ಬೀದರ್ ಚುನಾವಣಾ ಚಿತ್ರಣ : ಈಶ್ವರ ಖಂಡ್ರೆ v/s ಭಗವಂತ ಖೂಬಾ
ಬೀದರ್, ಏಪ್ರಿಲ್ 15 : ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರೇ ಚುನಾವಣಾ ಕಣಕ್ಕಿಳಿದಿರುವ ಕ್ಷೇತ್ರ ಬೀದರ್. ಬಿಜೆಪಿ ವಶದಲ್ಲಿರುವ ಕ್ಷೇತ್ರವನ್ನು ಕೈ ವಶ ಮಾಡಿಕೊಳ್ಳಬೇಕು ಎಂದು ಕಾಂಗ್ರೆಸ್-ಜೆಡಿಎಸ್ ತಂತ್ರ ರೂಪಿಸಿವೆ.
ಬೀದರ್ ಲೋಕಸಭಾ ಕ್ಷೇತ್ರದ ಚುನಾವಣೆ ಏಪ್ರಿಲ್ 23ರಂದು ನಡೆಯಲಿದೆ. ಬಿಜೆಪಿಯಿಂದ ಹಾಲಿ ಸಂಸದ ಭಗವಂತ ಖೂಬಾ ಅಭ್ಯರ್ಥಿ. ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಯಾಗಿ ಈಶ್ವರ ಖಂಡ್ರೆ ಅವರು ಕಣದಲ್ಲಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಬಿಜೆಪಿಯ ಗೆಲುವಿಗೆ ತಡೆ ಹಾಕಲಿದೆಯೇ? ಕಾದು ನೋಡಬೇಕು.
2008ರ ತನಕ ಮೀಸಲು ಕ್ಷೇತ್ರವಾಗಿದ್ದ ಬೀದರ್, ಕ್ಷೇತ್ರ ಪುನರ್ ವಿಂಗಡನೆ ಬಳಿಕ 2009ರಲ್ಲಿ ಸಾಮಾನ್ಯ ಕ್ಷೇತ್ರವಾಗಿ ಬದಲಾಯಿತು. 2014ರಲ್ಲಿ ನರೇಂದ್ರ ಮೋದಿ ಅವರ ಅಲೆಯಲ್ಲಿ ಭಗವಂತ ಖೂಬಾ ಅವರು ಕಾಂಗ್ರೆಸ್ನ ಧರಂಸಿಂಗ್ ಅವರನ್ನು ಸೋಲಿಸಿದರು.
ಕರ್ನಾಟಕದ ತುತ್ತತುದಿಯ ಕ್ಷೇತ್ರದಲ್ಲಿ ಗೆಲುವಿನ ಗರಿ ಯಾರ ಮುಡಿಗೆ?
ಹಾಲಿ ಸಂಸದರಾಗಿ ಕಣಕ್ಕಿಳಿದಿರುವ ಭಗವಂತ ಖೂಬಾ ಅವರಿಗೆ ಸ್ವ ಪಕ್ಷದಲ್ಲೇ ವಿರೋಧವಿದೆ. ಔರಾದ್ ಕ್ಷೇತ್ರದ ಬಿಜೆಪಿ ಶಾಸಕ ಪ್ರಭು ಚೌವ್ಹಾಣ್ ಅವರು ಖೂಬಾ ಅವರ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಇದು ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ? ಕಾದು ನೋಡಬೇಕು....
ವಿಧಾನಸಭೆ ಬಲಾಬಲ
ಬೀದರ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಔರಾದ್, ಆಳಂದ, ಬೀದರ್, ಭಾಲ್ಕಿ, ಬಸವ ಕಲ್ಯಾಣ, ಹುಮನಾಬಾದ್, ಚಿಂಚೋಳಿ, ಬೀದರ್ ದಕ್ಷಿಣ ಕ್ಷೇತ್ರಗಳಿವೆ.
ಬಿಜೆಪಿ
:
ಔರಾದ್,
ಆಳಂದ
ಕಾಂಗ್ರೆಸ್
:
ಬೀದರ್,
ಭಾಲ್ಕಿ,
ಬಸವ
ಕಲ್ಯಾಣ,
ಹುಮನಾಬಾದ್,
ಚಿಂಚೋಳಿ
ಜೆಡಿಎಸ್
:
ಬೀದರ್
ದಕ್ಷಿಣ
ಅಚ್ಚರಿಯ ಆಯ್ಕೆ
2014ರ ಚುನಾವಣೆಯಲ್ಲಿ ಬಿಜೆಪಿ ಭಗವಂತ ಖೂಬಾ ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಿದಾಗ ಬಿಜೆಪಿ ಕಾರ್ಯಕರ್ತರಿಗೆ ಅಚ್ಚರಿ ಉಂಟಾಗಿತ್ತು. ನರೇಂದ್ರ ಮೋದಿ ಅವರ ಅಲೆಯಲ್ಲಿ ಅವರು ಗೆದ್ದು ಬಂದರು. ಈ ಬಾರಿಯೂ ಅವರು ಅಭ್ಯರ್ಥಿ.
ಕಣಕ್ಕಿಳಿದ ಕಾರ್ಯಾಧ್ಯಕ್ಷರು
ಭಾಲ್ಕಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ. ಕ್ಷೇತ್ರದಲ್ಲಿ ಉತ್ತಮ ಹಿಡಿತವನ್ನು ಅವರು ಹೊಂದಿದ್ದಾರೆ. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳಲಾಗಿದೆ. ಬೀದರ್ ದಕ್ಷಿಣದ ಶಾಸಕ ಬಂಡೆಪ್ಪ ಕಾಶೆಂಪೂರ ಅವರು ಎಚ್.ಡಿ.ಕುಮಾರಸ್ವಾಮಿ ಸಂಪುಟದಲ್ಲಿ ಸಚಿವರಾಗಿದ್ದು, ಅವರ ಪ್ರಭಾವ ಸಹ ಖಂಡ್ರೆ ಅವರಿಗೆ ಚುನಾವಣೆಯಲ್ಲಿ ಸಹಾಯಕವಾಗಲಿದೆ.
ಬಿಜೆಪಿಗೆ ಅಸಮಾಧಾನದ ಸಮಸ್ಯೆ
ಬೀದರ್ ಬಿಜೆಪಿ ಘಟಕ ಎರಡು ಹೋಳಾಗಿದೆ ಎನ್ನುತ್ತಾರೆ ನಾಯಕರು. ಔರಾದ್ ಶಾಸಕ ಪ್ರಭು ಚೌವ್ಹಾಣ್ ಮತ್ತು ಭಗವಂತ ಖೂಬಾ ನಡುವೆ ಎಲ್ಲವೂ ಸರಿ ಇಲ್ಲ. ಪ್ರಭು ಚೌವ್ಹಾಣ್ ಬೆಂಬಲಿಗರು ಭಗವಂತ ಖೂಬಾ ಅವರ ಪರವಾಗಿ ಕೆಲಸ ಮಾಡುವುದಿಲ್ಲ ಎಂಬ ಸುದ್ದಿ ಹಬ್ಬಿದೆ.
ಮಾಜಿ ಸಚಿವ ದಿ.ಗುರುಪಾದಪ್ಪ ನಾಗಮಾರಪಳ್ಳಿ ಅವರ ಮಕ್ಕಳು ಈ ಬಾರಿಯ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಆದರೆ, ಹಾಲಿ ಸಂಸದರಿಗೆ ಟಿಕೆಟ್ ಎಂಬ ಕಾರಣಕ್ಕೆ ಅವರಿಗೆ ಟಿಕೆಟ್ ಕೈ ತಪ್ಪಿದೆ. ಅವರು ಖೂಬಾ ಪರವಾಗಿ ಕೆಲಸ ಮಾಡಲಿದ್ದಾರೆಯೇ? ಕಾದು ನೋಡಬೇಕು.
2014ರ ಫಲಿತಾಂಶ
2014ರ ಚುನಾವಣೆಯಲ್ಲಿ ಬಿಜೆಪಿಯ ಭಗವಂತ ಖೂಬಾ ಅವರು 4,59,290 ಮತಗಳನ್ನು ಪಡೆದು ಜಯಗಳಿಸಿದ್ದರು. ಕಾಂಗ್ರೆಸ್ನ ಎನ್.ಧರಂಸಿಂಗ್ ಅವರು 3,67,068 ಮತಗಳನ್ನು ಪಡೆದಿದ್ದರು. ಜೆಡಿಎಸ್ನ ಬಂಡೆಪ್ಪ ಕಾಶೆಂಪೂರ ಅವರು 58,728 ಮತ ಪಡೆದಿದ್ದರು.