'ಅಂಫಾನ್' ಚಂಡಮಾರುತ ಎದುರು ಒಡಿಶಾ ದಿಟ್ಟ ಹೋರಾಟ, ಪಟ್ನಾಯಕ್ 'ಗ್ರೇಟ್'
ಭುವನೇಶ್ವರ, ಮೇ 26: ಇಡೀ ದೇಶ ಕೊರೊನಾ ವೈರಸ್ ವಿರುದ್ಧ ಹೋರಾಟ ನಡೆಸುತ್ತಿರುವ ಸಂಕಷ್ಟದ ಸಂದರ್ಭದಲ್ಲಿ ಈಶಾನ್ಯ ಭಾರತಕ್ಕೆ ಅಂಫಾನ್ ಚಂಡಮಾರುತ ಎದುರಾಯಿತು. ಒಂದೇ ಸಮಯದಲ್ಲಿ ಎರಡೆರಡು ಮಹಾಪ್ರಮಾದದ ವಿರುದ್ಧ ಸಂಘರ್ಷ ಮಾಡಬೇಕಾದ ಸ್ಥಿತಿಗೆ ಒಡಿಶಾ, ಪಶ್ಚಿಮ ಬಂಗಾಳ ರಾಜ್ಯಗಳು ಸಿಲುಕಿಕೊಂಡವು.
Recommended Video
ಅಂಫಾನ್ ಚಂಡಮಾರುತಕ್ಕೆ ಪಶ್ಚಿಮ ಬಂಗಾಳ ನಲುಗಿ ಹೋಯಿತು. ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಎಷ್ಟೇ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಂಡರೂ 80ಕ್ಕಿಂತ ಹೆಚ್ಚು ಜನರು ಸಾವನ್ನಪ್ಪಿದರು. ಆದರೆ, ಒಡಿಶಾ ರಾಜ್ಯದಲ್ಲಿ ಒಂದೇ ಒಂದು ಸಾವು ಸಂಭವಿಸಿಲ್ಲ.
ಅಂಫಾನ್ ಆರ್ಭಟ: ಒಡಿಶಾಗೆ 500 ಕೋಟಿ ರುಪಾಯಿಯ ನೆರವು
ಅಂಫಾನ್ ಚಂಡಮಾರುತ ಎದುರಿಸುವಲ್ಲಿ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಆಡಳಿತ ವೈಖರಿ ಈಗ ಪ್ರಶಂಸೆಗೆ ಕಾರಣವಾಗಿದೆ. ಆಸ್ತಿಪಾಸ್ತಿ ನಷ್ಟ ಅನುಭವಿಸಿದರೂ ಪ್ರಾಣ ಹಾನಿ ಆಗದಂತೆ ನೋಡಿಕೊಳ್ಳುವಲ್ಲಿ ನವೀನ್ ಪಟ್ನಾಯಕ್ ಗೆದ್ದಿದ್ದಾರೆ. ಮುಂದೆ ಓದಿ....
ಅದು 1999ರಲ್ಲಿ ಉಂಟಾದ ಚಂಡಮಾರುತ
1999ರಲ್ಲಿ ಎದುರಾಗಿದ್ದ ಚಂಡಮಾರುತ ಒಡಿಶಾ ರಾಜ್ಯವನ್ನು ಬಿಡದೆ ಕಾಡಿತ್ತು. ಸಾವಿರಾರು ಜನರು ಈ ಪ್ರಮಾದಲ್ಲಿ ಪ್ರಾಣ ಕಳೆದುಕೊಂಡಿದ್ದರು. 2000 ಇಸವಿಯಲ್ಲಿ ಮುಖ್ಯಮಂತ್ರಿಯಾಗಿ ಪಟ್ನಾಯಕ್ ಅಧಿಕಾರ ಸ್ವೀಕರಿಸಿದರು. ಸಿಎಂ ಆದ ಬಳಿಕ ಪ್ರಾಕೃತಿಕ ವಿಕೋಪ ಅಥವಾ ಚಂಡಮಾರುತದಂತಹ ಪ್ರಮಾದಗಳಿಂದ ಆಗುತ್ತಿರುವ ಅಪಾಯಗಳನ್ನು ಹೇಗೆ ಎದುರಿಸಬೇಕಂಬ ವಿಷಯದ ಕಡೆ ಗಮನ ಹರಿಸಿದರು. ಕಳೆದ 18 ತಿಂಗಳಲ್ಲಿ 5 ಚಂಡಮಾರುತ ಒಡಿಶಾ ರಾಜ್ಯದ ಮೇಲೆ ಪ್ರಭಾವ ಬೀರಿದೆ. ಫನಿ ಚಂಡಮಾರುತ ಬಿಟ್ಟು ಉಳಿದ ಯಾವ ಸೈಕ್ಲೋನ್ ಸಮಯದಲ್ಲೂ ಸಾವಿನ ಸಂಖ್ಯೆ ಒಂದಂಕಿ ದಾಟಿರಲಿಲ್ಲ. ಈಗ ಅಂಫಾನ್ ದಾಳಿಯ ವೇಳೆ ಒಂದು ನೋವು ಸಂಭವಿಸಿಲ್ಲ.
ಜನರ ಪ್ರಾಣ ಕಾಪಾಡುವಲ್ಲಿ ಪಟ್ನಾಯಕ್ ಸರ್ಕಾರ ಸಫಲ
ಒಡಿಶಾದಲ್ಲಿ 10 ಜಿಲ್ಲೆಗಳ 89 ಬ್ಲಾಕ್ಗಳಲ್ಲಿ 1,500 ಪಂಚಾಯಿತಿಗಳಲ್ಲಿ ಸುಮಾರು 45 ಲಕ್ಷ ಜನರು ಚಂಡಮಾರುತದಿಂದ ಬಾಧಿತರಾಗಿದ್ದಾರೆ. ಅದಕ್ಕೂ ಮೊದಲೇ ಅವರನ್ನೆಲ್ಲ ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿತ್ತು. ಚಂಡಮಾರುತದ ಭೀಕರ ದಾಳಿಗೆ ನೂರಾರು ಮರಗಳು ನೆಲಕ್ಕುರುಳಿದವು. ವಿದ್ಯುತ್ ಕಂಬಗಳು ಬಿದ್ದವು. ಕೃಷಿ ಭೂಮಿ ನಾಶ ಆಯಿತು. ಹಂಚು ಮನೆಗಳ ಮೇಲ್ಛಾವಣಿ ಹಾರಿ ಹೋದವು. ಆದರೆ, ಜನರನ್ನು ಮಾತ್ರ ಕಾಪಾಡುಕೊಳ್ಳುವಲ್ಲಿ ಒಡಿಶಾ ಸರ್ಕಾರ ಯಶಸ್ವಿಯಾಯಿತು.
ಹೈ ಅಲರ್ಟ್ ಸುಳಿವು ಸಿಕ್ಕ ತಕ್ಷಣ ಕಾರ್ಯರೂಪ
ಚಂಡಮಾರುತ ಕುರಿತು ವಾತಾವರಣ ಇಲಾಖೆ ಮಾಹಿತಿ ನೀಡುತ್ತಿದ್ದಂತೆ, ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಒಡಿಶಾ ಸರ್ಕಾರ ಮುಂದಾಯಿತು. ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಿ ಜನರನ್ನು ಸ್ಥಳಾಂತರಿಸಿತು. ರಾಜ್ಯದ ವಿಪತ್ತು ನಿರ್ವಹಣ ತಂಡದ ಜೊತೆ ಕೆಲಸ ಆರಂಭಿಸಿತು. ಸಮುದ್ರ ತೀರಾದಲ್ಲಿದ್ದವರ ಬಗ್ಗೆ ಹೆಚ್ಚಿನ ಗಮನ ಹರಿಸಲಾಯಿತು. ಕೊವಿಡ್ ರೋಗಿಗಳಿಗಾಗಿ ಕ್ವಾರಂಟೈನ್ ಕೇಂದ್ರಗಳನ್ನು ಪರಿವರ್ತಿಸಿದಂತೆ, ಚಂಡಮಾರುತದ ಆತಂಕ ಎದುರಿಸುತ್ತಿದ್ದ ಜನರಿಗಾಗಿ ವಿಶೇಷ ವ್ಯವಸ್ಥೆಗಳನ್ನು ಕಲ್ಪಿಸಲಾಯಿತು. ಬುಧವಾರ ಬೆಳಿಗ್ಗೆವರೆಗೂ 1.5 ಲಕ್ಷ ಜನರನ್ನು ಕಡಲತೀರಗಳಿಂದ ಸ್ಥಳಾಂತರ ಮಾಡಿದ್ದರು.
ಒಡಿಶಾ ಹೋರಾಟ ಮೆಚ್ಚಿದ ಮೋದಿ
ಜಾಗತಿಕ ಸಾಂಕ್ರಾಮಿಕ ರೋಗವನ್ನು ಎದುರಿಸುತ್ತಿರುವಾಗ ಜೊತೆ ಜೊತೆಯಾಗಿ ಅಂಫಾನ್ ಚಂಡಮಾರುತವನ್ನು ನಿಭಾಯಿಸುವಲ್ಲಿ ಒಡಿಶಾ ಸರ್ಕಾರದ ಪ್ರಯತ್ನಗಳನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ. 'ಒಡಿಶಾದಲ್ಲಿ ಸುಸ್ಥಾಪಿತ ಪ್ರಕ್ರಿಯೆಗಳಿಂದಾಗಿ, ಅನೇಕ ಜೀವಗಳನ್ನು ಉಳಿಸಲಾಗಿದೆ. ನಾನು ಒಡಿಶಾ ನಾಗರಿಕರನ್ನು ಮತ್ತು ಒಡಿಶಾ ಸರ್ಕಾರವನ್ನು ಅಭಿನಂದಿಸುತ್ತೇನೆ'' ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.