ಬೀದರ್ : ಜಿಲ್ಲಾಧಿಕಾರಿಗಳ ಬರಪರಿಶೀಲನೆ, ಖಾಲಿ ಕೊಡಗಳ ಸಾಲು
ಬೀದರ್, ಫೆಬ್ರವರಿ 13 : ಬೀದರ್ ಜಿಲ್ಲಾಧಿಕಾರಿ ಡಾ.ಎಚ್.ಆರ್.ಮಹಾದೇವ ಅವರು ಭಾಲ್ಕಿ ತಾಲೂಕಿನ ವಿವಿಧ ಹಳ್ಳಿಗಳಿಗೆ ಭೇಟಿ ನೀಡಿ ಬರ ಪರಿಶೀಲನೆ ನಡೆಸಿದರು. ಕುಡಿಯುವ ನೀರು ಮತ್ತು ಮೇವಿನ ಲಭ್ಯತೆ ಮತ್ತು ನರೇಗಾ ಕಾಮಗಾರಿಗಳ ಪ್ರಗತಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಭಾಲ್ಕಿ ತಾಲೂಕಿನ ತೇಗಂಪೂರ, ಕೆರೂರ(ಬಿ), ಒಳಸಂಗ, ಬೀರಿ(ಬಿ) ತಾಂಡಾ ಹಾಗೂ ಧನಸಿಂಗ್ ತಾಂಡಾ ಮತ್ತು ಲಂಜವಾಡ ಗ್ರಾಮಗಳಿಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಿದರು. ಗ್ರಾಮಸ್ಥರೊಂದಿಗೆ ಕೆಲ ಹೊತ್ತು ಮಾತುಕತೆ ನಡೆಸಿದರು. ಗ್ರಾಮಗಳಲ್ಲಿ ಕುಡಿಯುವ ನೀರಿನ ಲಭ್ಯತೆ ಬಗ್ಗೆ ಚರ್ಚೆ ನಡೆಸಿದರು.
ಕೇಂದ್ರದಿಂದ ಕರ್ನಾಟಕಕ್ಕೆ 949 ಕೋಟಿ ರೂ. ಬರ ಪರಿಹಾರ
ನಲ್ಲಿಯ ಮುಂದೆ ಸಾಲಾಗಿ ಕೊಡಗಳನ್ನು ಇಟ್ಟು ಕುಳಿತಿದ್ದ ದೃಶ್ಯ ಬೀರಿ ಬಿ ತಾಂಡಾದಲ್ಲಿ ಕಂಡು ಬಂದಿತು. ಖಾಸಗಿ ಕೊಳವೆಬಾವಿ ನೀಡುತ್ತೇನೆ ಎಂದು ಗ್ರಾಮಸ್ಥರೊಬ್ಬರು ಹೇಳಿದರು. ನೀರನ್ನು ಖರೀದಿಸಿ ಗ್ರಾಮಸ್ಥರಿಗೆ ಕೂಡಲೇ ಒದಗಿಸಲು ಪಿಡಿಓ ಅವರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಧಾರವಾಡದಲ್ಲಿ ಬರ ಪರಿಸ್ಥಿತಿ ಅಧ್ಯಯನ ನಡೆಸಿದ ಕೇಂದ್ರ ತಂಡ
ಆಯಾ ಹಳ್ಳಿಗಳ ಸಮಸ್ಯೆ ಅಲ್ಲಿನ ಗ್ರಾಮಸ್ಥರಿಗೆ ಚೆನ್ನಾಗಿ ತಿಳಿದಿರುತ್ತದೆ. ಬರ ನಿರ್ವಹಣೆ ಹಿನ್ನೆಲೆಯಲ್ಲಿ ಗ್ರಾಮ ಮಟ್ಟದ ಸಮಿತಿ ರಚಿಸಿದ್ದೇವೆ. ಪಿಡಿಓ, ವಿಎ ಚುರುಕಾಗಿ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಬರ ಪೀಡಿತ ತಾಲೂಕುಗಳಿಗೆ 2,434 ಕೋಟಿ ಬೇಡಿಕೆ ಇಟ್ಟ ರಾಜ್ಯ
ಖಾಸಗಿ ಬೋರವೆಲ್ ಗುರುತಿಸಿ
ಕುಡಿಯುವ ನೀರಿನ ಸಮಸ್ಯೆ ಇರುವ ಕಡೆಗಳಲ್ಲಿ, ನೀರು ಲಭ್ಯ ಇರುವ ಖಾಸಗಿ ಬೋರವೆಲ್ ಗುರುತಿಸಿ, ಅವುಗಳ ಪಟ್ಟಿ ಮಾಡಿ, ಅವರನ್ನು ವಿಶ್ವಾಸಕ್ಕೆ ಪಡೆದು, ಅವರಿಗೆ ಹಣ ಪಾವತಿಸಿ, ಖಾಸಗಿ ಬೋರವೆಲ್ ಇರುವ ಕಡೆಯಿಂದ ಪೈಪ್ಲೈನ್ ಮಾಡಿ ನೀರು ಪೂರೈಸಬೇಕು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಟ್ಯಾಂಕರ್ ಮೂಲಕ ನೀರು
ಬೋರ್ವೆಲ್ ಇಲ್ಲದ ಸ್ಥಳಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ತಹಸೀಲ್ದಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮತ್ತು ಆಯಾ ಪಂಚಾಯತಿಗಳ ಅಭಿವೃದ್ಧಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಇದಕ್ಕಾಗಿ ಹಣಕ್ಕೆ ಕೊರತೆ ಇಲ್ಲ ಎಂದು ತಿಳಿಸಿದರು.
ತೇಗಂಪೂರದಲ್ಲಿ ಖುದ್ದು ಬಾವಿ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿಗಳು, ಖಾಸಗಿ ಕೊಳವೆಬಾಯಿಯಿಂದ ನೀರನ್ನು ಬಾವಿಗೆ ಹಾಕಿ ಅಲ್ಲಿಂದ ಗ್ರಾಮಸ್ಥರಿಗೆ ಪೂರೈಸಬೇಕು ಎಂದು ಸೂಚಿಸಿದರು.
ವಿದ್ಯುತ್ ಪೂರೈಕೆಗೆ ಮನವಿ
ಕೆರೂರ(ಬಿ) ಗ್ರಾಮದಲ್ಲಿ ಅಹವಾಲುಗಳನ್ನು ಜಿಲ್ಲಾಧಿಕಾರಿಗಳು ಆಲಿಸಿದರು. ಒಡೆದ ಪೈಪುಗಳನ್ನು ದುರಸ್ತಿಗೊಳಿಸಿ ನೀರು ಪೂರೈಸಲು ಪಿಡಿಒ ಅವರಿಗೆ ಎರಡು ದಿನಗಳ ಗಡುವು ನೀಡಿದರು. ಗ್ರಾಮಸ್ಥರ ದೂರನ್ನು ಆಲಿಸಿದ ಜಿಲ್ಲಾಧಿಕಾರಿಗಳು ಗ್ರಾಮಕ್ಕೆ ಕೂಡಲೇ ಕಿರಿಯ ಆರೋಗ್ಯ ಸಹಾಯಕರನ್ನು ನೇಮಿಸಲು ಸೂಚಿಸಿದರು. ನರೇಗಾದ ಅಡಿ ಗ್ರಾಮಸ್ಥರಿಗೆ ಕೆಲಸ ಕೊಡುವ ವ್ಯವಸ್ಥೆ ಮಾಡಲು ತಿಳಿಸಿದರು.
ನೀರು, ಮೇವು ಸಿಗುತ್ತಿದೆಯಾ?
ಒಳಸಂಗ ಗ್ರಾಮದಲ್ಲಿ ನೀರಿನ ಸಮಸ್ಯೆ ಇದೆಯಾ? ಮೇವು ಸಿಗುತ್ತಿದೆಯಾ? ನರೇಗಾ ಕೆಲಸ ನಡೆಯುತ್ತಿದೆಯಾ? ಎಂದು ಜಿಲ್ಲಾಧಿಕಾರಿಗಳು ಗ್ರಾಮಸ್ಥರನ್ನು ಕೇಳಿದರು.
ಬೀರಿ (ಬಿ) ತಾಂಡಾದಲ್ಲಿ ನಲ್ಲಿಯ ಮುಂದೆ ಸಾಲಾಗಿ ಕೊಡಗಳನ್ನು ಇಟ್ಟು ಕುಳಿತಿದ್ದ ದೃಶ್ಯ ಕಂಡು ಬಂದಿತು. ಖಾಸಗಿ ಕೊಳವೆಬಾವಿ ನೀಡುತ್ತೇನೆ ಎಂದು ಗ್ರಾಮಸ್ಥರೊಬ್ಬರು ತಿಳಿಸಿದಾಗ, ಆ ಕೊಳವೆಬಾವಿ ನೀರನ್ನು ಖರೀದಿಸಿ ಗ್ರಾಮಸ್ಥರಿಗೆ ಕೂಡಲೇ ಒದಗಿಸಲು ಸೂಚಿಸಿದರು.
ಕೊಳವೆ ಬಾವಿಯಲ್ಲಿ ನೀರಿಲ್ಲ
ಲಂಜವಾಡ ಗ್ರಾಮದಲ್ಲಿ ಆರು ಕಡೆಗಳಲ್ಲಿ ಬೋರವೆಲ್ ಕೊರೆದರೂ ನೀರು ಸಿಗಲಿಲ್ಲ ಎಂದು ಗ್ರಾಮಸ್ಥರು ತಿಳಿಸಿದರು. ಜಲತಜ್ಞರಿಂದ ನೀರು ಲಭ್ಯತೆ ಬಗ್ಗೆ ಪರೀಕ್ಷಿಸಿ ವಾರದೊಳಗಡೆ ಎರಡು ಬೋರವೆಲ್ ಹೊಡೆಯಿರಿ. ಆಗೂ ನೀರು ಸಿಗದಿದ್ದರೆ ಖಾಸಗಿ ಕೊಳವೆಬಾವಿಗಳ ಸಹಾಯ ಪಡೆದುಕೊಳ್ಳಲು ಜಿಲ್ಲಾಧಿಕಾರಿಗಳು ಕಂದಾಯ ನಿರೀಕ್ಷಕರಾದ ರಾಜು ಕುಲಕರ್ಣಿ ಹಾಗೂ ಗ್ರಾಮ ಲೆಕ್ಕಾಧಿಕಾರಿ ಮುತ್ತಮ ಅವರಿಗೆ ಸೂಚಿಸಿದರು.