ದೂರು ಕೊಡುವವರಿಗೆ ಹೊಡೆಯಿರಿ ಎಂದ ಸಚಿವ ಪ್ರಭು ಚವ್ಹಾಣ್
ಬೀದರ್, ಜೂನ್ 5: ಸರ್ಕಾರದ ಉನ್ನತ ಹುದ್ದೆಯಲ್ಲಿರುವವರಿಗೆ ಮೈತುಂಬಾ ಕಣ್ಣಿರಬೇಕು. ಆಡುವ ಪ್ರತಿ ನುಡಿ ಬಗ್ಗೆ ಎಚ್ಚರದಿಂದರಬೇಕು. ಇಲ್ಲದೇ ಹೋದರೆ ಎಂಥಾ ಅದ್ವಾನಗಳಾಗುತ್ತವೆ ಎಂಬುದಕ್ಕೆ ಇಲ್ಲೊಂದು ತಾಜಾ ನಿದರ್ಶನ ಇದೆ.
Recommended Video
ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಶುಕ್ರವಾರ ಕಮಲನಗರ ತಾಲೂಕಿನ ದಾಬಕಾ ಗ್ರಾಮಕ್ಕೆ ಕೊರೊನಾ ನಿಯಂತ್ರಣಕ್ಕಾಗಿ ಜಾರಿಗೊಳಿಸಲಾದ ಲಾಕ್ಡೌನ್ ಹಿನ್ನೆಲೆ ಗ್ರಾಮ ಸಂಚಾರ ಭೇಟಿ ವೇಳೆ ಪಂಚಾಯತ್ ಕಾರ್ಯದ ವಿರುದ್ಧ ದೂರುಗಳನ್ನು ಕೊಡುವವರಿಗೆ ಟೋಕೋ ಸಾಲೇಂಕೋ, ಫಾಲ್ತು ಸಾಲೋಂಕೋ ಎಂದು (ದೂರು ಕೊಡುವವರಿಗೆ ಹೊಡೆಯಿರಿ) ಎಂದು ನಿಂದಿಸಿದ್ದಾರೆ.
ದಾಬಕಾ ಗ್ರಾಮ ಪಂಚಾಯತ್ ಸದಸ್ಯನ್ನೊಬ್ಬ ಗ್ರಾಮದಲ್ಲಿ ನಮಗೆ ಸರಿಯಾಗಿ ಕೆಲಸ ಮಾಡಲು ಬಿಡುತ್ತಿಲ್ಲ, ಕೆಲವರು ಸಹಕರಿಸುತ್ತಿಲ್ಲ. ಎಲ್ಲ ಕಾರ್ಯಕ್ಕೂ ಪದೇಪದೇ ಅಡ್ಡಿಪಡಿಸುತ್ತಿದ್ದಾರೆ. ಸಣ್ಣ-ಸಣ್ಣ ವಿಷಯಗಳಿಗೂ ದೂರು ಕೊಡುತ್ತಿದ್ದಾರೆ. ಜಿಲ್ಲಾ ಪಂಚಾಯತ್ ಸಿಇಒ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ಕೊಡುತ್ತಾರೆ ಎಂದಿದಕ್ಕೆ, ಸಚಿವರು ಗರಂ ಆದರು. ದೂರು ಕೊಡುವವರಿಗೆ ಟೋಕೋ ಸಾಲೇಂಕೋ ಎಂದು ಅವಾಚ್ಯವಾಗಿ ನಿಂದಿಸಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇಲ್ಲಿಗೆ ಈ ಸಮಯದಲ್ಲಿ ಯಾರೂ ಬರುವುದಿಲ್ಲ, ನೀವೆಲ್ಲ (ಪಂಚಾಯತ್ ಪ್ರತಿನಿಧಿಗಳು-ಅಧಿಕಾರಿಗಳು) ಒಗ್ಗಟ್ಟಿನಿಂದ ಇರಿ. ಯಾರಾದರೂ ದೂರು ಕೊಟ್ಟರೆ ಹೊಡೆಯಿರಿ ಎಂದು ಗ್ರಾಮ ಪಂಚಾಯತ್ ಸದಸ್ಯನಿಗೆ ಅಭಯ ನೀಡಿದ್ದಾರೆ.
ಗ್ರಾಮಸ್ಥರು, ಅಧಿಕಾರಿಗಳ ಸಮ್ಮುಖದಲ್ಲೇ ಸಚಿವರು ಗ್ರಾಮ ಪಂಚಾಯತ್ ಸದಸ್ಯನಿಗೆ ಉಪದೇಶ ನೀಡಿರುವುದು ನೆರೆದಿದ್ದವರಿಗೂ ಶಾಕ್ ಆಗಿದೆ.
ಜನಸಾಮಾನ್ಯರ ರಕ್ಷಕರಾಗಿರುವ ಸಚಿವರೇ ಹೊಡೆಯಿರಿ ಎಮದು ಹೇಳುವ ಕಾನೂನು ಬಾಹಿರವಾಗಿ ನಡೆದುಕೊಂಡಿದ್ದು, ಬೇಲಿಯೇ ಎದ್ದು ಹೊಲ ಮೇಯ್ದಂತೆ. ಗ್ರಾಮ ಪಂಚಾಯತ್ಗಳಲ್ಲಿ ನರೇಗಾ ಯೋಜನೆ ಅಡಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿರುವುದು ಎಲ್ಲರಿಗೂ ಗೊತ್ತಿದೆ.
ಪಂಚಾಯತ್ ಸದಸ್ಯರು ಹಾಗೂ ಅಧಿಕಾರಿಗಳು ಸೇರಿ ಹಣ ಕೊಳ್ಳೆ ಹೊಡೆಯುತ್ತಿರುವ ಬಗ್ಗೆ ಜನಸಾಮಾನ್ಯರು ಮೇಲಾಧಿಕಾರಿಗಳಿಗೆ ದೂರು ಕೊಡುವುದು ಸಚಿವರ ಪ್ರಕಾರ ತಪ್ಪೇ? ದೂರು ಕೊಡುವವರಿಗೆ ಹೊಡೆಯಿರಿ ಎಂದು ಹೇಳುವುದು ಯಾವ ನ್ಯಾಯ? ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಇದೇ ಸಂದರ್ಭದಲ್ಲಿ ಕೆಲವರು ತಮ್ಮ ಸಮಸ್ಯೆಗಳನ್ನು ಸಚಿವರ ಎದುರು ಹೇಳಿಕೊಂಡರು. ಈ ವೇಳೆಯಲ್ಲಿ ಔರಾದ್ ತಾಲೂಕು ಕಾರ್ಯನಿರ್ವಾಹಕಾಧಿಕಾರಿ ಮಾಣಿಕ್ ಪಾಟೀಲ, ಕಮಲನಗರ ತಹಸೀಲ್ದಾರ್ ರಮೇಶ್ ಪೆದ್ದೆ ಸೇರಿದಂತೆ ಆರೊಗ್ಯಾಧಿಕಾರಿಗಳು ಉಪಸ್ಥಿತರಿದ್ದರು.