ಹಕ್ಕಿ ಜ್ವರ; ವೈಜ್ಞಾನಿಕ ರೀತಿಯಲ್ಲಿ ಕೋಳಿಗಳ ನಾಶ ಮಾಡಲು ಆದೇಶ
ಬೀದರ, ಮಾರ್ಚ್ 17: ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಕುಂಬಾರಕೊಪ್ಪಲು ಗ್ರಾಮದಲ್ಲಿರುವ ಮಾಂಸದ ಕೋಳಿ ಫಾರ್ಮ್ನಲ್ಲಿರುವ ಸುಮಾರು 4500 ಮಾಂಸದ ಕೋಳಿಗಳನ್ನು ಹಾಗೂ 4500 ಹಿತ್ತಲ ಕೋಳಿಗಳನ್ನು ವೈಜ್ಞಾನಿಕವಾಗಿ ನಾಶ ಮಾಡಲಾಗಿದೆ. ಅದೇ ರೀತಿ ಹಕ್ಕಿಜ್ವರ ಕಂಡು ಬಂದ ಕೋಳಿ ಪಾರ್ಮನಲ್ಲಿ ಇಂದಿನಿಂದ ವೈಜ್ಞಾನಿಕ ರೀತಿಯಲ್ಲಿ ನಮ್ಮ ಇಲಾಖೆಯ ಅಧಿಕಾರಿಗಳು ಕೋಳಿಗಳನ್ನು ನಾಶ ಮಾಡಲಿದ್ದಾರೆ ಎಂದು ಪಶುಸಂಗೋಪನೆ ಸಚಿವರಾದ ಪ್ರಭು ಚವ್ಹಾಣ್ ತಿಳಿಸಿದ್ದಾರೆ.
ವೈಜ್ಞಾನಿಕವಾಗಿ 2 ಮೀಟರ್ ಉದ್ದ, ಅಗಲ ಹಾಗೂ 2 ಮೀ ಆಳದ ಗುಂಡಿ ತೆಗೆದು ಕೋಳಿಗಳನ್ನು ಅವುಗಳಲ್ಲಿ ಹೂಳಲಾಗುತ್ತದೆ. ಈ ಸಂದರ್ಭದಲ್ಲಿ ಸುಣ್ಣ ಮತ್ತು ಮಣ್ಣನ್ನು ಪದರುಗಳಲ್ಲಿ ಹಾಕಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತದೆ. ನಾಶ ಮಾಡಲಾದ ಸ್ಥಳದಲ್ಲಿ 3 ತಿಂಗಳ ಕಾಲ ನಿರ್ಧಾರಿತ ಸೋಂಕು ಪ್ರದೇಶದಲ್ಲಿ ಯಾವುದೇ ಕುಕ್ಕುಟ ಚಟುವಟಿಕೆಗಳನ್ನು ನಡೆಸುವಂತಿಲ್ಲ. ಸೋಂಕಿತ ಪ್ರದೇಶದಲ್ಲಿ 3 ತಿಂಗಳ ವರೆಗೆ ಸರ್ವೇಕ್ಷಣಾ ಕಾರ್ಯ ನಡೆಯಲಿದೆ ಎಂದರು.
ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಅನ್ವಯ ಸೋಂಕು ಹಿನ್ನೆಲೆಯಲ್ಲಿ ನಾಶಗೊಳಿಸಿದ ಕೋಳಿಗಳಿಗೆ ಪರಿಹಾರ ಸಹ ನೀಡಲಾಗುತ್ತದೆ. 8 ವಾರದ ಒಳಗಿನ ಮೊಟ್ಟೆ ನೀಡುವ ಪ್ರತಿ ಕೋಳಿಗೆ ರೂ.20 ಹಾಗೂ 8 ವಾರ ಮೇಲ್ಪಟ್ಟ ಕೋಳಿಗೆ ರೂ.90 ನೀಡಲಾಗುವುದು. ಅದರಂತೆ ಮಾಸಂದ ಕೋಳಿಗಳಿಗೆ 6 ವಾರದ ಒಳಗಿನವುಗಳಿಗೆ ರೂ.20 ಹಾಗೂ 6 ವಾರ ಮೇಲ್ಪಟ್ಟ ಮಾಂಸದ ಕೋಳಿಗೆ ರೂ.70 ನೀಡಲಾಗುತ್ತದೆ ಎಂದರು.
ಸೋಂಕು ತಗುಲಿದ ವ್ಯಾಪ್ತಿಯಲ್ಲಿ ಲಭ್ಯವಿರುವ ಮೊಟ್ಟೆಗಳನ್ನು ಸಹ ನಾಶ ಮಾಡಲು ಕ್ರಮ ವಹಿಸಲಾಗುತ್ತಿದೆ. ಪ್ರತಿ ಮೊಟ್ಟೆಗೆ ರೂ.3 ರಂತೆ ಕುಕ್ಕುಟ ಆಹಾರಕ್ಕೆ ಪ್ರತಿ 1 ಕೆ.ಜಿ.ಗೆ ರೂ.12 ರಂತೆ ಪರಿಹಾರ ನೀಡಲಾಗುವುದು ಎಂದರು. ಮೈಸೂರು ಹಾಗೂ ದಾವಣೆಗೆರೆಯಲ್ಲಿ ಸುಮಾರು 10167 ಕೋಳಿಗಳನ್ನು ಕಲ್ಲಿಂಗ್ ಮಾಡಲಾಗುತ್ತದೆ. ಕೋರೊನಾ ಭೀತಿಯಿಂದ ಕೋಳಿ ಮಾಂಸದ ಸೇವನೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇದರಿಂದಾಗಿ ಕೋಳಿ ಸಾಕಾಣಿಕೆ ಮತ್ತು ಮಾರಾಟದ ವೆಚ್ಚದಲ್ಲಿ ಸಾಕಷ್ಟು ವ್ಯತ್ಯಾಸ ಕಂಡುಬಂದಿದ್ದು ಮುಂದಿನ ನಷ್ಟವನ್ನು ತಪ್ಪಿಸಲು ಅನೇಕ ಫಾರಂ ಮಾಲೀಕರು ಕೋಳಿಗಳನ್ನು ಸ್ವಯಿಚ್ಚೆಯಿಂದ ವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತಿದ್ದಾರೆ. ಇವುಗಳಿಗೆ ಯಾವುದೇ ರೀತಿಯ ಪರಿಹಾರ ಸರ್ಕಾರದಿಂದ ದೊರೆಯುವುದಿಲ್ಲ ಎಂದು ಸಚಿವರು ತಿಳಿಸಿದ್ದಾರೆ.