ಬೀದರ್ ಶಾಲೆಯಲ್ಲಿ ಮೋದಿಗೆ ಅವಮಾನ; ಬಂಧಿತರ ಭೇಟಿಯಾದ ರಿಜ್ವಾನ್ ಅರ್ಷದ್
ಬೀದರ್, ಫೆಬ್ರವರಿ ೦4: ಪ್ರಧಾನಿ ಮೋದಿ ಅವರನ್ನು ಅವಮಾನಿಸಿದ್ದಾರೆ ಎಂಬ ಆರೋಪದ ಮೇಲೆ ಬೀದರ್ ನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಶಾಹೀನ್ ನ ಶಿಕ್ಷಕಿ ಹಾಗೂ ವಿದ್ಯಾರ್ಥಿನಿಯ ತಾಯಿಯ ಮೇಲೆ ರಾಷ್ಟ್ರದ್ರೋಹದ ಪ್ರಕರಣ ದಾಖಲಾಗಿದ್ದು, ಇಂದು ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್, ಪ್ರಕರಣದಲ್ಲಿ ಬಂಧಿಯಾದವರನ್ನು ಬೀದರ್ ನ ಜೈಲಿನಲ್ಲಿ ಭೇಟಿಯಾದರು.
ನಿನ್ನೆಯಷ್ಟೇ ಅಸಾದುದ್ದೀನ್ ಓವೈಸಿ ಶಾಹೀನ್ ಶಿಕ್ಷಣ ಸಂಸ್ಥೆಯ ಮುಖ್ಯ ಶಿಕ್ಷಕಿ ಮತ್ತು ಶಾಲೆಯ ವಿದ್ಯಾರ್ಥಿನಿ ತಾಯಿ ಭೇಟಿ ಮಾಡಿ ಅಗತ್ಯ ಕಾನೂನು ನೆರವನ್ನು ನೀಡುವ ಭರವಸೆ ನೀಡಿದ್ದರು. ಇದೀಗ ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಕೂಡ ಅವರನ್ನು ಭೇಟಿ ಮಾಡಿದ್ದಾರೆ.
ಸಿಎಎ ವಿರುದ್ಧ ವಿದ್ಯಾರ್ಥಿಗಳ ನಾಟಕ ಮಾಡಿದ್ದಕ್ಕೆ ಬಿತ್ತು ಕೇಸ್!
ಬೀದರ್ ನ ಪ್ರತಿಷ್ಠಿತ ಶಾಹಿನ್ ಕಾಲೇಜು ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ನಾಟಕ ಪ್ರದರ್ಶಿಸಿದ್ದರು. ಈ ನಾಟಕದಲ್ಲಿ ಪೌರತ್ವ ತಿದ್ದುಪಡಿ ಹಾಗೂ ರಾಷ್ಟ್ರೀಯ ನಾಗರಿಕ ನೊಂದಣಿ ವಿರುದ್ಧ ಉಲ್ಲೇಖಿಸಲಾಗಿತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಅವಹೇಳನ ಮಾಡಲಾಗಿತ್ತು ಎಂದು ಆರೋಪಿಸಲಾಗಿದೆ. ಇತ್ತೀಚಿಗಷ್ಟೇ ಕಾಲೇಜು ವಾರ್ಷಿಕೋತ್ಸವದಲ್ಲಿ ವಿದ್ಯಾರ್ಥಿಗಳು ಪ್ರದರ್ಶಿಸಿದ ನಾಟಕದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸಾಮಾಜಿಕ ಕಾರ್ಯಕರ್ತ ನಿಲೇಶ್ ಎಂಬುವವರು ಈ ಸಂಬಂಧ ಬೀದರ್ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಆಧಾರದಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದರು.