ಶಾಕಿಂಗ್: 'ವಿನಾಶಕಾರಿ ಮಿಡತೆಗಳು ಕರ್ನಾಟಕಕ್ಕೂ ಬರಬಹುದು'
ಬೀದರ್, ಮೇ 28: ದೇಶ ಕೊರೊನಾವೈರಸ್ ಹಾವಳಿಯಿಂದ ತತ್ತರಿಸಿರುವ ಬೆನ್ನಲ್ಲೇ ವಿನಾಶಕಾರಿಯಾಗಿ ದಾಳಿ ಇಟ್ಟಿರುವ ಮಿಡತೆಗಳು ದೇಶದ ಕೃಷಿ ವಲಯವನ್ನು ಕಂಗಾಲು ಮಾಡಿವೆ.
ಮಧ್ಯ ಏಷಿಯಾ ಕಡೆಯಿಂದ ದಾಳಿ ಇಟ್ಟಿರುವ ಮಿಡತೆಗಳು, ಈಗಾಗಲೇ ರಾಜಸ್ತಾನ್, ಗುಜರಾತ್, ಮಹಾರಾಷ್ಟ್ರದಲ್ಲಿ ಸಂಚಲವನ್ನುಂಟು ಮಾಡಿವೆ. ಸದ್ಯ ಕರ್ನಾಟಕಕ್ಕೆ ಬರದಿದ್ದರೂ, ಮುಂದೆ ಬರಬಹುದು ಎಂಬ ಸಂಶಯವನ್ನು ವ್ಯಕ್ತಪಡಿಸಲಾಗಿದೆ.
ಮಿಡತೆಗಳ ನಿಯಂತ್ರಣ ಹೇಗೆ? ಕರ್ನಾಟಕಕ್ಕೆ ಬರದಂತೆ ತಡೆಯಬಹುದೆ?
ಸದ್ಯ ಮಿಡತೆಗಳ ಗುಂಪು ಮಹಾರಾಷ್ಟ್ರದ ನಾಗ್ಪುರದಲ್ಲಿರುವ ಮಾಹಿತಿ ಇದೆ. ಈ ಮಿಡತೆ ದಂಡು ಕರ್ನಾಟಕದ ಬೀದರ ಜಿಲ್ಲೆಗೂ ಲಗ್ಗೆಯಿಡುವ ಸಾಧ್ಯತೆ ಎಂದು ಜಿಲ್ಲಾಧಿಕಾರಿ ಎಚ್.ಆರ್ ಮಹದೇವ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಜಿಲ್ಲೆಯ ಎಲ್ಲ ರೈತರಿಗೆ ಬೆಳೆ ಉಳಿಸಿಕೊಳ್ಳಲು ಸೂಚನೆ ನೀಡಿದ್ದೇವೆ. ತಾಲೂಕು ಮಟ್ಟದ ಅಧಿಕಾರಿಗಳ ಮೂಲಕ ಜಿಲ್ಲೆಯ ಜನತೆಗೆ ಸೂಚನೆ ನೀಡಿದ್ದೇನೆ ಎಂದು ಬೀದರ್ ಜಿಲ್ಲಾಧಿಕಾರಿ ಹೇಳಿದ್ದಾರೆ.
ಮುಂಜಾಗ್ರತೆ ಕ್ರಮ ವಹಿಸಲು ಅರಣ್ಯಾಧಿಕಾರಿಗಳಿಗೂ ಈ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಒಂದು ವೇಳೆ ಮಿಡತೆ ದಾಳಿ ನಡೆದರೆ ಜೈವಿಕ ಕೀಟನಾಶಕಗಳ ಕೊರತೆಯಾಗಬಾರದು. ಜಿಲ್ಲೆಯಲ್ಲಿ ಎಲ್ಲ ಬೆಳೆಗಳ ಸಮೀಕ್ಷೆ ನಡೆಸಲು ಆದೇಶ ಮಾಡಲಾಗಿದೆ ಎಂದು ಬೀದರ್ ಜಿಲ್ಲಾಧಿಕಾರಿ ಮಹದೇವ್ ಹೇಳಿದ್ದಾರೆ.