ಬ್ಲಾಂಕೆಟ್ ಒಳಗೆ ಸಿಕ್ಕಿತು ಒಂದೇ ಕುಟುಂಬದ 6 ಶವಗಳು
ಭುವನೇಶ್ವರ್, ನವೆಂಬರ್ 11: ಒಂದೇ ಕುಟುಂಬದ ಆರು ಮಂದಿ ನಿಗೂಢವಾಗಿ ಮೃತಪಟ್ಟಿರುವ ಘಟನೆ ಒಡಿಶಾದ ಬೊಲಾಂಗಿರ್ ಜಿಲ್ಲೆಯಲ್ಲಿ ನಡೆದಿದೆ.
ಎಲ್ಲರ ರಕ್ತಸಿಕ್ತ ಶವಗಳೂ ಮನೆಯ ನೆಲದ ಮೇಲೆ ಪತ್ತೆಯಾಗಿವೆ. ಶವಗಳನ್ನು ಬ್ಲಾಂಕೆಟ್ನಲ್ಲಿ ಸುತ್ತಿ ಇಡಲಾಗಿದೆ. ಬೊಲಾಂಗಿರ್ ಜಿಲ್ಲೆಯ ಪಟ್ನಾಗಡ ಪೊಲೀಸ್ ಠಾಣಾ ವ್ಯಾಪ್ತಿಯ ಸನ್ರಪದಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಮೃತರನ್ನು ಬುಲು ಜಾನಿ (50) ಅವರ ಪತ್ನಿ ಜ್ಯೋತಿ (48), ಹೆಣ್ಣುಮಕ್ಕಳಾದ ಸರಿತಾ ಮತ್ತು ಶ್ರೇಯಾ ಹಾಗೂ ಗಂಡುಮಕ್ಕಳಾದ ಭೀಷ್ಮ ಮತ್ತು ಸಂಜೀವ್ ಎಂದು ಗುರುತಿಸಲಾಗಿದೆ.
ಬುಲು ಜಾನಿ ಅವರ ಮನೆಯ ಬಾಗಿಲು ಬಹಳ ಸಮಯದಿಂದ ಮುಚ್ಚಿರುವುದನ್ನು ಕಂಡಿದ್ದ ನೆರೆಹೊರೆಯವರಿಂದ ಈ ಘಟನೆ ಬೆಳಕಿಗೆ ಬಂದಿದೆ. ಏನೋ ನಡೆದಿದೆ ಎಂಬ ಅನುಮಾನದಿಂದ ಕಿಟಕಿಯೊಳಗಿನಿಂದ ಇಣುಕಿ ನೋಡಿದ ನೆರೆಯ ಮನೆಯವರಿಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಆರು ಮೃತದೇಶಹಗಳು ಪತ್ತೆಯಾಗಿವೆ. ಬುಲು ಜಾನಿ ಮತ್ತು ಅವರ ಕುಟುಂಬದ ದೇಹಗಳು ನೆಲ ಮೇಲೆ ಬಿದ್ದಿದ್ದವು. ಅವುಗಳನ್ನು ಬ್ಲಾಂಕೆಟ್ನಲ್ಲಿ ಸುತ್ತಿಡಲಾಗಿತ್ತು.
ಅದನ್ನು ಕಂಡ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ಪತ್ತೆಯಾಗುವ ನಿರೀಕ್ಷೆಯಿದೆ. ಕಳೆದ ಹತ್ತು ವರ್ಷಗಳಿಂದ ಬುಲು ಜಾನಿ ಮತ್ತು ಅವರ ಕುಟುಂಬ ಜೇನು ಸಂಗ್ರಹಿಸಿ ಮಾರಾಟ ಮಾಡುವ ಕೆಲಸ ಮಾಡುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಕೃತ್ಯದ ಸ್ವರೂಪ ನೋಡಿ ನಾವು ವಿಶೇಷ ತನಿಖಾ ತಂಡ ಮತ್ತು ವೈಜ್ಞಾನಿಕ ತಂಡವನ್ನು ತನಿಖೆಗಾಗಿ ರಚಿಸಿದ್ದೇವೆ. ಹೆಚ್ಚುವರಿ ಎಸ್ಪಿ ಅದನ್ನು ಮುನ್ನಡೆಸಲಿದ್ದಾರೆ. ಮೇಲ್ನೋಟಕ್ಕೆ ಹರಿತವಾದ ಆಯುಧಗಳಿಂದ ದೇಹಕ್ಕೆ ಗಾಯ ಮಾಡಿರುವುದು ಕಾಣಿಸುತ್ತಿದೆ ಎಂದು ಎಸ್ಪಿ ಸಂದೀಪ್ ಸಂಪತ್ ತಿಳಿಸಿದ್ದಾರೆ.