ಯಡಿಯೂರಪ್ಪ ಮುಂದೆ ಪ್ರಾಯಶ್ಚಿತ್ತ ಪಡಬೇಕಾಗುತ್ತದೆ: ಎಚ್ಡಿಕೆ
ಬೀದರ್, ಏಪ್ರಿಲ್ 10: ಸಾರಿಗೆ ಸಂಸ್ಥೆ ನೌಕರರ ಮುಷ್ಕರದ ವಿಚಾರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ದ ಬಸವಕಲ್ಯಾಣದಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
"ಸಿಎಂ ತಮ್ಮ ಉದ್ಧಟತನ ಬಿಟ್ಟು ಸಾರಿಗೆ ನೌಕರರ ಮನವೊಲಿಸಬೇಕು, ಸಿಎಂ ಆಗಲಿ, ಸಚಿವರಾಗಲಿ ಯಾರೂ ಮೇಲಿಂದ ಇಳಿದು ಬಂದಿಲ್ಲಾ. ಯಾರಿಗೂ ಇದು ಶಾಶ್ವತವಲ್ಲ"ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಸಾರಿಗೆ ನೌಕರರ ಮುಷ್ಕರ; ಅರ್. ಅಶೋಕ ಅಚ್ಚರಿಯ ಹೇಳಿಕೆ!
"ಇವರ ಉದ್ಧಟತನ, ನಡುವಳಿಕೆಗಳಿಯಿಂದಾಗಿ ಮುಂದೆ ದೊಡ್ಡ ಪ್ರಾಯಶ್ಚಿತ್ತವನ್ನು ಅನುಭವಿಸುತ್ತಾರೆ. ಇಂಥದಕ್ಕೆಲ್ಲಾ ಅವಕಾಶ ಕೊಡಬಾರದು. ಸಾರಿಗೆ ನೌಕರರ ಮನವೊಲಿಸಿ ಸಾರ್ವಜನಿಕರಿಗೆ ಆಗುತ್ತಿರುವ ಅನಾನುಕೂಲಗಳನ್ನು ತಪ್ಪಿಸ ಬೇಕಿರುವುದು ಸರ್ಕಾರದ ಜವಾಬ್ದಾರಿ"ಎಂದು ಕುಮಾರಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ.
"ಸರ್ಕಾರ ಇರೋದು ಯಾಕೆ? ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿದೆ, ಮಾತುಕತೆಗೆ ಕರೆಯುವುದಿಲ್ಲ ಅಂದರೆ ಇವರು ಯಾತಕ್ಕಾಗಿ ವಿಧಾನಸೌಧದಲ್ಲಿ ಇರೋದು. ಖಜಾನೆ ಖಾಲಿಯಾಗಿಲ್ಲಾ, ಖಜಾನೆ ಇವರು ಖಾಲಿ ಮಾಡುತ್ತಿದ್ದಾರೆ"ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
"ಇದೇ ರೀತಿ ನಿಮ್ಮ ಉದ್ಧಟತನ ಮುಂದುವರಿದರೆ "ಬಿಜೆಪಿ ಮುಕ್ತ" ಆಗೋ ದಿನಗಳು ದೂರ ಇಲ್ಲಾ. ಈ ಉದ್ಧಟತನ ಬಿಟ್ಟು ಮೊದಲು ಸಾರಿಗೆ ನೌಕರ ಸಮಸ್ಯೆಯನ್ನು ಸಿಎಂ, ಸಚಿವರು ಬಗೆಹರಿಸುವ ಕಡೆ ಗಮನ ಹರಿಸಬೇಕು"ಎಂದು ಕುಮಾರಸ್ವಾಮಿ ಹೇಳಿದರು.
ಸಾರಿಗೆ ಮುಷ್ಕರ; ನೌಕರರಿಗೆ ಮತ್ತೊಂದು ಕರೆ ಕೊಟ್ಟ ಯಡಿಯೂರಪ್ಪ
"7 ಜಿಲ್ಲೆಯ 8 ನಗರದಲ್ಲಿ ನೈಟ್ ಕರ್ಫ್ಯೂ ಎಷ್ಟರ ಮಟ್ಟಿಗೆ ಅನುಕೂಲವಾಗುತ್ತೋ ಗೊತ್ತಿಲ್ಲಾ. ಈ ನೈಟ್ ಕಪ್ರ್ಯೂ ಎಷ್ಟರ ಮಟ್ಟಿಗೆ ಸಫಲವಾಗುತ್ತೆ ಎನ್ನೋದನ್ನು ಕಾದು ನೋಡೋಣ"ಎಂದು ಕುಮಾರಸ್ವಾಮಿ ಹೇಳಿದ್ದಾರೆ.