ಕೊರೊನಾ ಜೊತೆ ಯಾಸ್: ಒಡಿಶಾ ಸಿಎಂ ಕಾರ್ಯವೈಖರಿ ಇಡೀ ದೇಶಕ್ಕೆ ಮಾದರಿ!
ಭುವನೇಶ್ವರ್, ಮೇ 27: ಕೊರೊನಾವೈರಸ್ ಸಾಂಕ್ರಾಮಿಕಿ ಪಿಡುಗಿನಿಂದ ಇಡೀ ಜಗತ್ತು ತತ್ತರಿಸಿ ಹೋಗುತ್ತಿದೆ. ಮನೆಗಳಿಂದ ಜನರು ಹೊರ ಬರುವುದಕ್ಕೂ ಆಲೋಚಿಸುವಂತಾ ಸನ್ನಿವೇಶ ಜಗತ್ತಿನಾದ್ಯಂತ ಸೃಷ್ಟಿಯಾಗಿದೆ. ಇಡೀ ಮಾನವ ಕುಲವೇ ಸಂಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲಿ ಆತ್ಮವಿಶ್ವಾಸ ಮತ್ತು ಬದ್ಧತೆ ನಮ್ಮನ್ನು ಎಂಥಾ ಅಪಾಯದಿಂದಲೂ ಪಾರು ಮಾಡಬಹುದು ಎಂಬುದಕ್ಕೆ ಒಡಿಶಾ ಉತ್ತಮ ಉದಾಹರಣೆ ಆಗಿ ಹೊರ ಹೊಮ್ಮಿದೆ.
ಒಂದು ಕಡೆಯಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಅಲೆಗಳ ಅಪಾಯ. ಇದರ ಮಧ್ಯೆ ಒಡಿಶಾಗೆ ಅಪ್ಪಳಿಸಿದ ಯಾಸ್ ಚಂಡ ಮಾರುತ ಇಡೀ ರಾಜ್ಯದ ಜನರ ಬದುಕಿನಲ್ಲಿ ಅಲ್ಲೋಲ-ಕಲ್ಲೋಲವನ್ನೇ ಸೃಷ್ಟಿ ಮಾಡಿತ್ತು. ಇಂಥ ಸಮಯದಲ್ಲಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ನಾಯಕತ್ವ ಮತ್ತು ಬದ್ಧತೆಯ ಕಾರ್ಯವೈಖರಿ ಪ್ರಜೆಗಳನ್ನು ರಕ್ಷಿಸಿದೆ.
ಯಾಸ್ ಚಂಡಮಾರುತ: ಬಂಗಾಳ, ಒಡಿಶಾದಲ್ಲಿ 3 ಲಕ್ಷಕ್ಕೂ ಅಧಿಕ ಮನೆಗಳಿಗೆ ಹಾನಿ 4 ಸಾವು
ಭಾರತದ ಪೂರ್ವ ಕರಾವಳಿ ಒಡಿಶಾ ರಾಜ್ಯಕ್ಕೆ ಚಂಡಮಾರುತ ಮತ್ತು ಪ್ರವಾಹ ಪರಿಸ್ಥಿತಿಯನ್ನು ಎದುರಿಸುವುದು ಹೊಸ ಸವಾಲೇನೂ ಅಲ್ಲ. ಆದರೆ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ಪ್ರಾಕೃತಿಕ ವಿಕೋಪವನ್ನು ಯಶಸ್ವಿಯಾಗಿ ಎದುರಿಸುವಲ್ಲಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಪಾತ್ರ ಬಹುಮುಖ್ಯವಾಗಿದೆ.
ಪ್ರಾಕೃತಿಕ ವಿಕೋಪ ಎದುರಿಸಲು ವಿಭಿನ್ನ ಪ್ರಯತ್ನ:
ಒಡಿಶಾ ಸರ್ಕಾರ ಮೊದಲು ಪ್ರಾಕೃತಿಕ ವಿಕೋಪಗಳನ್ನು ಎದುರಿಸಿದ ರೀತಿಯಲ್ಲಿ ಈ ಬಾರಿ ಇರಲಿಲ್ಲ. ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ಯಾಸ್ ಚಂಡಮಾರುತವನ್ನು ವಿಭಿನ್ನ ರೀತಿಯಲ್ಲಿ ನಿಭಾಯಿಸಲು ಸರ್ಕಾರ ಸಿದ್ಧತೆ ಮಾಡಿಕೊಂಡಿತ್ತು. ಕೇವಲ 48 ಗಂಟೆಗಳಲ್ಲಿ 7 ಲಕ್ಷಕ್ಕೂ ಅಧಿಕ ಜನರನ್ನು 3,000 ನಿರಾಶ್ರಿತರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿತ್ತು. ಈ ಸಂದರ್ಭದಲ್ಲಿ ಕೊವಿಡ್-19 ಸೋಂಕು ಹರಡದಂತೆ ಮುನ್ನೆಚ್ಚರಿಕೆ ಆಗಿ ಮಾಸ್ಕ್, ಸ್ಯಾನಿಟೈಸರ್ ಮತ್ತು ಸಾಮಾಜಿಕ ಅಂತರ ಸೇರಿದಂತೆ ಮಾರ್ಗಸೂಚಿಗಳ ಪಾಲನೆಗೂ ವ್ಯವಸ್ಥೆ ಕಲ್ಪಿಸಲಾಗಿತ್ತು.
ಕರಾವಳಿ ಜಿಲ್ಲೆಗಳಾದ ಜಗತ್ ಸಿಂಗಾಪುರ್, ಕೇಂದ್ರಪಾಡ, ಭದ್ರಾಕ್, ಬಾಲಸೋರ್ ಮತ್ತು ಮಯೂರ್ಭಂಜ್ ಪ್ರದೇಶದಲ್ಲಿ ಬಿರುಗಾಳಿ ಸಹಿತ ಮಳೆ ಸುರಿಯಿತು. ಜಜ್ಪುರ, ಕಟಕ್, ಖೋರ್ಧಾ, ಪುರಿ, ಧೆಂಕನಲ್ ಮತ್ತು ಕಿಯೋಂಜರ್ ಪ್ರದೇಶದಲ್ಲಿ ಮಳೆ ನಂತರ ಗಾಳಿ ಬೀಸಿತು. ಇಂಥ ಸಂದರ್ಭವನ್ನು ಎದುರಿಸುವುದಕ್ಕಾಗಿ ರಾಜ್ಯ ಸರ್ಕಾರ ಮೊದಲೇ ಸಿದ್ಧತೆಗಳನ್ನು ಮಾಡಿಕೊಂಡಿತ್ತು.
ನಿರಾಶ್ರಿತರ ತಾಣಗಳಲ್ಲಿ ಅಂಗವಿಕಲರಿಗೆ ಮತ್ತು ಗರ್ಭಿಣಿಯರಿಗೆ ಪ್ರತ್ಯೇಕ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಈ ಕಳೆದ ಎರಡು ದಿನಗಳ ಅವಧಿಯಲ್ಲಿ 750 ಮಕ್ಕಳು ಜನಿಸಿದ್ದು, 2100 ಗರ್ಭಿಣಿಯರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.