ಬಸವಕಲ್ಯಾಣ ಉಪ ಚುನಾವಣೆ: ಕಾಂಗ್ರೆಸ್ ಪ್ರಚಾರ ಪೋಸ್ಟರ್ 'ಹಿಂದಿ'ಮಯ
ಬೀದರ್, ಮಾರ್ಚ್ 31: ಬೀದರ್ ಜಿಲ್ಲೆ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಯಾಗಿದ್ದು, ಏಪ್ರಿಲ್ 17ರಂದು ಮತದಾನ ನಡೆಯಲಿದೆ.
ಬಸವಕಲ್ಯಾಣದಲ್ಲಿ ಮರಾಠಿ ಹಾಗೂ ಹಿಂದಿ ಭಾಷಿಕರ ಮತದಾರರನ್ನು ಸೆಳೆಯುವ ಉದ್ದೇಶದಿಂದ ಕಾಂಗ್ರೆಸ್ ತನ್ನ ಪೋಸ್ಟರ್ ನಲ್ಲಿ ಕನ್ನಡ ಭಾಷೆಯನ್ನು ಕಡೆಗಣಿಸಿ, ಹಿಂದಿಗೆ ಮಹತ್ವ ನೀಡಲಾಗಿದೆ.
ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ಕಾಂಗ್ರೆಸ್ ಸೇರ್ಪಡೆ
ಕರ್ನಾಟಕದಲ್ಲಿ ಹಿಂದಿ ಹೇರಿಕೆ ಮಾಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ಮತ್ತು ಬಿಜೆಪಿಯನ್ನು ಟೀಕಿಸುವ ಕಾಂಗ್ರೆಸ್ ಈಗ ಬಸವಕಲ್ಯಾಣದಲ್ಲಿ ಹಿಂದಿ ಪೋಸ್ಟರ್ ಮೂಲಕ ಪ್ರಚಾರ ಮಾಡುತ್ತಿದೆ ಎಂದು ನೆಟ್ಟಿಗರು ಟೀಕಿಸಿದ್ದಾರೆ.
ಬಸವಕಲ್ಯಾಣ ವಿಧಾನಸಭಾ ಉಪ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಮಾಲಾ ಬಿ ನಾರಾಯಣ್ ರಾವ್ ಅವರು ಮಂಗಳವಾರ ನಾಮಪತ್ರ ಸಲ್ಲಿಸಿದ್ದು, ಪ್ರಚಾರ ಪೋಸ್ಟರ್ ಸಂಪೂರ್ಣ ಹಿಂದಿಮಯವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲಾಗಿದೆ.
ಈಗಾಗಲೇ ಕೇಂದ್ರ ಸರ್ಕಾರದ ಹಿಂದಿ ಹೇರಿಕೆಗೆ ವಿರೋಧವಿರುವಾಗಲೇ, ವಿರೋಧ ಪಕ್ಷದಿಂದಲೂ ಹಿಂದಿ ಪ್ರೇಮ ಕನ್ನಡಿಗರನ್ನು ಕೆರಳಿಸಿದೆ. "ಬಸವಕಲ್ಯಾಣದಲ್ಲಿ ಹಿಂದಿ ಹೇರಿಕೆ' ಎಂದು ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಪೋಸ್ಟರ್ ಸದ್ದು ಮಾಡುತ್ತಿದೆ.
ಬಸವಕಲ್ಯಾಣ ಕ್ಷೇತ್ರದಲ್ಲಿ ಮರಾಠಿ ಮತ್ತು ಹಿಂದಿ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ರಾಜಕೀಯ ಪಕ್ಷಗಳು ಮತ್ತು ರಾಜಕೀಯ ನಾಯಕರು ಅನ್ಯ ಭಾಷಿಕರ ಮತ ಸೆಳೆಯುವುದಕ್ಕಾಗಿ ಕನ್ನಡವನ್ನೇ ಮರೆಯುವುದು ನ್ಯಾಯವೇ ಎಂದು ಕನ್ನಡ ಪ್ರೇಮಿಗಳು ಪ್ರಶ್ನಿಸುತ್ತಿದ್ದಾರೆ.