ರೈತರಿಗೆ ಸಿಹಿ ಸುದ್ದಿ; ಬೀದರ್ ಸಕ್ಕರೆ ಕಾರ್ಖಾನೆಗೆ ನೂತನ ಅಧ್ಯಕ್ಷರ ನೇಮಕ
ಬೀದರ್, ಏಪ್ರಿಲ್ 21; ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಹುಮನಾಬಾದ್ ತಾಲೂಕಿನ ಹಳ್ಳಿಖೇಡ್ (ಬಿ) ಸಮೀಪ ಇರುವ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಗೆ ನೂತನ ಅಧ್ಯಕ್ಷರಾಗಿ ಸುಭಾಷ್ ಕಲ್ಲೂರ್ ಅವಿರೋಧ ಆಯ್ಕೆಯಾಗಿದ್ದಾರೆ.
ಬುಧವಾರ ಕಾರ್ಖಾನೆ ಸಭಾಂಗಣದಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆಯಿತು. ಸುಭಾಷ್ ಕಲ್ಲೂರ್ ಅಧ್ಯಕ್ಷರಾಗಿ, ಶೈಲೇಂದ್ರ ಬೆಲ್ದಾಳೆ ಉಪಾಧ್ಯಕ್ಷರಾಗಿ ಆಯ್ಕೆಯಾದರು.
300 ಕೋಟಿ ರೂ.ಗೂ ಅಧಿಕ ನಷ್ಟದಲ್ಲಿರುವ ಕಾರ್ಖಾನೆ ಆಡಳಿತ ಮಂಡಳಿಗೆ ಇತ್ತೀಚೆಗೆ ನಡೆದ ಚುನಾವಣೆಯು ತೀವ್ರ ಜಿದ್ದಾಜಿದ್ದಿನಿಂದ ಕೂಡಿತ್ತು. ಇದು ಎಲ್ಲರು ಹುಬ್ಬೇರಿಸುವಂತೆ ಮಾಡಿತ್ತು. ಸುಭಾಷ್ ಕಲ್ಲೂರ್ ಹಾಗೂ ನಿರ್ಗಮಿತ ಅಧ್ಯಕ್ಷ ಸಂಜಯ್ ಖೇಣಿ ಪೆನಾಲ್ ನಡುವೆ ಪೈಪೋಟಿ ನಡೆದಿತ್ತು.
12 ಸ್ಥಾನಗಳ ಪೈಕಿ 9 ಸ್ಥಾನಗಳಲ್ಲಿ ಸುಭಾಷ್ ಕಲ್ಲೂರ್ ಪೆನಾಲ್ ಜಯಸಾಧಿಸಿತ್ತು. ಈಗ ನಿರೀಕ್ಷೆಯಂತೆ ಕಲ್ಲೂರ್ ಅಧ್ಯಕ್ಷರಾಗಿದ್ದಾರೆ. ಹಿಂದೆ ಕೂಡ ಸುಭಾಷ್ ಕಲ್ಲೂರ್ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ.
ಮುನ್ನೂರು ಕೋಟಿ ಸಾಲದ ಸುಳಿಗೆ ಸಿಲುಕಿ ಸ್ಥಗಿತಗೊಂಡಿದ್ದ ಕಾರ್ಖಾನೆ ಪುನಶ್ಚೇತನಕ್ಕೆ ಮತ್ತೆ ಆರ್ಥಿಕ ಸಂಪನ್ಮೂಲದ ಕೊರತೆ ಉದ್ಭವವಾಗುವುದು ಸಹಜ. ಬ್ಯಾಂಕ್ಗಳಿಂದ ನೀಡುವ ಸಾಲದ ಮಿತಿಯು ಮುಗಿದಿದ್ದು, ಸರ್ಕಾರವೇ ನೆರವಿನ ಹಸ್ತ ಚಾಚುವುದು ಅತ್ಯಗತ್ಯ.
ಮಾಜಿ ಶಾಸಕರೂ ಆಗಿರುವ ಸುಭಾಷ್ ಕಲ್ಲೂರ್ ಬಿಜೆಪಿ ಮುಖಂಡರು. ಮೇಲಾಗಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಆಪ್ತರು. ಹಾಗಾಗಿ, ಕಾರ್ಖಾನೆ ಆರಂಭಕ್ಕೆ ಮುಖ್ಯಮಂತ್ರಿಗಳಿಂದ ಸಹಾಯ ಸಿಗುವ ನಿರೀಕ್ಷೆಯಲ್ಲಿದ್ದಾರೆ.
ಆದರೆ, ಸಂಸದ ಭಗವಂತ್ ಖುಬಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಗುತ್ತಿಗೆ ನೀಡಲು ಪ್ರಯತ್ನಿಸಿದ್ದರು. ಜಿಲ್ಲೆಯ ಪುರಾತನ ಸಹಕಾರಿ ಕಾರ್ಖಾನೆಯಾಗಿರುವ ಇದಕ್ಕೆ 25 ಸಾವಿರ ಷೇರು ಸದಸ್ಯರಿದ್ದಾರೆ.
ಕಾರ್ಖಾನೆ ಆರಂಭದಿಂದ ಸಾವಿರಾರು ಕಬ್ಬು ಬೆಳೆಯುವ ರೈತ ಕುಟುಂಬಗಳಿಗೆ ನೆಮ್ಮದಿ ಸಿಗಲಿದೆ. ಹಾಗೇ, ಸಂಬಳವಿಲ್ಲದೇ ನಿರುದ್ಯೋಗಿಗಳಾಗಿರುವ ನೂರಾರು ಕಾರ್ಮಿಕರ ಬದುಕಿಗೆ ಬೆಳಕಂತೂ ಆಗಲಿದೆ.