ಬೀದರ್ ದೇಶದ್ರೋಹ ಪ್ರಕರಣ: ಪೊಲೀಸರಿಂದ ಮಕ್ಕಳ ಹಕ್ಕು ಉಲ್ಲಂಘನೆ
ಬೀದರ್, ಫೆಬ್ರವರಿ 08: ಶಾಲೆಯ ಮಕ್ಕಳು ಸಿಎಎ-ಎನ್ಆರ್ಸಿ ವಿರುದ್ಧವಾಗಿ ನಾಟಕ ಆಡಿದಕ್ಕೆ ದೇಶದ್ರೋಹ ಪ್ರಕರಣ ದಾಖಲಿಸಿರುವ ಪೊಲೀಸರಿಗೆ, ಪ್ರಕರಣದ ಸಲುವಾಗಿ ಮಕ್ಕಳನ್ನು ವಿಚಾರಣೆ ನಡೆಸುವುದನ್ನು ನಿಲ್ಲಿಸಲು ಸೂಚಿಸಲಾಗಿದೆ.
ಬೀದರ್ನ ಶಾಲೆಯೊಂದರಲ್ಲಿ ಮಕ್ಕಳು ಸಿಎಎ-ಎನ್ಆರ್ಸಿ ವಿರುದ್ಧ ನಾಟಕ ಪ್ರದರ್ಶನ ನೀಡಿದ್ದರು. ಇದರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿರುವ ಪೊಲೀಸರು, ಮಗುವಿನ ತಾಯಿಯನ್ನು ಹಾಗೂ ಶಾಲೆಯ ಮುಖ್ಯೋಪಾಧ್ಯಾಯಿನಿಯನ್ನು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಬಾರಿ ಶಾಲೆಗೆ ಭೇಟಿ ನೀಡಿ ಮಕ್ಕಳ ವಿಚಾರಣೆ ನಡೆಸಿದ್ದಾರೆ. ಈ ಘಟನೆ ಬಗ್ಗೆ ತೀವ್ರ ಆಕ್ರೋಶ ಕೇಳಿಬಂದಿತ್ತು.
ಮಕ್ಕಳ ಮೇಲೆ ಕಾನೂನು ಕತ್ತಿ: ಪೊಲೀಸರಿಗೆ ಪೋಷಕರ ಪ್ರಶ್ನೆಗಳು
ಕರ್ನಾಟಕ ರಾಜ್ಯ ಮಕ್ಕಳ ಹಕ್ಕು ರಕ್ಷಣಾ ಸಮಿತಿಯು ಬೀದರ್ ಪೊಲೀಸ್ ಎಸ್ಪಿ ಗೆ ಪತ್ರ ಬರೆದಿದ್ದು, ಮಕ್ಕಳನ್ನು ವಿಚಾರಣೆ ನಡೆಸದಂತೆ ಕೋರಿದೆ. 'ಭಯ ಉತ್ಪಾದಿಸುವ ವಾತಾವರಣ'ವನ್ನು ಮಕ್ಕಳ ಸುತ್ತಾ ಸೃಷ್ಟಿಸದಿರಿ ಎಂದು ಪತ್ರದಲ್ಲಿ ಹೇಳಲಾಗಿದೆ. ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೂ ಪತ್ರದ ಪ್ರತಿ ರವಾನಿಸಲಾಗಿದೆ.
ಆರುಕ್ಕೂ ಹೆಚ್ಚು ಬಾರಿ ಹಲವು ಗಂಟೆಗಳು ಈಗಾಗಲೇ ಪೊಲೀಸರು ಮಕ್ಕಳ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಪೊಲೀಸರು ಕಾನೂನು ಉಲ್ಲಂಘಿಸಿರುವುದನ್ನು ಮಕ್ಕಳ ಹಕ್ಕು ರಕ್ಷಣಾ ಸಮಿತಿ ಗಮಿನಿಸಿದ್ದು, ಈ ಬಗ್ಗೆ ಸಹ ದೂರು ನೀಡಿದೆ. ಮಗುವಿನ ವಿಧವೆ ತಾಯಿಯನ್ನು ಜೈಲಿಗೆ ಕಳುಹಿಸುವ ಮುನ್ನಾ ಮಕ್ಕಳ ಸಂರಕ್ಷಣಾ ಸಮಿತಿಗೆ ಮಾಹಿತಿ ನೀಡದೇ ಪಕ್ಕದ ಮನೆಯವರಿಗೆ ಮಗುವನ್ನು ಹಸ್ತಾಂತರಿಸಿದ್ದಾರೆ ಇದು ಕಾನೂನಿನ ಉಲ್ಲಂಘನೆ ಎಂದು ರಕ್ಷಣಾ ಸಮಿತಿ ಹೇಳಿದೆ.
ಬೀದರ್ ಶಾಲೆಯಲ್ಲಿ ಮೋದಿಗೆ ಅವಮಾನ; ಶಾಲೆ ನೆರವಿಗೆ ನಿಂತ ಓವೈಸಿ
'ಶಾಲೆಯ ಶಿಕ್ಷಕರು, ವಿಚಾರಣೆಯ ಚಿತ್ರಗಳು, ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿದ ನಂತರ ಪೊಲೀಸರು ಮಕ್ಕಳ ಹಕ್ಕನ್ನು ಉಲ್ಲಂಘಿಸಿರುವುದು ಖಾತ್ರಿಯಾಗಿದೆ, ಪೊಲೀಸರು ಸಮವಸ್ತ್ರ ಧರಿಸಿ ಮಕ್ಕಳ ವಿಚಾರಣೆ ನಡೆಸಿದ್ದಾರೆ ಇದು ಕಾನೂನು ಉಲ್ಲಂಘನೆ' ಎಂದು ರಾಜ್ಯ ಮಕ್ಕಳ ಹಕ್ಕು ರಕ್ಷಣಾ ಸಮಿತಿ ಅಧ್ಯಕ್ಷ ಆಂಟೋನಿ ಸೆಬಾಸ್ಟಿಯನ್ ಹೇಳಿದ್ದಾರೆ.
ಪೊಲೀಸರು ಹಲವು ಹಂತಗಳಲ್ಲಿ ಜ್ಯುಲಿಯಾನ್ ಜಸ್ಟಿಸ್ ಕಾಯ್ದೆ 2000 ಅನ್ನು ಉಲ್ಲಂಘಿಸಿದ್ದಾರೆ. ಪೊಲೀಸರ ವಿಚಾರಣೆ ನಂತರ ವಿದ್ಯಾರ್ಥಿಗಳು ಶಾಲೆಗೆ ಬರುವುದನ್ನು ಬಿಟ್ಟಿದ್ದರು. ಅವರು ಭಯಗೊಂಡಿದ್ದಾರೆ ಎಂದೂ ಸಹ ಪತ್ರದಲ್ಲಿ ಮಕ್ಕಳ ಹಕ್ಕು ರಕ್ಷಣಾ ಸಮಿತಿ ಅಧ್ಯಕ್ಷ ಹೇಳಿದ್ದಾರೆ.
ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಟಕವಾಡಿದ ಮಗುವಿನ ವಿಧವೆ ತಾಯಿಯನ್ನು ಬಂಧಿಸಲಾಗಿದೆ. ಜೊತೆಗೆ ಶಾಲೆಯ ಮುಖ್ಯೋಪಾಧ್ಯಿಯಿನಿಯನ್ನೂ ಬಂಧಿಸಲಾಗಿದೆ.