಾಗಾಟಕ್ಕೂ ಒಂದೇ ಆಂಬ್ಯುಲೆನ್ಸ್: ಸಚಿವರ ತವರು ಕ್ಷೇತ್ರದ ನೈಜ ದರ್ಶನ
ಬೀದರ್, ಮೇ 18: ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗುವ ರೋಗಿಗೂ ಹಾಗೂ ಕೋವಿಡ್ನಿಂದ ಸತ್ತ ವ್ಯಕ್ತಿಗೂ ಬಳಕೆಯಾಗುವ ಆಂಬ್ಯುಲೆನ್ಸ್ ಒಂದೇ. ಈ ದೃಶ್ಯ ಕಂಡುಬಂದಿದ್ದು, ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ತವರು ಕ್ಷೇತ್ರ ಔರಾದ್ ಸಾರ್ವಜನಿಕ ಆಸ್ಪತ್ರೆಯಲ್ಲಿ.
ಸಾಂಕ್ರಾಮಿಕ ಕೋವಿಡ್ ರೋಗದಿಂದ ಸತ್ತ ಮೃತ ದೇಹವನ್ನು ಸಾಗಿಸಲು ಇಲ್ಲಿ ಪ್ರತ್ಯೇಕವಾದ ಶ್ರದ್ಧಾಂಜಲಿ ವಾಹನದ ಸೌಲಭ್ಯವಿಲ್ಲ. ಇರುವ ಎರಡು ಆಂಬ್ಯುಲೆನ್ಸ್ ಗಳಲ್ಲೇ ಶವ ಸಾಗಾಟ ಹಾಗೂ ಚಿಕಿತ್ಸೆಗೆ ಬಳಸಲಾಗುತ್ತಿದೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ.
ಮಾತೆತ್ತಿದ್ದರೆ ಕೋಟಿ ರೂ. ಬಿಡುಗಡೆ ಮಾಡುವ ಬಗ್ಗೆ ಮಾತಾಡುವ ಪ್ರಭು ಚವ್ಹಾಣ್ ತವರು ಕ್ಷೇತ್ರದ ಆಸ್ಪತ್ರೆಯ ದರ್ಶನವಿದು. ಸಾಂಕ್ರಾಮಿಕವಾಗಿ ಹರಡಲ್ಪಡುವ ಕೋವಿಡ್ ಸೋಂಕಿತರು ಸತ್ತರೆ ಸಾಕಷ್ಟು ಮುನ್ನಚ್ಚೆರಿಕೆಯಿಂದ ಶವ ಸಾಗಿಸಲಾಗುತ್ತಿದೆ.
ಕೇಂದ್ರ ಸಚಿವ ಸುರೇಶ್ ಅಂಗಡಿ ಸೋಂಕಿನಿಂದ ನಿಧನವಾದರೆ ಶವ ಸಹಿತ ಕುಟುಂಬದವರಿಗೆ ಕೊಟ್ಟಿಲ್ಲದಿರುವುದು ಗಮನಾರ್ಹ. ಆದರೆ, ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಾತ್ರ ಎರಡಕ್ಕೂ ಒಂದೇ ವಾಹನ ಬಳಸುತ್ತಿರುವುದು ದಿಗ್ಭ್ರಮೆ ಮೂಡಿಸಿದೆ.
ಕೋವಿಡ್ ಮಹಾಮಾರಿ ಆರಂಭವಾಗಿ ವರ್ಷ ಕಳೆಯುತ್ತಾ ಬಂದಿದೆ. ಎರಡನೇ ಅಲೆ ಬೇರೆ ತನ್ನ ಪ್ರತಾಪ ಶುರು ಮಾಡಿದ್ದು, ದೇಶವನ್ನೇ ನಡುಗಿಸುತ್ತಿದೆ. ಆದರೆ, ಕ್ಯಾಬಿನೇಟ್ ಮಂತ್ರಿ ಕ್ಷೇತ್ರದಲ್ಲೇ ಕನಿಷ್ಠ ಸೌಕರ್ಯ ಕಲ್ಪಿಸಲಾಗದಿರುವುದು ವಿಚಿತ್ರವಾಗಿದೆ.
ಔರಾದ್ ಪಟ್ಟಣ ಪಂಚಾಯತ್ ಮಾನ್ಯತೆ ಹೊಂದಿರುವ ಸಣ್ಣ ಪಟ್ಟಣ. ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳೂ ಇಲ್ಲ. ಖಾಸಗಿ ಆಂಬ್ಯುಲೆನ್ಸ್ ಗಳೂ ಇಲ್ಲ. ಚಿಕಿತ್ಸೆಗಾಗಿ ನೆರೆಯ ಮಹಾರಾಷ್ಟ್ರ ಹಾಗೂ ಬೀದರ್ಗೆ ಹೋಗದೇ ವಿಧಿಯಿಲ್ಲ. ಇಂಥ ಮಹಾಮಾರಿ ಸಂದರ್ಭದಲ್ಲಿ ವಾಹನಗಳ ಚಾಲಕರು ಸಿಕ್ಕಾಪಟ್ಟೆ ಹಣ ಕೇಳುತ್ತಾರೆ.
ಖಾಸಗಿ ಮೂಲಗಳ ಪ್ರಕಾರ, ಆಸ್ಪತ್ರೆಯಲ್ಲಿ ರೋಗಿಗಳು ಸತ್ತರೆ ಆಂಬ್ಯುಲೆನ್ಸ್ ನೀಡುವುದೇ ಇಲ್ಲ. ಯಾರಾದರೂ ಪ್ರಭಾವಿಗಳು ಇದ್ದರೆ ಮಾತ್ರ ಆಂಬ್ಯುಲೆನ್ಸ್ ನೀಡುತ್ತಾರೆ. ಖಾಸಗಿ ಆಂಬ್ಯುಲೆನ್ಸ್ ಗಳ ಮೊರೆ ಹೋದರೆ ಸಾವಿರಾರು ರೂ. ಕೊಡಬೇಕು. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಬಡವರು ಎಲ್ಲಿಂದ ಹಣ ತರಬೇಕು?
Recommended Video
ಈ ಕುರಿತು ತಾಲೂಕು ಆರೋಗ್ಯ ಅಧಿಕಾರಿ ಡಾ.ಶರಣಯ್ಯ ಸ್ವಾಮಿ ಅವರನ್ನು ಸಂಪರ್ಕಿಸಿದ್ದು, ಆಸ್ಪತ್ರೆಯಲ್ಲಿ ಎರಡು ಆಂಬ್ಯುಲೆನ್ಸ್ ಗಳಿವೆ. ಇನ್ನೊಂದು ಆಂಬ್ಯುಲೆನ್ಸ್ನ್ನು ಚಿಂತಾಕಿ ಆಸ್ಪತ್ರೆಯಿಂದ ತರಿಸಲಾಗಿದೆ. ಸದ್ಯ ಚಿಕಿತ್ಸೆ ಹಾಗೂ ಶವ ಸಾಗಾಟಕ್ಕೆ ಇವೇ ವಾಹನಗಳನ್ನು ಬಳಸಲಾಗುತ್ತಿದೆ. ಶ್ರದ್ಧಾಂಜಲಿ ವಾಹನ ಇರಬೇಕಿತ್ತು, ಆದರೆ, ಇಲ್ಲ ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.