ಮತ್ತೆ ಆಪರೇಷನ್ ಕಮಲ: ಸುಳಿವು ನೀಡಿದ ಯಡಿಯೂರಪ್ಪ
Recommended Video
ಬೀದರ್, ಫೆಬ್ರವರಿ 22: ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ 22 ಕ್ಷೇತ್ರ ಗೆಲ್ಲುತ್ತದೆ ಅದಾದ 24 ಗಂಟೆ ಒಳಗೆ ಮೈತ್ರಿ ಸರ್ಕಾರ ಉರುಳುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿದ್ದಾರೆ.
ಆಪರೇಷನ್ ಕಮಲ ಆಡಿಯೋ ಪ್ರಕರಣದ ಬಳಿಕ ಆಪರೇಷನ್ ಕಮಲಕ್ಕೆ ಬ್ರೇಕ್ ಹಾಕಿದ್ದ ಯಡಿಯೂರಪ್ಪ ಅವರು ಈಗ ಮತ್ತೆ ಸರ್ಕಾರ ಬೀಳಿಸುವ ಮಾತನ್ನಾಡಿದ್ದಾರೆ. ಆದರೆ ಅದು ಲೋಕಸಭೆ ಚುನಾವಣೆ ಬಳಿಕ ಎಂದು ಬಿಎಸ್ವೈ ಹೇಳಿದ್ದಾರೆ.
ಬೀದರ್ನ ಮೋದಿ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ನಮ್ಮ ರಾಜ್ಯದ ದುರ್ದೈವ 37 ಸೀಟು ಗೆದ್ದವರು ಸಿಎಂ ಆದರು ಎಂದಿರುವ ಅವರು, ಲೋಕಸಭೆ ಚುನಾವಣೆ ಬಳಿಕ ರಾಜ್ಯ ರಾಜಕೀಯ ಚಿತ್ರಣ ಬದಲು ಮಾಡುತ್ತೇವೆ ಎಂದಿದ್ದಾರೆ.+
ಯಡಿಯೂರಪ್ಪ ಅವರು ಶರಣಗೌಡ ಅವರ ಬಳಿ ಆಪರೇಷನ್ ಕಮಲದ ಬಗ್ಗೆ ಮಾತನಾಡಿ ಅದರ ಆಡಿಯೋವನ್ನು ಸಿಎಂ ಕುಮಾರಸ್ವಾಮಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಮೇಲೆ ಯಡಿಯೂರಪ್ಪ ಅವರು ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಾಯಿತು.
ಆಡಿಯೋ ಬಿಡುಗಡೆ ಬಳಿಕ ಮಂಕು
ಆಡಿಯೋ ಬಿಡುಗಡೆ ಆಗುವವರೆಗೂ ಜೋರಿನಿಂದ ನಡೆಯುತ್ತಿದ್ದ ಸರ್ಕಾರ ಬೀಳಿಸುವ ಯತ್ನಗಳು ಹಠಾತ್ತನೆ ತೆರೆಗೆ ಸರಿದವು. ಆದರೆ ಆಪರೇಷನ್ ಕಮಲಕ್ಕೆ ಪೂರ್ಣ ಬ್ರೇಕ್ ಬಿದ್ದಿಲ್ಲ ಎಂಬುದನ್ನು ಯಡಿಯೂರಪ್ಪ ಅವರು ಇಂದು ಸೂಚ್ಯಗೊಳಿಸಿದ್ದಾರೆ.
ಬಿಜೆಪಿ ಹೆಚ್ಚು ಸ್ಥಾನ ಗೆದ್ದರೆ ಆಪರೇಷನ್ ಕಮಲ
ಲೋಕಸಭೆ ಚುನಾವಣೆಯಲ್ಲಿ ಒಂದು ವೇಳೆ ರಾಜ್ಯದಲ್ಲಿ ಬಿಜೆಪಿ ಹೆಚ್ಚು ಸ್ಥಾನ ಪಡೆದರೆ ಕೂಡಲೇ ಆಪರೇಷನ್ ಕಮಲ ಪ್ರಾರಂಭಿಸಲಾಗುವುದು ಎಂದು ಯಡಿಯೂರಪ್ಪ ಹೇಳಿದ್ದಾರೆ. ಒಂದು ವೇಳೆ ಹೆಚ್ಚು ಸ್ಥಾನ ಬಾರದಿದ್ದ ಪಕ್ಷದಲ್ಲಿ ಮೈತ್ರಿ ಸರ್ಕಾರ ಅಬಾಧಿತ ಎಂದೇ ಎಣಿಸಲಾಗುತ್ತಿದೆ.
ಎಂಟು ತಿಂಗಳಿಂದಲೂ ಇದೇ ಮಾತು
ಮೈತ್ರಿ ಸರ್ಕಾರ ರಚನೆ ಆದಾಗಿನಿಂದಲೂ ರಾಜ್ಯ ಬಿಜೆಪಿಯು ಸರ್ಕಾರವನ್ನು ಉರುಳಿಸುವ ಮಾತುಗಳನ್ನು ಆಡುತ್ತಲೇ ಇದೆ. ಆದರೆ ಈವರೆಗೂ ಒಂದೂ ಫಲ ನೀಡಿಲ್ಲ. ಬಿಜೆಪಿಯು ಇನ್ನೇನು ಸರ್ಕಾರವನ್ನು ಬೀಳಿಸಿಯೇ ಬಿಡುತ್ತದೆ ಎನ್ನಲಾಗಿತ್ತು. ಆದರೆ ಅಷ್ಟರಲ್ಲಿ ಕುಮಾರಸ್ವಾಮಿ ಅವರು ಆಡಿಯೋ ಬಾಂಬ್ ಹಾಕಿ ಬಿಜೆಪಿ ಆಸೆಗೆ ತಣ್ಣೀರೆರಚಿದರು.
ಸಿಎಂ ಯಾರಿಗೆ ನಿಷ್ಠರು?
ಬೀದರ್ನ ಕಾರ್ಯಕ್ರಮದಲ್ಲಿ ಸಿಎಂ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದಿರುವ ಯಡಿಯೂರಪ್ಪ, ಕುಮಾರಸ್ವಾಮಿ ಅವರು, 'ನನ್ನನ್ನು ಸಿಎಂ ಮಾಡಿದ್ದು, ರಾಹುಲ್ ಗಾಂಧಿ, ಸೋನಿಯಾ ಗಾಂಧಿ' ಎನ್ನುತ್ತಾರೆ ಹಾಗಾದರೆ ಅವರು ಯಾರಿಗೆ ನಿಷ್ಟರು, ಜನಕ್ಕಾ ಅಥವಾ ಕಾಂಗ್ರೆಸ್ಗಾ? ಎಂದು ಪ್ರಶ್ನೆ ಮಾಡಿದ್ದಾರೆ.