ಬಸವ ಕಲ್ಯಾಣ ಉಪ ಚುನಾವಣೆ ಬಂಡಾಯದ ಬಿಸಿಯಲ್ಲಿ ಕಮಲ ‘ಕೈ’ಗೆ ತೆನೆ ಭಾರ!
ಬೀದರ್, ಏಪ್ರಿಲ್ 07: ರಾಜ್ಯದಲ್ಲಿ ನಡೆಯುತ್ತಿರುವ ಎರಡು ವಿಧಾನಸಭೆ ಉಪ ಚುನಾವಣೆ ಪೈಕಿ ಬಸವಕಲ್ಯಾಣ ಕ್ಷೇತ್ರದ ಕಣ ಗಮನ ಸೆಳೆಯುತ್ತಿದ್ದು, ತೀವ್ರ ಜಿದ್ದಾಜಿದ್ದಿನ ಪೈಪೋಟಿಗೆ ಕಲ್ಯಾಣ ನಗರಿ ಸಾಕ್ಷಿಯಾಗಿದೆ. ಕಾಂಗ್ರೆಸ್ ಪಕ್ಷದ ದಿವಂಗತ ಬಿ. ನಾರಾಯಣರಾವ್ ಅವರು ಕರೋನಾ ಸೋಂಕಿಗೆ ಬಲಿಯಾದ ಬಳಿಕ ಬಸವ ಕಲ್ಯಾಣ ವಿಧಾನ ಸಭಾ ಕ್ಷೇತ್ರ ತೆರವಾಗಿತ್ತು. ಈ ಹಿನ್ನೆಲೆಯಲ್ಲಿ ನಡೆಯುತ್ತಿರುವ ಬಸವ ಕಲ್ಯಾಣ ಉಪ ಚುನಾವಣೆ ಕಣದಲ್ಲಿ ನಾಲ್ವರ ನಡುವೆ ಬಿಗ್ ಫೈಟ್ಗೆ ನಾಂದಿ ಹಾಡಿದೆ.
ಕೈಗೆ ಅನುಕಂಪ: ವಿಶಿಷ್ಟ ಗುಣದ ಮೂಲಕ ಬಸವ ಕಲ್ಯಾಣ ಕ್ಷೇತ್ರದ ಜನರ ಗಮನ ಸೆಳೆದಿದ್ದ ಬಿ. ನಾರಾಯಣರಾವ್ ಅಕಾಲಿಕ ಮರಣದ ನಂತರ ಕಾಂಗ್ರೆಸ್ ಪಕ್ಷ ಆ ಸ್ಥಾನ ಉಳಿಸಿಕೊಳ್ಳಲು ಪ್ರಯತ್ನ ನಡೆಸಿದೆ. ನಾರಾಯಣರಾವ್ ಅಕಾಲ ಮರಣ ಅನುಕಂಪದ ಅಲೆ ಪಡೆಯಲು ಕಾಂಗ್ರೆಸ್ ಅವರ ಪತ್ನಿ ಮಲ್ಲಮ್ಮ ಅವರಿಗೆ ಟಿಕೆಟ್ ನೀಡಿದೆ. ಕಣ್ಣೀರು ವರ್ಕೌಟ್ ಆದರೆ ಗೆಲ್ಲುತ್ತೇವೆಂಬ ಉಮೇದಿಯಲ್ಲಿ ಕಾಂಗ್ರೆಸ್ ನಾಯಕರು ಇದ್ದ ಹಾಗಿದೆ.
ಆದರೆ, ಜೆಡಿಎಸ್ ಅಲ್ಪಸಂಖ್ಯಾತ ಮುಖಂಡ ಸೈಯದ್ ಯಾಸ್ರಬ್ ಖಾದ್ರಿಗೆ ಮಣೆ ಹಾಕಿದ್ದು, ಕಾಂಗ್ರೆಸ್ ನಿದ್ದೆಗೆಡಿಸಿದೆ. ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಬಿ.ನಾರಾಯಣರಾವ್ ಗೆದ್ದದ್ದು ಇದೇ ಅಲ್ಪಸಂಖ್ಯಾತ ಮತಗಳ ಬಲದಿಂದ ಎಂಬುದು ಕಾಂಗ್ರೆಸ್ಗೂ ಗೊತ್ತಿದೆ. ಜೆಡಿಎಸ್ ಶಾಸಕ ಬಂಡೆಪ್ಪ ಖಾಶೆಂಪೂರ್ ಕ್ಷೇತ್ರದಲ್ಲಿ ಠಿಕಾಣಿ ಹೂಡಿದ್ದು ಕಾಂಗ್ರೆಸ್ ಅಭ್ಯರ್ಥಿಗೆ ಮಗ್ಗಲು ಮುಳ್ಳಾಗುವ ಸಂಭವವನ್ನೂ ತಳ್ಳಿ ಹಾಕುವಂತಿಲ್ಲ.
ಇನ್ನು ಸಾಕಷ್ಟು ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಟಿಕೆಟ್ ಗಿಟ್ಟಿಸಿಕೊಂಡ ಕಲಬುರ್ಗಿ ಜಿಲ್ಲೆಯ ಶರಣು ಸಲಗರ್ ಗೆಲುವಿನ ಹಾದಿ ಸುಗಮದೇನಲ್ಲ. 26ನೇ ವಯಸ್ಸಿಗೆ ಶಾಸಕನಾಗಿ ಸಾಮರ್ಥ್ಯ ಸಾಬೀತುಪಡಿಸಿದ ಮಲ್ಲಿಕಾರ್ಜುನ ಖೂಬಾ ಈ ಬಾರಿ ಬಿಜೆಪಿ ಬಂಡಾಯ ಅಭ್ಯರ್ಥಿ. ಬಸವಕಲ್ಯಾಣ ಜನತೆಯ ಸ್ವಾಭಿಮಾನದ ಸಂಕೇತವಾಗಿ ಕಣದಲ್ಲಿದ್ದೇನೆ ಎಂದು ಪ್ರಚಾರ ಪ್ರಾರಂಭಿಸಿದ್ದು, ಬಿಜೆಪಿಗರ ನಿದ್ದೆ ಕೆಡಿಸಿದೆ. ಸ್ಥಳೀಯರಿಗೆ ಟಿಕೆಟ್ ನೀಡಿಲ್ಲ ಎಂದು ಸ್ಥಳೀಯ ಜನರಲ್ಲಿ ಬಿಜೆಪಿ ಬಗ್ಗೆ ಅಸಮಾಧಾನ ಇರುವುದು ನಿಜ. ಆದರೆ, ಅದು ಚುನಾವಣೆವರೆಗೂ ಇರುತ್ತದಾ ಎಂಬುದು ಕಾದು ನೋಡಬೇಕಿದೆ.
ಮಾಜಿ ಶಾಸಕ ಹಾಗೂ ಮರಾಠಾ ಸಮುದಾಯದ ಮುಖಂಡ ಮಾರುತಿರಾವ್ ಮುಳೆ ಕಣದಿಂದ ಹಿಂದೆ ಸರಿದು ಬಿಜೆಪಿ ತೆಕ್ಕೆಗೆ ಸರಿದಿರುವುದು ಕೇಸರಿ ಪಾಳಯಕ್ಕೆ ಲಾಭವಾಗುವ ಲೆಕ್ಕಾಚಾರ ಇದೆ. ಆದರೆ, ಕ್ಷೇತ್ರದಲ್ಲಿ ಮರಾಠಾ ಸಮುದಾಯದವರು ಮುಳೆ ವಿರುದ್ಧ ಪ್ರತಿಭಟನೆಗಳು ನಡೆಸಿ ಧಿಕ್ಕಾರ ಕೂಗಿದ್ದಾರೆ. ಹಾಗಾಗಿ, ಮರಾಠಿ ಮತಗಳು ಎಷ್ಟರ ಮಟ್ಟಿಗೆ ಬಿಜೆಪಿ ಕಡೆ ವಾಲಲಿವೆ ಎಂಬುದರ ಮೇಲೂ ಬಿಜೆಪಿ ಭವಿಷ್ಯ ಅಡಗಿದೆ.
ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ ಹಾಗೂ ಶರಣು ಸಲಗರ್ ಲಿಂಗಾಯತ ಸಮುದಾಯಕ್ಕೆ ಸೇರಿದ್ದು, ಇಬ್ಬರಿಗೂ ಮರಾಠಾ ಸೇರಿದಂತೆ ಇನ್ನುಳಿದ ಮತಗಳ ಅನಿವಾರ್ಯತೆ ಇದೆ. ಹಾಗಾಗಿ, ಲಿಂಗಾಯತೇತರ ಮತಗಳು ಹೆಚ್ಚು ಪಡೆದ ಅಭ್ಯರ್ಥಿ ವಿಜಯ ಪತಾಕೆ ಹಾರಿಸಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಹಾಗೇ, ಕಾಂಗ್ರೆಸ್ ಅಭ್ಯರ್ಥಿ ಅಲ್ಪಸಂಖ್ಯಾತ ಮತಗಳ ಜೊತೆಗೆ ಇತರೆ ಹಿಂದುಳಿದ ಮತಗಳು ಬುಟ್ಟಿಗೆ ಹಾಕಿಕೊಂಡರೆ ಮಾತ್ರ ಗೆಲುವಿನ ಬಾಗಿಲು ತಟ್ಟಲು ಸಾಧ್ಯ ಎನ್ನುತ್ತಿವೆ ರಾಜಕೀಯ ವಿಶ್ಲೇಷಣೆಗಳು.
Recommended Video
ಇನ್ನಷ್ಟೇ ರಾಜ್ಯ ಹಾಗೂ ರಾಷ್ಟ್ರೀಯ ಪಕ್ಷಗಳ ನಾಯಕರು ಕ್ಷೇತ್ರಕ್ಕೆ ಬರಲಿದ್ದಾರೆ. ಆ ಬಳಿಕವಷ್ಟೇ ಮತದಾರರ ಒಲವು ಯಾವ ಕಡೆಗೆ ಎಂಬುದು ಗೊತ್ತಾಗಲಿದೆ. ಉಳಿದಂತೆ ಒಟ್ಟು 12 ಜನ ಕಣದಲ್ಲಿದ್ದು, ಮತದಾನ ಏ.17ಕ್ಕೆ ನಡೆಯಲಿದೆ. ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಅಭ್ಯರ್ಥಿಗಳು ತಂತಮ್ಮ ಬೆಂಬಲಿಗರ ಜೊತೆ ಪ್ರಚಾರ ಆರಂಭಿಸಿದ್ದಾರೆ. ಗೆಲುವಿನ ಮಾಲೆ ಯಾರ ಕೊರಳಿಗೆ ಎಂಬುದು ಮೇ. 2ಕ್ಕೆ ಅನಾವರಣಗೊಳ್ಳಲಿದೆ.