ವರಿಷ್ಠರಿಂದ ಬಿಎಸ್ವೈ ಹಿಂಡಿ ಹಿಪ್ಪೆ: ಅವರಿಗೆ ಕಾಂಗ್ರೆಸ್ಸಿಗೆ ಮುಕ್ತ ಸ್ವಾಗತ..ಸ್ವಾಗತ..
ಬೀದರ್, ನ 8: "ನಮ್ಮಲ್ಲಿ ಮುಖ್ಯಮಂತ್ರಿಯಾಗಲು ಅರ್ಹರಿರುವ ಹಲವಾರು ಮುಖಂಡರಿದ್ದಾರೆ. ಸಿಎಂ ಆಗಬೇಕೆಂದು ಬಯಸುವುದರಲ್ಲಿ ತಪ್ಪೇನಿದೆ. ನಮ್ಮಲ್ಲಿ ಯಾವುದೇ ಗೊಂದಲವಿಲ್ಲ" ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದರು.
ಭಾಲ್ಕಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಖಂಡ್ರೆ, "ಯಡಿಯೂರಪ್ಪನವರು ಈ ರಾಜ್ಯದ ಮುಖ್ಯಮಂತ್ರಿ. ಏಳು ಕೋಟಿ ಜನರ ಪ್ರತಿನಿಧಿ. ಅವರಿಗೇ ಪ್ರಧಾನಿ ಮೋದಿಯವರು, ಬರ ಪರಿಹಾರದ ವಿಚಾರದಲ್ಲಿ ಅಪಾಯಿಂಟ್ಮೆಂಟ್ ಕೊಟ್ಟಿಲ್ಲ" ಎಂದು ಬೇಸರ ವ್ಯಕ್ತಪಡಿಸಿದರು.
ಉಪಚುನಾವಣೆ: ರಾಜ್ಯದ ಇಬ್ಬರು ನಾಯಕರನ್ನು ಅಗ್ನಿಪರೀಕ್ಷೆಗೆ ದೂಡಿದ ಅಮಿತ್ ಶಾ
ನೀವು ಬಿಜೆಪಿಗೆ ಸೇರ್ಪಡೆಯಾಗುತ್ತೀರಾ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಖಂಡ್ರೆ, "ನಾನ್ಯಾಕೆ ಬಿಜೆಪಿ ಸೇರಲಿ. ಯಡಿಯೂರಪ್ಪನವರೇ ಕಾಂಗ್ರೆಸ್ಸಿಗೆ ಬರಲಿ. ಮುಕ್ತವಾಗಿ ಅವರನ್ನು ನಮ್ಮ ಪಕ್ಷಕ್ಕೆ ಸ್ವಾಗತಿಸುತ್ತೇವೆ" ಎಂದು ಆಹ್ವಾನ ನೀಡಿದರು.
"ನಮ್ಮ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವವಿದೆ. ನಮಗೆ ಬಹುಮತ ಬಂದಾಗ, ಯಾರು ಸಿಎಂ ಆಗಬೇಕು ಎನ್ನುವುದನ್ನು ವರಿಷ್ಠರು ತೀರ್ಮಾನಿಸುತ್ತಾರೆ. ಯಡಿಯೂರಪ್ಪನವರಿಗೆ ಬಿಜೆಪಿಯಲ್ಲಿ ಭಾರೀ ಕಿರುಕುಳ ನೀಡಲಾಗುತ್ತಿದೆ" ಎಂದು ಈಶ್ವರ್ ಖಂಡ್ರೆ ಹೇಳಿದರು.
"ಯಡಿಯೂರಪ್ಪನವರಿಗೆ ಸ್ವಾಭಿಮಾನವಿದ್ದರೆ ಬಿಜೆಪಿ ಬಿಟ್ಟು ಕಾಂಗ್ರೆಸ್ಸಿಗೆ ಬರಲಿ. ಅವರನ್ನು ಯಾವರೀತಿ ಹಿಂಡಿಹಿಪ್ಪೆ ಮಾಡುತ್ತಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ" ಎಂದು ಖಂಡ್ರೆ ಹೇಳಿದರು.
"ಯಡಿಯೂರಪ್ಪನವರದ್ದು ರಾಜ್ಯ ಬಿಜೆಪಿಯಲ್ಲಿ ಏನಾದರೂ ನಡೆಯುತ್ತಿದೆಯಾ" ಎಂದು ಪ್ರಶ್ನಿಸಿರುವ ಖಂಡ್ರೆ, "ಎಲ್ಲಾ ಮೇಲಿಂದಲೇ (ವರಿಷ್ಠರು) ಅವರಿಗೆ ಬರಬೇಕು" ಎಂದು ಈಶ್ವರ್ ಖಂಡ್ರೆ ಲೇವಡಿ ಮಾಡಿದರು.