ಬಸವಕಲ್ಯಾಣ: ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾಗೆ ಭಾರೀ ಹಿನ್ನೆಡೆ
ಬೀದರ್, ಮೇ 2: ಬೀದರ್ ಜಿಲ್ಲೆ ಬಸವಕಲ್ಯಾಣ ಉಪ ಚುನಾವಣೆಗೆ ಬಿಜೆಪಿ ಟಿಕೆಟ್ ವಂಚಿತ, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಅವರು ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸಾಕಷ್ಟು ಪೈಪೋಟಿ ನೀಡಿದರಾದರೂ ಮತ ಗಳಿಕೆಯಲ್ಲಿ ತೀರಾ ಹಿನ್ನಡೆ ಅನುಭವಿಸುತ್ತಿದ್ದಾರೆ.
ಬಿಜೆಪಿಗೆ ಪ್ರಬಲ ಪೈಪೋಟಿ ನೀಡುವ ನಿರೀಕ್ಷೆ ಹುಟ್ಟಿಸಿದ ಮಲ್ಲಿಕಾರ್ಜುನ ಖೂಬಾ ಮೂರನೇ ಸುತ್ತಿನ ಮತ ಎಣಿಕೆಯಲ್ಲಿ ಕೇವಲ 1038 ಮತಗಳನ್ನು ಮಾತ್ರ ಪಡೆದಿದ್ದಾರೆ. ಇದು ಮುನ್ನಡೆ ಸಾಧಿಸಿದ ಬಿಜೆಪಿ ಅಭ್ಯರ್ಥಿಗಿಂತ 8,244 ಮತಗಳಿಂದ ಹಿಂದೆ ಬಿದ್ದಿದ್ದಾರೆ.
ಬಸವಕಲ್ಯಾಣ ಕ್ಷೇತ್ರ ಫಲಿತಾಂಶ: ಬಿಜೆಪಿ ಅಭ್ಯರ್ಥಿಗೆ ಮುನ್ನಡೆ
ಎರಡು ಬಾರಿ ಬಸವಕಲ್ಯಾಣ ಕ್ಷೇತ್ರದಿಂದ ಜೆಡಿಎಸ್ ಪಕ್ಷದಿಂದ ಗೆದ್ದು ಬಂದಿದ್ದ ಮಲ್ಲಿಕಾರ್ಜುನ ಖೂಬಾ, ಕಳೆದ ಬಾರಿ ದಿವಂಗತ ಶಾಸಕ ಬಿ.ನಾರಾಯಣರಾವ್ ಎದುರು ಸೋಲನುಭವಿಸಿದರು. ಆದರೂ, ಗಣನೀಯ ಮತಗಳನ್ನು ಪಡೆದಿದ್ದರು.
ಕಾಂಗ್ರೆಸ್ ಅಭ್ಯರ್ಥಿ ಮಲ್ಲಮ್ಮಗೆ ಹಿನ್ನೆಡೆ
ದಿವಂಗತ ಶಾಸಕ ಬಿ.ನಾರಾಯಣರಾವ್ ಅಕಾಲಿನ ನಿಧನದಿಂದ ತೆರವಾಗಿದ್ದ ಬಸವಕಲ್ಯಾಣ ಉಪ ಚುನಾವಣೆಗೆ ಅನುಕಂಪದ ಅಲೆ ನಂಬಿ ಕಣಕ್ಕಿಳಿದ ಕಾಂಗ್ರೆಸ್ ಅಭ್ಯರ್ಥಿ ಮೂರನೇ ಸುತ್ತಿನಲ್ಲೂ ಹಿನ್ನಡೆ ಅನುಭವಿಸಿದ್ದಾರೆ.
ಮೂರನೇ ಸುತ್ತು ಮುಕ್ತಾಯವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಮಲ್ಲಮ್ಮ ನಾರಾಯಣರಾವ್ಗೆ 4848 ಮತಗಳು ಲಭಿಸಿವೆ. ಬಿಜೆಪಿ ಅಭ್ಯರ್ಥಿ 9282 ಮತಗಳನ್ನು ಪಡೆದಿದ್ದಾರೆ. ಹಾಗೇ ಮೂರನೇ ಸುತ್ತಿನಲ್ಲಿ ಹೊಸ ಬದಲಾವಣೆಯಾಗಿದ್ದು, ಬಿಜೆಪಿ ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ ಖುಬಾ ಜೆಡಿಎಸ್ ಅಭ್ಯರ್ಥಿಯನ್ನು ಹಿಂದಿಕ್ಕಿದ್ದಾರೆ.
ಮಲ್ಲಿಕಾರ್ಜುನ ಖೂಬಾಗೆ 1038 ಮತಗಳು ಲಭಿಸಿದರೆ, ಜೆಡಿಎಸ್ ಅಭ್ಯರ್ಥಿ ಯಾಸ್ರಬ್ ಖಾದ್ರಿಗೆ 808 ಮತಗಳು ಲಭಿಸಿವೆ. ಇನ್ನೂ 25 ಸುತ್ತಿನ ಮತ ಎಣಿಕೆ ಕಾರ್ಯ ಬಾಕಿ ಇದೆ.