‘ಶರಣು’ಗೆ ಶರಣೆಂದ ಕಲ್ಯಾಣ ನಾಡಿನ ಮತದಾರ: ಕಾಂಗ್ರೆಸ್, ಜೆಡಿಎಸ್ಗೆ ಸೋಲು
ಬೀದರ್, ಮೇ 2: ಬಸವಕಲ್ಯಾಣ ಕ್ಷೇತ್ರದ ಫಲಿತಾಂಶ ಪ್ರಕಟಗೊಂಡಿದ್ದು, ಬಿಜೆಪಿ ಅಭ್ಯರ್ಥಿ ಶರಣು ಸಲಗಾರ್ಗೆ ಕಲ್ಯಾಣ ನಾಡಿನ ಮತದಾರ ಜೈ ಎಂದಿದ್ದಾರೆ. ಸಾಕಷ್ಟು ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದ್ದ ಬಸವಕಲ್ಯಾಣ ಉಪ ಚುನಾವಣೆ ಕಣದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ನೇರಾನೇರ ಪೈಪೋಟಿ ಏರ್ಪಟ್ಟಿತ್ತು. ಬಿಜೆಪಿ ಅಭ್ಯರ್ಥಿ ಶರಣು ಸಲಗಾರ್ಗೆ ಒಟ್ಟು 70,556 ಮತಗಳು ಲಭಿಸಿದ್ದು, ಗೆಲುವಿನ ದಡ ಮುಟ್ಟುವಲ್ಲಿ ಯಶಸ್ಸು ಕಂಡಿದ್ದಾರೆ.
Recommended Video
ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ನ ಮಲ್ಲಮ್ಮ ಬಿ ನಾರಾಯಣರಾವ್ರನ್ನು 20,448 ಮತಗಳ ಭಾರೀ ಅಂತರದಿಂದ ಸೋಲುಣಿಸಿದ್ದಾರೆ. ಅನುಕಂಪದ ಅಲೆಯಲ್ಲಿ ಗೆಲುವು ಸಾಧಿಸಬಹುದು ಎಂಬ ಕಾಂಗ್ರೆಸ್ ವರಿಷ್ಠರ ಲೆಕ್ಕಾಚಾರ ತಲೆಕೆಳಗಾಗಿದೆ. ಕೈ ಅಭ್ಯರ್ಥಿ ಮಲ್ಲಮ್ಮ ಬಿ ನಾರಾಯಣರಾವ್ಗೆ 50,108 ಮತಗಳು ಲಭಿಸಿವೆ.
ಮಸ್ಕಿಯಲ್ಲಿ ಬಿಜೆಪಿಗೆ ಮುಖಭಂಗ; ಕಾಂಗ್ರೆಸ್ ಜಯಭೇರಿ
ಖೂಬಾ ಮನವಿಗೆ ಮತದಾರ ಕ್ಯಾರೇ ಎಂದಿಲ್ಲ
ಬಿಜೆಪಿ ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ ಅವರು ಬಿಜೆಪಿಗೆ ದೊಡ್ಡ ತಲೆನೋವಾಗಿ ಪರಿಣಮಿಸುವ ಸಾಧ್ಯತೆ ಇದೆ ಎಂದೇ ನಿರೀಕ್ಷಿಸಲಾಗಿತ್ತು. ಸ್ವಾಭಿಮಾನದ ಹೆಸರಲ್ಲಿ ಕಣಕ್ಕಿಳಿದಿದ್ದ ಮಲ್ಲಿಕಾರ್ಜುನ ಖೂಬಾ ಮನವಿಗೆ ಮತದಾರ ಕ್ಯಾರೇ ಎಂದಿಲ್ಲ ಎಂಬುದು ಫಲಿತಾಂಶದಿಂದ ಸಾಬೀತಾಗಿದೆ. ಮಲ್ಲಿಕಾರ್ಜುನ ಖೂಬಾ ಕೇವಲ 9390 ಮತಗಳು ಮಾತ್ರ ಲಭಿಸಿದ್ದು, ಕಳೆದ ವಿಧಾನ ಸಭೆ ಚುನಾವಣೆಯಲ್ಲಿ 40 ಸಾವಿರಕ್ಕಿಂತ ಹೆಚ್ಚಿನ ಮತಗಳನ್ನು ಪಡೆದಿದ್ದರು ಎಂಬುದು ಗಮನಾರ್ಹ.
Karnataka By Elections Results 2021 Live Updates: ಉಪ ಚುನಾವಣೆ ಫಲಿತಾಂಶ
ಕೊಂಚ ಮಟ್ಟಿಗೆ ಕಾಂಗ್ರೆಸ್ಗೆ ನಷ್ಟ
ಇನ್ನು ಜೆಡಿಎಸ್ ಪಕ್ಷ ಅಲ್ಪಸಂಖ್ಯಾತ ಅಭ್ಯರ್ಥಿಗೆ ಕಣಕ್ಕಿಳಿಸಿ ಗೆಲುವಿನ ಲೆಕ್ಕಾಚಾರ ಹಾಕಿತ್ತಾದರೂ ಗೆಲುವಿನ ದಡ ಮುಟ್ಟುವಲ್ಲಿ ಯಶಸ್ಸು ಕಂಡಿಲ್ಲ. ಕೊಂಚ ಮಟ್ಟಿಗೆ ಕಾಂಗ್ರೆಸ್ಗೆ ನಷ್ಟ ಮಾಡಿರುವುದು ನಿಜ. ಅಭ್ಯರ್ಥಿ ಸೈಯದ್ ಯಾಸ್ರಬ್ ಖಾದ್ರಿಗೆ ಕೇವಲ 11,390 ಮತಗಳು ಮಾತ್ರ ಲಭಿಸಿವೆ. ಒಟ್ಟು 28 ಸುತ್ತಿನಲ್ಲಿ ಮತ ಎಣಿಕೆ ನಡೆದಿದ್ದು, ಆರಂಭದಿಂದಲೂ ಬಿಜೆಪಿ ಅಭ್ಯರ್ಥಿ ಶರಣು ಸಲಗಾರ್ ಮುನ್ನಡೆ ಕಾಯ್ದುಕೊಳ್ಳುತ್ತಾ ಬಂದಿದ್ದರು. ಕಾಂಗ್ರೆಸ್ ಅಭ್ಯರ್ಥಿ ಮಲ್ಲಮ್ಮ ಬಿ ನಾರಾಯಣರಾವ್ ಎರಡನೇ ಸ್ಥಾನದಲ್ಲೇ ತೃಪ್ತಿಪಡಬೇಕಾಯಿತು.
ವಿಜೇತ ಅಭ್ಯರ್ಥಿ ಶರಣು ಸಲಗಾರ್ ಪ್ರತಿಕ್ರಿಯೆ
ಇನ್ನು ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ ಶರಣು ಸಲಗಾರ್ ಪ್ರತಿಕ್ರಿಯೆ ನೀಡಿದ್ದು, ಬಡ ಕುಟುಂಬದಿಂದ ಬಂದ ನಾನು ಭಾರತೀಯ ಜನತಾ ಪಕ್ಷದಿಂದ ಸ್ಪರ್ಧಿಸಿ ಶಾಸಕನಾಗಿದ್ದೇನೆ. ಇದು ನನ್ನ ಜೀವನದ ಮೊದಲ ಐತಿಹಾಸಿಕ ಗೆಲುವಾಗಿದೆ. ಇದು ಬಿಜೆಪಿಯಲ್ಲಿ ಮಾತ್ರ ಸಾಧ್ಯ'' ಎಂದು ಹೇಳಿದರು.
ನಾನು ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಆಡಳಿತ ಕಾರಣ. ಅದೇ ರೀತಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಡಿಸಿಎಂ ಲಕ್ಷ್ಮಣ ಸವದಿ, ಬಿಜೆಪಿ ಪಕ್ಷದ ಸಂಘಟನೆ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ವಸತಿ ಸಚಿವ ವಿ.ಸೋಮಣ್ಣ ಅವರ ಪ್ರಯತ್ನದಿಂದ ಗೆಲುವು ಸಾಧ್ಯವಾಗಿದೆ'' ಎಂದು ತಿಳಿಸಿದರು.
ಕೊರೊನಾ ಸಂಕಷ್ಟಕ್ಕೆ ಸ್ಪಂದಿಸುತ್ತೇನೆ
""ನನ್ನ ಗೆಲುವಿನಲ್ಲಿ ಬೀದರ್ ಸಂಸದ ಭಗವಂತ ಖೂಬಾ, ಸಚಿವ ಪ್ರಭು ಚವ್ಹಾಣ್ ಸೇರಿದಂತೆ ಇಡೀ ಬಸವಕಲ್ಯಾಣ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಕಾರಣೀಕರ್ತರಾಗಿದ್ದಾರೆ'' ಎಂದು ಬಿಜೆಪಿ ಅಭ್ಯರ್ಥಿ ಶರಣು ಸಲಗಾರ್ ಹೇಳಿದ್ದಾರೆ. ನಾನು ಬಸವಕಲ್ಯಾಣ ಕ್ಷೇತ್ರ ಸರ್ವಾಂಗೀಣ ಅಭಿವೃದ್ಧಿ ಕನಸು ಹೊಂದಿದ್ದೇನೆ. ಆದರೆ, ಸದ್ಯ ಕ್ಷೇತ್ರದಲ್ಲಿ ಕೊರೊನಾ ಸೋಂಕಿನಿಂದ ಸಂಕಷ್ಟ ಅನುಭವಿಸುತ್ತಿರುವವರ ರಕ್ಷಣೆಗೆ ಇಂದಿನಿಂದಲೇ ಕಾರ್ಯಪ್ರವೃತ್ತನಾಗುತ್ತೇನೆ ಎಂದು ಹೇಳಿದರು.