ಉಪಚುನಾವಣೆಗೆ ಮುನ್ನ, ಮರಾಠಾ ಅಭಿವೃದ್ದಿ ಪ್ರಾಧಿಕಾರ: ರಾಜ್ಯ ಸರಕಾರ ಸ್ಪಷ್ಟನೆ ನೀಡಲಿ
ರಾಜ್ಯದ ಮತ್ತೆರಡು ಅಸೆಂಬ್ಲಿ ಉಪಚುನಾವಣೆ (ಬಸವಕಲ್ಯಾಣ, ಮಸ್ಕಿ) ಸದ್ಯದಲ್ಲೇ ನಡೆಯುವ ಎಲ್ಲಾ ಸಾಧ್ಯತೆಯಿದೆ. ಎರಡು ಕ್ಷೇತ್ರದ ಉಪಚುನಾವಣೆಯನ್ನು ಗೆದ್ದಿರುವ ಬಿಜೆಪಿ ಮತ್ತೆರಡು ಉಪಚುನಾವಣೆ ನಡೆಯುವ ಕ್ಷೇತ್ರದಲ್ಲೂ ಜಯಸಾಧಿಸಲು ಪೂರ್ವ ತಯಾರಿ ಆರಂಭಿಸಿದೆ.
ಪ್ರಮುಖವಾಗಿ ಬಸವಕಲ್ಯಾಣ ಕ್ಷೇತ್ರದಲ್ಲಿ ಮರಾಠಿಗರ ಮತಬ್ಯಾಂಕ್ ಬಹುಮುಖ್ಯವಾದದ್ದು. ಈಗ, ಕರ್ನಾಟಕ ಸರಕಾರ ಮರಾಠಾ ಪ್ರಾಧಿಕಾರ ರಚಿಸಲು ಮುಂದಾಗಿದೆ. ಈ ಸಂಬಂಧ, ಕರವೇ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣ ಗೌಡ್ರು ತಮ್ಮ ಫೇಸ್ ಬುಕ್ ನಲ್ಲಿ ಬರೆದಿರುವ ಪೋಸ್ಟಿನ ಯಥಾವತ್ ಕಾಪಿ ಹೀಗಿದೆ"
ಮರಾಠ ಸಮಾಜದ ಹಿತ ಕಾಪಾಡಲು ರಾಜ್ಯ ಬಿಜೆಪಿ ಸರ್ಕಾರ ಬದ್ಧ!
ಕರ್ನಾಟಕ ಸರ್ಕಾರ ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚಿಸಿ, 50 ಕೋಟಿ ಮೀಸಲಿರಿಸುವುದಾಗಿ ಹೇಳಿದೆ. ಇದು 'ಮರಾಠಾ' ಎಂಬ ಸಮುದಾಯಕ್ಕೆ (ಜಾತಿ) ಸಂಬಂಧಿಸಿದ ಪ್ರಾಧಿಕಾರವೇ ಅಥವಾ ಕರ್ನಾಟಕದಲ್ಲಿರುವ ಮರಾಠಿ ಭಾಷಾ ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ಪ್ರಾಧಿಕಾರವೇ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಬೇಕು.
ರಾಜ್ಯದ ಯಾವುದೇ ಹಿಂದುಳಿದ ಸಮುದಾಯದ ಹೆಸರಿನಲ್ಲಿ ಪ್ರಾಧಿಕಾರಗಳನ್ನು ಸ್ಥಾಪಿಸಿದರೆ ನಮ್ಮ ಆಕ್ಷೇಪಣೆಯೇನಿಲ್ಲ. ಹಲವಾರು ಸಮುದಾಯಗಳ ಹೆಸರಲ್ಲಿ ಈಗಾಗಲೇ ಹಲವು ಮಂಡಳಿ, ಪ್ರಾಧಿಕಾರಗಳಿವೆ. ಸಾಮಾಜಿಕ ನ್ಯಾಯ ಕಾಪಾಡುವ ದೃಷ್ಟಿಯಲ್ಲಿ ಇಂಥವುಗಳು ಅನಿವಾರ್ಯ. ಆದರೆ ಭಾಷಾ ಅಲ್ಪಸಂಖ್ಯಾತರ ಹೆಸರಿನಲ್ಲಿ ಪ್ರಾಧಿಕಾರಗಳನ್ನು ಸ್ಥಾಪಿಸುವುದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಆಕ್ಷೇಪ ಮತ್ತು ವಿರೋಧವಿದೆ.
ವಿವಿಧ ಭಾಷಾ ಸಮುದಾಯಗಳು ಕರ್ನಾಟಕದಲ್ಲಿ ಕನ್ನಡದ ಮುಖ್ಯವಾಹಿನಿಯಲ್ಲಿ ಬೆರೆತುಹೋಗಿವೆ. ಅವುಗಳನ್ನು ಪ್ರತ್ಯೇಕಿಸಿ ಓಲೈಸುವ ಅಗತ್ಯವಿಲ್ಲ. ಇದು ಅಪಾಯಕಾರಿ ಬೆಳವಣಿಗೆ. ಭಾಷಾವಾರು ಪ್ರಾಂತ್ಯಗಳ ವಿಂಗಡಣೆಯ ನಂತರ ಕನ್ನಡ, ತೆಲುಗು, ಮರಾಠಿ, ತಮಿಳು, ಮಲಯಾಳಂ ಸೇರಿದಂತೆ ನಾನಾ ಭಾಷಿಗರು ತಮ್ಮದೇ ಆದ ರಾಜ್ಯಗಳನ್ನು ಹೊಂದಿದ್ದಾರೆ ಮತ್ತು ತಮ್ಮ ಭಾಷೆಗಳ ಅಭಿವೃದ್ಧಿಗೆ ತಮ್ಮ ತಮ್ಮ ರಾಜ್ಯಗಳಲ್ಲಿ ಪ್ರಾಧಿಕಾರ, ಮಂಡಳಿಗಳನ್ನು ರಚಿಸಿಕೊಂಡಿವೆ.
ಹೇಗೆ ಮಹಾರಾಷ್ಟ್ರದಲ್ಲಿ 'ಕನ್ನಡ ಅಭಿವೃದ್ಧಿ ಪ್ರಾಧಿಕಾರ' ರಚನೆಯಾಗುವುದು ಸಾಧ್ಯವಿಲ್ಲವೋ ಅದೇ ರೀತಿ ಕರ್ನಾಟಕದಲ್ಲಿ 'ಮರಾಠಿ ಅಭಿವೃದ್ಧಿ ಪ್ರಾಧಿಕಾರ' ರಚನೆ ಸಾಧ್ಯವಿಲ್ಲ. ಅದಕ್ಕೆ ನಾವು ಅವಕಾಶ ನೀಡುವುದಿಲ್ಲ.
ಕೇಂದ್ರದಿಂದ ಪರಿಹಾರ ತರಲು ರಾಜ್ಯ ಸರ್ಕಾರ ದಯನೀಯ ವೈಫಲ್ಯ: ಕರವೇ ನಾರಾಯಣ ಗೌಡ
Recommended Video
ಒಂದು ವೇಳೆ ರಾಜ್ಯ ಸರ್ಕಾರ 'ಮರಾಠಾ ಅಭಿವೃದ್ಧಿ ಪ್ರಾಧಿಕಾರ'ವನ್ನು ಕರ್ನಾಟಕದಲ್ಲಿ ಹಲವೆಡೆ ನೆಲೆಸಿರುವ 'ಮರಾಠಾ' ಸಮುದಾಯದ ಅಭಿವೃದ್ಧಿಗಾಗಿಯೇ ಸ್ಥಾಪಿಸಲು ಹೊರಟಿದ್ದರೂ ಅದು ನಿರ್ಣಯ ತೆಗೆದುಕೊಂಡಿರುವ ಸಮಯ ಸರಿಯಲ್ಲ. ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಈ ಓಲೈಕೆ ಮಾಡಲಾಗುತ್ತಿದೆ. ಇದು ರಾಜ್ಯದ ಜನತೆಗೆ ತಪ್ಪು ಸಂದೇಶವನ್ನು ನೀಡುತ್ತದೆ - ಟಿ.ಎ.ನಾರಾಯಣ ಗೌಡ.