ಪಾರ್ಸೆಲ್ ಅಥವ ಹಣ; ಜನರ ಸಹಾಯಕ್ಕೆ ಬಂತು 'ಅಂಚೆಮಿತ್ರ'
ಬೀದರ್, ಏಪ್ರಿಲ್ 22 : ಕೊರೊನಾ ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಲಾಗಿದೆ. 21 ದಿನಗಳ ಲಾಕ್ ಡೌನ್ ಮುಗಿದ ಬಳಿಕ 19 ದಿನಗಳ ಕಾಲ ಅದನ್ನು ವಿಸ್ತರಣೆ ಮಾಡಲಾಗಿದೆ. ಹಲವಾರು ಸರ್ಕಾರಿ ಕಚೇರಿಗಳು ಬಂದ್ ಆಗಿದ್ದು, ಜನರ ಕೆಲಸಗಳು ಆಗುತ್ತಿಲ್ಲ.
ಭಾರತೀಯ ಅಂಚೆ ಇಲಾಖೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ನೀತಿ ಅಡಿಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದೆ. ಅಂಚೆ ಇಲಾಖೆಯು ಅವಶ್ಯಕವಾದ ಸೇವೆಗಳನ್ನು ಜನರಿಗೆ ಇಂತಹ ಸಂದರ್ಭದಲ್ಲಿಯೂ ನೀಡುತ್ತಿದೆ.
ಸಾರಿಗೆ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಔಷಧಿ, ವೈದ್ಯಕೀಯ ಸಾಮಗ್ರಿಗಳ ಸಾಗಣೆ ಮತ್ತು ಅಂಚೆ ಸೇವೆ ಪಡೆಯುವುದು ಕಠಿಣವಾಗಿದೆ. ಇದರಿಂದಾಗಿ ಇವುಗಳ ಅವಶ್ಯಕತೆ ಇರುವ ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ.
ಭಾರತೀಯ ಅಂಚೆ ಇಲಾಖೆಯು ಅವಶ್ಯಕವಾದ ಸೇವೆಗಳ ಅಡಿಯಲ್ಲಿ ಔಷಧಿಗಳನ್ನು ಅಂಚೆ ಇಲಾಖೆಯ ಮುಖಾಂತರ ಪಡೆಯಲು ವ್ಯವಸ್ಥೆ ಮಾಡಿದೆ. ಇದಕ್ಕಾಗಿ ಇಲಾಖೆ ಅಂಚೆಮಿತ್ರ ಎಂಬ ಅಪ್ಲಿಕೇಶನ್ ಸಿದ್ಧಪಡಿಸಿದೆ. ಜನರು ಇದನ್ನು ಬಳಕೆ ಮಾಡಬಹುದಾಗಿದೆ.
ಔಷಧಿಗಳನ್ನು ಕಳಿಸಿ
ಭಾರತೀಯ ಅಂಚೆ ಇಲಾಖೆಯ ರಿಜಿಸ್ಟರ್, ಸ್ಪೀಡ್ ಪೋಸ್ಟ್ ಅಥವ ಪಾರ್ಸಲ್ ಪೋಸ್ಟ್ ಮೂಲಕ ಔಷಧಿಗಳನ್ನು ಕಳಿಸಲು web-based ಅಂಚೆಮಿತ್ರ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದೆ. ಪ್ರಾರಂಭಿಸಲಾಗಿದೆ. ಗ್ರಾಹಕರು ಈ ಸೇವೆಯನ್ನು ಬಳಕೆ ಮಾಡಿಕೊಳ್ಳಬಹುದು ಎಂದು ಇಲಾಖೆ ಹೇಳಿದೆ.
ಎಲ್ಲಿ ಸಿಗುತ್ತದೆ ಅಪ್ಲಿಕೇಶನ್
https://karnatakapost.gov.in/anchemitra ಮೂಲಕ ಅಂಚೆ ಇಲಾಖೆಯ ಸೇವೆಯನ್ನು ಮನೆಯಲ್ಲಿಯೇ ಕುಳಿತುಕೊಂಡು ಪಡೆಯಬಹುದಾಗಿದೆ ಎಂದು ಅಂಚೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಯಾವ-ಯಾವ ಸೌಲಭ್ಯಗಳು
ಅಂಚೆ ಮಿತ್ರ ಅಪ್ಲಿಕೇಶನ್ ಅಡಿಯಲ್ಲಿ ಔಷಧೀಯ ಸಾಮಗ್ರಿಗಳನ್ನು ವಿಲೇವಾರಿಗಾಗಿ ಮಾಡಬಹುದು. ಪತ್ರ/ಪಾರ್ಸಲ್ಗಳ ಬುಕಿಂಗ್ ಮತ್ತು ವಿಲೇವಾರಿ ಮಾಡಬಹುದು. ಪತ್ರ / ಪಾರ್ಸಲ್ಗಳ ಮರುಸಾಗಣೆ ಮಾಡಬಹುದಾಗಿದೆ.
ಹಣ ಜಮೆ ಮಾಡಬಹುದು
ಈ ಅಪ್ಲಿಕೇಶನ್ ಬಳಕೆ ಮಾಡಿಕೊಂಡು ಅಂಚೆ ಖಾತೆಯಿಂದ ಹಣ ಜಮೆ ಮತ್ತು ತೆಗೆಯಬಹುದಾಗಿದೆ. ಮನಿ ಆರ್ಡರ್ ಹಣವನ್ನು ಉಳಿತಾಯ ಖಾತೆಗೆ ಜಮಾ ಮಾಡುವ ಅನುಮತಿ ಪತ್ರ ಸಲ್ಲಿಸಲು ಉಪಯೋಗಿಸಬಹುದು. ಅಂಚೆ ಜೀವವಿಮೆಯ ಎಲ್ಲಾ ತರದ ಸೇವೆಗಾಗಿ ಇದನ್ನು ಬಳಕೆ ಮಾಡಿಕೊಳ್ಳಬಹುದು.