ಒಡಿಶಾದ ಪುರಿ ಜಗನ್ನಾಥ ರಥಯಾತ್ರೆಯಲ್ಲಿ 500 ಭಕ್ತರಿಗಷ್ಟೇ ಅವಕಾಶ!
ಭುವನೇಶ್ವರ್, ಜೂನ್.23: ನೊವೆಲ್ ಕೊರೊನಾವೈರಸ್ ಸೋಂಕು ಹರಡುವಿಕೆ ಭೀತಿ ನಡುವೆಯೂ ಜಗತ್ಪ್ರಸಿದ್ಧವಾಗಿರುವ ಒಡಿಶಾದ ಪುರಿ ಜಗನ್ನಾಥ ರಥಯಾತ್ರೆ ನಡೆಸುವುದಕ್ಕೆ ಸುಪ್ರೀಂಕೋರ್ಟ್ ಷರತ್ತುಬದ್ಧ ಅನುಮತಿ ನೀಡಿದೆ.
ಪುರಿಯ ಜಗನ್ನಾಥ ಮಂದಿರದಲ್ಲಿ ಮಾತ್ರ ರಥ ಯಾತ್ರೆ ನಡೆಸಲು ಅನುಮತಿ ನೀಡಿರುವ ಸುಪ್ರೀಂಕೋರ್ಟ್, ರಾಜ್ಯದ ಬೇರೆಲ್ಲೂ ರಥಯಾತ್ರೆ ನಡೆಸುವಂತಿಲ್ಲ ಎಂದು ಆದೇಶಿಸಿದೆ. ರಥಯಾತ್ರೆಯ ಸಂದರ್ಭದಲ್ಲಿ 500ಕ್ಕಿಂತ ಹೆಚ್ಚು ಭಕ್ತರಿಗೆ ಅವಕಾಶ ನೀಡುವಂತಿಲ್ಲ ಎಂದು ಕೋರ್ಟ್ ತಿಳಿಸಿದೆ.
ಜಗನ್ನಾಥ ರಥ ಯಾತ್ರೆ 2020: ದೇವಸ್ನಾನ ಪೂರ್ಣಿಮೆಯ ವಿಶೇಷತೆಯೇನು?
ಒಡಿಶಾದ ಪುರಿಯಲ್ಲಿ ಎರಡು ತೇರುಗಳಿರುವ ಹಿನ್ನೆಲೆ ಎರಡು ರಥಯಾತ್ರೆ ನಡೆಸಲಾಗುತ್ತದೆ. ಪ್ರತಿಯೊಂದು ರಥಯಾತ್ರೆಯ ಸಂದರ್ಭದಲ್ಲಿ ಭಕ್ತರ ಸಂಖ್ಯೆ 500 ದಾಟಬಾರದು. ಎರಡು ರಥಯಾತ್ರೆಯ ಮಧ್ಯೆ ಕನಿಷ್ಠ 1 ಗಂಟೆ ಅಂತರ ಇರಬೇಕು. ರಥ ಎಳೆಯಲು ಬರುವ ಪ್ರತಿಯೊಬ್ಬ ಭಕ್ತರಿಗೂ ಕೊರೊನಾವೈರಸ್ ಪರೀಕ್ಷೆ ನಡೆಸಿರಬೇಕು. ಸಾಮಾಜಿಕ ಅಂತರ ಪಾಲನೆಯಾಗುವುದು ಕಡ್ಡಾಯ ಎಂದು ಕೋರ್ಟ್ ತಿಳಿಸಿದೆ.
ಪುರಿ ನಗರದಾದ್ಯಂತ ಕರ್ಫ್ಯೂ ಜಾರಿ:
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೋಬ್ಡೆ ನೇತೃತ್ವದ ತ್ರಿಸದಸ್ಯ ಪೀಠ ಈ ತೀರ್ಪು ನೀಡಿದೆ. ಜೂನ್.23ರಂದು ರಥಯಾತ್ರೆ ನಡೆಯಲಿದ್ದು, ಸೋಮವಾರ ರಾತ್ರಿ 8ಗಂಟೆಯಿಂದಲೇ ಸುಪ್ರೀಂಕೋರ್ಟ್ ಸೂಚನೆಯಂತೆ ಒಡಿಶಾ ಸರ್ಕಾರವು ಪುರಿ ನಗರದಾದ್ಯಂತ ಕರ್ಫ್ಯೂ ಜಾರಿಗೊಳಿಸಿದೆ. ಎಲ್ಲೆಡೆ ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡಿದೆ.
ಇದಕ್ಕೂ ಮೊದಲು ಜೂನ್.18 ರಂದು ಭಾರತದ ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ ನೇತೃತ್ವದ ಮೂವರು ನ್ಯಾಯಾಧೀಶರ ಪೀಠವು ಸಾಂಕ್ರಾಮಿಕ ರೋಗ ಹರಡುವಿಕೆಯ ಸಮಯದಲ್ಲಿ ಇಂತಹ ಕೂಟಗಳನ್ನು ನಡೆಸಲು ಅನುಮತಿಸಲಾಗುವುದಿಲ್ಲ ಎಂದು ಹೇಳಿತ್ತು. ನಾವು ಈ ವರ್ಷ ರಥಯಾತ್ರೆಯ ನಿಲ್ಲಿಸಿದರೂ ಭಗವಾನ್ ಜಗನ್ನಾಥರು ನಮ್ಮನ್ನು ಕ್ಷಮಿಸುತ್ತಾರೆ. ಸಾರ್ವಜನಿಕ ಆರೋಗ್ಯ ಮತ್ತು ನಾಗರಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಈ ವರ್ಷ ಜಗನ್ನಾಥ ರಥಯಾತ್ರೆಗೆ ಅವಕಾಶ ನೀಡಲಾಗುವುದಿಲ್ಲ" ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತ್ತು.