ಒಡಿಶಾದಲ್ಲಿ ಸಿಎಂ ಪರಿಹಾರ ನಿಧಿಯಿಂದ ಕೊವಿಡ್19 ನಿರ್ವಹಣೆಗೆ 472 ಕೋಟಿ
ಭುವನೇಶ್ವರ್, ಅಕ್ಟೋಬರ್.04: ನೊವೆಲ್ ಕೊರೊನಾವೈರಸ್ ಸೋಂಕು ಹರಡುವಿಕೆ ನಿಯಂತ್ರಣ ಮತ್ತು ನಿರ್ವಹಣೆಗಾಗಿ ಒಡಿಶಾ ಸರ್ಕಾರವು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 472.63 ಕೋಟಿ ರೂಪಾಯಿ ಖರ್ಚು ಮಾಡಿರುವುದಾಗಿ ಸ್ಪಷ್ಟನೆ ನೀಡಿದೆ.
ಒಡಿಶಾದ ಯೋಜನಾ ಸಚಿವ ಪದ್ಮನಾಭ ಬೆಹರಾ ವಿಧಾನಸಭೆಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಕಳೆದ ಮಾರ್ಚ್ ತಿಂಗಳಿನಿಂದ ಈವರೆಗೂ ರಾಜ್ಯದಲ್ಲಿ ಕೊವಿಡ್-19 ನಿರ್ವಹಣೆಗಾಗಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಎಷ್ಟು ಹಣ ಖರ್ಚು ಮಾಡಲಾಗಿದೆ ಎನ್ನುವುದರ ಬಗ್ಗೆ ತಮ್ಮ ಉತ್ತರದಲ್ಲಿ ಉಲ್ಲೇಖಿಸಿದ್ದಾರೆ.
ಶಾಕಿಂಗ್: ಕೊರೊನಾ ಟೆಸ್ಟ್ ಮಾಡಿಸುವುದೇ ಮೂರ್ಖತನ, ಮಾಡಿಸಿದರೆ ಪಾಸಿಟಿವ್ ಪಕ್ಕಾ!
ರಾಜ್ಯ ಬಜೆಟ್ ಅನುದಾನ ಮತ್ತು ಮುಖ್ಯಮಂತ್ರಿ ಪರಿಹಾರ ನಿಧಿಯ ಅನುದಾನ ಬೇರೆ ಬೇರೆಯಾಗಿದೆ. ಒಡಿಶಾದಲ್ಲಿ ಕೊರೊನಾವೈರಸ್ ಸೋಂಕು ಹರಡುವಿಕೆ ನಿಯಂತ್ರಿಸುವುದಕ್ಕೆ ಸರಿ ಸುಮಾರು 2000 ಕೋಟಿ ರೂಪಾಯಿಗೂ ಅಧಿಕ ಹಣ ಖರ್ಚಾಗಿದೆ ಎಂದು ಸಚಿವ ಪದ್ಮನಾಭ್ ಬೆಹರಾ ತಿಳಿಸಿದ್ದಾರೆ.
ಸಿಎಂಆರ್ಎಫ್ ಸಂಗ್ರಹಿಸಿದ ಹಣದ ಮಾಹಿತಿಯಿಲ್ಲ:
ಕಳೆದ ಮಾರ್ಚ್ ತಿಂಗಳಿನಿಂದ ಒಡಿಶಾದಲ್ಲಿ ಕೊರೊನಾವೈರಸ್ ಸೋಂಕಿನ ಅಟ್ಟಹಾಸ ಮಿತಿ ಮೀರಿದೆ. ಈ ಅವಧಿಯಲ್ಲಿ ಕೊವಿಡ್-19 ನಿರ್ವಹಣೆಗಾಗಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೆರವು ಹರಿದು ಬಂದಿತ್ತು. ಆದರೆ, ಸಚಿವರು ನೀಡಿರುವ ಉತ್ತರದಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ಎಷ್ಟು ಹಣ ಬಂದಿದೆ ಎನ್ನುವ ಬಗ್ಗೆ ಮಾಹಿತಿಯಿಲ್ಲ.
ಸಿಎಂಆರ್ಎಫ್ ಹಣ ಯಾವುದಕ್ಕೆ ಬಳಕೆ:
ರಾಜ್ಯದಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಬಿಡುಗಡೆಯಾದ ಹಣವನ್ನು ಜಿಲ್ಲಾಡಳಿತದ ಖಾತೆಗೆ ಜಮೆ ಮಾಡಲಾಗುತ್ತಿತ್ತು. ಕೊವಿಡ್-19 ಆಸ್ಪತ್ರೆಗಳ ನಿರ್ವಹಣೆ, ಪೊಲೀಸರ ಖರ್ಚು ವೆಚ್ಚ, ಶ್ರಮಿಕ್ ರೈಲುಗಳ ಟಿಕೆಟ್, ವಲಸೆ ಕಾರ್ಮಿಕರ ಕ್ವಾರೆಂಟೇನ್ ಕೇಂದ್ರಗಳ ನಿರ್ವಹಣೆ, ಗ್ರಾಮೀಣ, ನಗರ ಪ್ರದೇಶಗಳಲ್ಲಿ ಕೊವಿಡ್-19 ವಾರ್ಡ್ ಗಳ ಪರಿಶೀಲನೆಗೆ ತೆರಳುವ ವೈದ್ಯರು ಮತ್ತು ಅಧಿಕಾರಿಗಳ ಪ್ರಯಾಣ ವೆಚ್ಚಕ್ಕಾಗಿ ಈ ಹಣವನ್ನು ಖರ್ಚು ಮಾಡಿಕೊಳ್ಳಲಾಗುತ್ತಿತ್ತು.
ಸಾಂಸ್ಥಿಕ ಕ್ವಾರೆಂಟೇನ್ ಕೇಂದ್ರಕ್ಕೆ ಹೆಚ್ಚು ಅನುದಾನ:
ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಬಿಡುಗಡೆಯಾಗಿರುವ 472 ಕೋಟಿ ಅನುದಾನದಲ್ಲಿ ಅತಿಹೆಚ್ಚು ಮೊತ್ತವನ್ನು ಸಾಂಸ್ಕಿಕ ಕ್ವಾರೆಂಟೇನ್ ಕೇಂದ್ರಗಳಿಗೆ ನೀಡಲಾಗಿದೆ. ಪ್ರತಿಯೊಬ್ಬ ವಲಸಿಗ ಕೊವಿಡ್-19 ಸೋಂಕಿತರಿಗಾಗಿ ಕನಿಷ್ಠ 2,000 ರೂಪಾಯಿ ಖರ್ಚು ಮಾಡಲಾಗುತ್ತಿತ್ತು. ಗ್ರಾಮೀಣ ಪ್ರದೇಶಗಳಲ್ಲಿ ಸಾಂಸ್ಥಿಕ ಕ್ವಾರೆಂಟೇನ್ ಕೇಂದ್ರಗಳ ನಿರ್ವಹಣೆಗಾಗಿ 160 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಲಾಗಿದೆ. ನಗರ ಮತ್ತು ಮಹಾನಗರಗಳ ವ್ಯಾಪ್ತಿಯಲ್ಲಿ ಸಾಂಸ್ಥಿಕ ಕೇಂದ್ರಗಳ ಕಟ್ಟಡಕ್ಕಾಗಿ 5.54 ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದೆ. 7 ಲಕ್ಷ ವಲಸಿಗರಿಗಾಗಿ 135 ಕೋಟಿ ಹಣವನ್ನು ಖರ್ಚು ಮಾಡಲಾಗಿದೆ ಎಂದು ಉತ್ತರದಲ್ಲಿ ಉಲ್ಲೇಖಿಸಲಾಗಿದೆ.
ಪೊಲೀಸರ ಭದ್ರತೆ, ನಿರ್ವಹಣೆಗೆ ಕೋಟಿ ಕೋಟಿ:
ಒಡಿಶಾದಲ್ಲಿ ಕೊವಿಡ್-19 ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಪೊಲೀಸರು ನಿರ್ವಹಣೆ ಮತ್ತು ಭದ್ರತೆಗಾಗಿ 15 ಕೋಟಿ ರೂಪಾಯಿ ನೀಡಲಾಗಿದೆ. ನಗರ ಪ್ರದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿದ ಬೀದಿ ವ್ಯಾಪಾರಿಗಳ ಹಿತ ಕಾಯುವುದಕ್ಕಾಗಿ 19 ಕೋಟಿ ರೂಪಾಯಿ ರಿಲೀಸ್ ಮಾಡಲಾಗಿದೆ. ಪೂರ್ವ ರೈಲ್ವೆ ವಿಭಾಗದಿಂದ ಒಡಿಶಾಗೆ ವಲಸೆ ಬರುವ ಕಾರ್ಮಿಕರನ್ನು ಶ್ರಮಿಕ್ ರೈಲಿನ ಮೂಲಕ ಕರೆ ತರುವುದಕ್ಕಾಗಿ 9 ಕೋಟಿ ರೂಪಾಯಿ ನೀಡಲಾಗುತ್ತಿದೆ.
ಸಾಂಕ್ರಾಮಿಕ ಪಿಡುಗು ನಿಯಂತ್ರಿಸುವ ಉದ್ದೇಶದಿಂದ ಸರ್ಕಾರವು ವಿಕೇಂದ್ರಕರಣದ ಮೇಲೆ ಹೆಚ್ಚು ಗಮನ ಹರಿಸಿರುವುದು ಗೊತ್ತಾಗುತ್ತದೆ. ನಗರ ಮತ್ತು ಮಹಾನಗರ ವ್ಯಾಪ್ತಿಯಲ್ಲಿ ಕೊವಿಡ್-19 ನಿರ್ವಹಣೆಗೆ 46000 ವಾರ್ಡ್ ಸಮಿತಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 2,000 ಸಮಿತಿಗಳನ್ನು ರಚಿಸಿದ್ದು, ಅದಕ್ಕಾಗಿ 48 ಕೋಟಿ ರೂಪಾಯಿ ನೀಡಲಾಗಿದೆ.