ಕೊರೋನಾ ಅಟ್ಟಹಾಸ : ಫೇಸ್ಬುಕ್ ಲೈವ್ಗೆ ಈಶ್ವರ್ ಖಂಡ್ರೆ ಮೊರೆ
ಬೀದರ್, ಏಪ್ರಿಲ್ 23: ಬೀದರ್ ಜಿಲ್ಲೆಯಲ್ಲಿ ಕೊರೋನಾ ಅಟ್ಟಹಾಸ ಮುಂದುವರೆದಿದ್ದು, ಜನ ಆತಂಕದಲ್ಲೇ ಕಾಲ ಕಳೆಯುತ್ತಿದ್ದರೆ ಜನಪ್ರತಿನಿಧಿಗಳು ಸಹ ಆನ್ಲೈನ್ ಸಭೆಗೆ ಮೊರೆ ಹೋಗುತ್ತಿದ್ದಾರೆ.
ಹೌದು, ಭಾಲ್ಕಿ ಶಾಸಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಕೊರೋನಾ ನಿಯಂತ್ರಣ ಕುರಿತು ಶುಕ್ರವಾರ ಭಾಲ್ಕಿ ತಾಲೂಕಾ ಅಧಿಕಾರಿಗಳ ಜೊತೆ ಝೂಮ್ ಫೇಸ್ ಬುಕ್ ಲೈವ್ನಲ್ಲಿ ಸಭೆ ನಡೆಸಿದ್ದಾರೆ.
ಕೊರೊನಾ ಲಸಿಕೆ ಅಪ್ಡೇಟ್: ಬೆಲೆ, ನೋಂದಣಿ ಸಂಪೂರ್ಣ FAQs
ಕೊರೋನಾ ನಿಯಮಗಳನ್ನು ಅಧಿಕಾರಿಗಳು ಕಡ್ಡಾಯವಾಗಿ ಪಾಲನೆ ಮಾಡಬೇಕು. ಈ ಬಗ್ಗೆ ವರದಿ ಸಲ್ಲಿಸಿ, ಬೇಸಿಗೆ ಕಾಲ ಸಮೀಪಿಸುತ್ತಿದ್ದ ಹಿನ್ನೆಲೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ವ್ಯಾಪಕವಾಗಿ ಸೋಂಕು ಹರಡುತ್ತಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. ಸಾವಿನ ಸಂಖ್ಯೆಯಲ್ಲೂ ತೀವ್ರಗತಿಯಲ್ಲಿ ಏರಿಕೆಯಾಗುತ್ತಿರುವುದು ಜನರ ಆತಂಕ ಹೆಚ್ಚಲು ಕಾರಣವಾಗಿದೆ.
ಗುರುವಾರದ ವರದಿಯಲ್ಲಿ 396 ಮಂದಿಗೆ ಸೋಂಕು ಖಾತ್ರಿಯಾಗಿದೆ. ಮೂವರು ಸೋಂಕಿನಿಂದ ಸಾವನ್ನಪ್ಪಿದ್ದು, ಜಿಲ್ಲೆಯಲ್ಲಿ 3053 ಸಕ್ರಿಯ ಸೋಂಕು ಪ್ರಕರಣಗಳಿವೆ.