ಬೀದರ್: ನಾಟಕ ಮಾಡಿದ್ದಕ್ಕೆ ದೇಶದ್ರೋಹ ಪ್ರಕರಣ: ಬಂಧಿತರಿಗೆ ಜಾಮೀನು
ಬೀದರ್, ಫೆಬ್ರವರಿ 14: ನಗರದ ಶಾಲೆಯೊಂದರಲ್ಲಿ ಸಿಎಎ ವಿರುದ್ಧ ನಾಟಕ ಮಾಡಿದ್ದಕ್ಕೆ ದೇಶದ್ರೋಹ ಪ್ರಕರಣ ದಾಖಲಿಸಿ ಇಬ್ಬರನ್ನು ಬಂಧಿಸಲಾಗಿತ್ತು. ದೇಶದಾದ್ಯಂತ ಸುದ್ದಿ ಮಾಡಿದ್ದ ಈ ಪ್ರಕರಣದಲ್ಲಿ ಬಂಧಿತರಿಗೆ ಇಂದು ಜಾಮೀನು ದೊರೆತಿದೆ.
ಸಿಎಎ ವಿರುದ್ಧ ಮಕ್ಕಳು ನಾಟಕ ಮಾಡಿದ್ದಕ್ಕೆ ಪೊಲೀಸರು ಶಾಲೆಯ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ, ಶಾಲೆಯ ಮುಖ್ಯೊಪಾಧ್ಯಾಯಿನಿ ಹಾಗೂ ನಾಟಕದಲ್ಲಿ ಸಿಎಎ ವಿರುದ್ಧ ಸಂಭಾಷಣೆ ಒಪ್ಪಿಸಿದ್ದ ಮಗುವಿನ ತಾಯಿಯನ್ನು ಪೊಲೀಸರು ಬಂಧಿಸಿದ್ದರು.
ಬೀದರ್; ಶಾಹಿನ್ ಶಾಲೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ
ಈ ಪ್ರಕರಣದಲ್ಲಿ ಮುಖ್ಯೋಪಾಧ್ಯಾಯಿನಿ ಮತ್ತು ಮಗುವಿನ ತಾಯಿ ಗೆ ಇಂದು ಜಾಮೀನು ದೊರೆತಿದ್ದು, ಅವರನ್ನು ಇಂದೇ ಅಥವಾ ನಾಳೆ ಜೈಲಿನಿಂದ ಬಿಡುಗಡೆ ಮಾಡಲಾಗುತ್ತದೆ.
ಶಾಲೆಗೆ ಭೇಟಿ ನೀಡಿದ ಸಿದ್ದರಾಮಯ್ಯ
ಇದೇ ದಿನ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬೀದರ್ ನ ಶಾಲೆಗೆ ಭೇಟಿ ನೀಡಿ ಅಲ್ಲಿನ ಶಿಕ್ಷಕರು, ಆಡಳಿತ ಮಂಡಳಿಗೆ ಧೈರ್ಯ ನುಡಿದಿದ್ದರು. ಇದೇ ದಿನವೇ ಬಂಧಿತರಿಗೂ ಜಾಮೀನು ದೊರೆತಿದೆ.
ಜನವರಿ ಕೊನೆಯ ವಾರದಲ್ಲಿ ಆಗಿದ್ದ ಬಂಧನ
ಜನವರಿ ಕೊನೆಯ ವಾರದಲ್ಲಿ ಬೀದರ್ ಪೊಲೀಸರು ದೇಶದ್ರೋಹ ಪ್ರಕರಣ ದಾಖಲಿಸಿದ್ದರು. ಅದೇ ವೇಳೆ ಫಾರಿದಾ ಬೇಗಂ ಮತ್ತು ನವೀದಾ ಎಂಬ ಇಬ್ಬರನ್ನು ಪ್ರಕರಣ ಸಂಬಂಧ ಪೊಲೀಸರು ಬಂಧಿಸಿದ್ದರು. ನಾಟಕ ಮಾಡಿದ್ದ ಮಗುವಿನ ತಾಯಿ ನವೀದಾ ಕೂಲಿ ಕಾರ್ಮಿಕೆ ಆಗಿದ್ದು, ಆಕೆಯನ್ನೂ ಸಹ ಬಂಧಿಸಲಾಗಿತ್ತು.
ಬೀದರ್ ದೇಶದ್ರೋಹ ಪ್ರಕರಣ: ಪೊಲೀಸರಿಂದ ಮಕ್ಕಳ ಹಕ್ಕು ಉಲ್ಲಂಘನೆ
ಪ್ರಕರಣ ದೇಶದಾದ್ಯಂತ ಸದ್ದು ಮಾಡಿತ್ತು
ಪ್ರಕರಣ ದೇಶದಾದ್ಯಂತ ಸದ್ದು ಮಾಡಿತ್ತು. ಬಂಧನವನ್ನು ವಿರೋಧಿಸಿ ಪ್ರತಿಭಟನೆಗಳು ನಡೆದವು. ದಿನೇಶ್ ಗುಂಡೂರಾವ್, ರಿಜ್ವಾನ್ ಅರ್ಷದ್ ಸೇರಿ ಹಲವರು ಜೈಲಿಗೆ ಭೇಟಿ ನೀಡಿ ಬಂಧಿತರಿಗೆ ಧೈರ್ಯ ತುಂಬಿದರು. ಕೊನೆಗೆ ಇಂದು ಬಂಧಿತರಿಗೆ ಜಾಮೀನು ಮಂಜೂರು ಮಾಡಲಾಗಿದೆ.
ಮಕ್ಕಳ ಹಕ್ಕು ಆಯೋಗ ನೊಟೀಸ್
ಪ್ರಕರಣ ದಾಖಲಿಸುವ ವೇಳೆ ಪೊಲೀಸರು ಸುಮಾರು 50 ಮಕ್ಕಳನ್ನು ವಿಚಾರಣೆಗೆ ಒಳಪಡಿಸಿದ್ದರು. ಸಮವಸ್ತ್ರ ಧರಿಸಿ ಶಾಲೆಗೆ ಭೇಟಿ ನೀಡಿ ಪೊಲೀಸರು ಮಕ್ಕಳನ್ನು ವಿಚಾರಣೆಗೆ ಒಳಪಡಿಸಿದ್ದರು. ಪೊಲೀಸರ ಈ ಕ್ರಮದ ವಿರುದ್ಧ ಮಕ್ಕಳ ಹಕ್ಕು ರಕ್ಷಣಾ ಸಮಿತಿ ಪೊಲೀಸ್ ಇಲಾಖೆಗೆ ನೊಟೀಸ್ ಜಾರಿ ಮಾಡಿದೆ.