ಬಡ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಖಾಸಗಿ ಕಾಲೇಜ್ ನಲ್ಲಿ ಉಚಿತ ಪ್ರವೇಶ ಕಲ್ಪಿಸಿದ ಬೀದರ್ ಡಿಸಿ
ಬೀದರ್, ಅಕ್ಟೋಬರ್ 1: ಕೆಲವು ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ಮಾಡಬೇಕೆಂಬ ಅಭಿಲಾಷೆ ಇದ್ದರೂ, ಮನೆಯಲ್ಲಿ ಕಿತ್ತು ತಿನ್ನುವ ಬಡತನದಿಂದ ಅದೆಷ್ಟೋ ವಿದ್ಯಾರ್ಥಿಗಳು ಕಾಲೇಜು ಮೆಟ್ಟಿಲನ್ನು ಹತ್ತಲಾರದ ಸ್ಥಿತಿ ಇದೆ.
ಅದೇ ರೀತಿ ಮನೆಯಲ್ಲಿ ಎಲ್ಲ ಸೌಕರ್ಯವಿದ್ದು, ತಂದೆ-ತಾಯಿಗಳು ಮಕ್ಕಳನ್ನು ಚೆನ್ನಾಗಿ ಓದಿಸಿ, ಉನ್ನತ ಹುದ್ದೆ ಗಳಿಸಬೇಕು ಎಂದು ಮಕ್ಕಳ ಮೇಲೆ ಆಶಾ ಗೋಪುರ ಕಟ್ಟಿಕೊಂಡಿರುತ್ತಾರೆ. ಆದರೆ ಮಕ್ಕಳು ಸರಿಯಾದ ರೀತಿಯಲ್ಲಿ ವಿದ್ಯಾಭ್ಯಾಸ ಮಾಡದೇ, ದುಶ್ಚಟಗಳಿಗೆ ದಾಸರಾಗುತ್ತಾರೆ.
ತಮ್ಮ ಮಕ್ಕಳಿಗೇ ಸರಿಯಾದ ವಿದ್ಯಾಭ್ಯಾಸ ಕೊಡಿಸದ ಈ ದಿನಗಳಲ್ಲಿ, ಬೀದರ್ ಜಿಲ್ಲೆಯ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿ ರಾಮಚಂದ್ರನ್.ಆರ್ ಅವರು ಪ್ರತಿಷ್ಠಿತ ಖಾಸಗಿ ಕಾಲೇಜ್ ಗಳಲ್ಲಿ ಉಚಿತ ಪ್ರವೇಶ ಕಲ್ಪಿಸಿ, ಬಡ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದಾರೆ.
ಬೀದರ್ ಜಿಲ್ಲೆಯ 64 ಪಿಯು ಖಾಸಗಿ ಕಾಲೇಜ್ ಗಳಲ್ಲಿ ಒಟ್ಟು 665 ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶವನ್ನು ಬೀದರ್ ಜಿಲ್ಲಾಡಳಿತವು ಕೊಡಿಸಿದೆ. ಆ ಮೂಲಕ ವಿದ್ಯಾರ್ಥಿಗಳ ಭವಿಷ್ಯದ ದಿನಗಳಿಗೆ ದಾರಿದೀಪವಾಗಿದ್ದಾರೆ.
Recommended Video
ಬೀದರ್ ಜಿಲ್ಲಾಧಿಕಾರಿ ರಾಮಚಂದ್ರನ್.ಆರ್ ಅವರು ಕೌನ್ಸಿಲ್ ಮುಖಾಂತರ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಖಾಸಗಿ ಕಾಲೇಜಿನಲ್ಲಿ ಪ್ರವೇಶಾವಕಾಶ ಕಲ್ಪಿಸಿ ಆದೇಶ ನೀಡಿದ್ದಾರೆ. ಈ ಮೂಲಕ ಬಡ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಖಾಸಗಿ ಕಾಲೇಜ್ ಗಳಲ್ಲಿ ಓದುವ ಕನಸು ನನಸು ಮಾಡಿದ್ದಾರೆ.