ಪುಲ್ವಾಮಾ ದಾಳಿ ಹುತಾತ್ಮನ ಕುಟುಂಬಕ್ಕೆ ಸೊಸೆ ನೀಡಿದ ಆಘಾತ
ಭುವನೇಶ್ವರ್, ಫೆಬ್ರವರಿ 3: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ 45 ಯೋಧರನ್ನು ಬಲಿ ತೆಗೆದುಕೊಂಡ ಭೀಕರ ಉಗ್ರರ ದಾಳಿ ನಡೆದು ಒಂದು ವರ್ಷವಾಗುತ್ತಿದೆ. ಈ ದುರಂತದ ಕಹಿ ನೆನಪು ಇನ್ನೂ ಮಾಸಿಲ್ಲ. 2019ರ ಫೆ. 14ರಂದು ಆತ್ಮಾಹುತಿ ಬಾಂಬರ್ ನಡೆಸಿದ ದಾಳಿಯ ಹಿಂದಿನ ಒಂದೊಂದೇ ಸ್ಫೋಟಕ ಸಂಗತಿಗಳು ಇನ್ನೂ ಹೊರಬರುತ್ತಿವೆ.
ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಸೈನಿಕರ ಕುಟುಂಬಗಳ ಸ್ಥಿತಿ ಮಾತ್ರ ಇನ್ನೂ ಸುಧಾರಿಸಿಲ್ಲ. ಮಗನನ್ನು ಕಳೆದುಕೊಂಡ ಆಘಾತದಿಂದ ಹೊರಬರಲು ಪೋಷಕರು ಮತ್ತು ಅವರ ಅವಲಂಬಿತರು ಪ್ರಯತ್ನಿಸುತ್ತಿದ್ದಾರೆ. ಸರ್ಕಾರಗಳಿಂದ ದೊರೆತ ಪರಿಹಾರದ ಹಣ ಕೆಲವರಿಗೆ ಕೊಂಚ ಆಧಾರವಾಗಿದೆ. ಆದರೆ ಈ ಹಣವೂ ಕೈತಪ್ಪಿ ಹುತಾತ್ಮನ ಕುಟುಂಬವೊಂದು ಬೀದಿಪಾಲಾಗುವ ಸ್ಥಿತಿಗೆ ತಲುಪಿರುವ ಹೃದಯ ಕಲಕುವ ಘಟನೆ ವರದಿಯಾಗಿದೆ.
ಪುಲ್ವಾಮಾ ಉಗ್ರರ ದಾಳಿಗೂ ಟ್ರಕ್ ಚಾಲಕನಿಗೂ ಎಲ್ಲಿಂದೆಲ್ಲಿಯ ನಂಟು?
ಪುಲ್ವಾಮಾ ಉಗ್ರರ ದಾಳಿಯಲ್ಲಿ ಹುತಾತ್ಮರಾದವರಲ್ಲಿ ಒಡಿಶಾದ ಮನೋಜ್ ಕುಮಾರ್ ಬೆಹ್ರಾ ಒಬ್ಬರು. ಸಿಆರ್ ಪಿಎಫ್ನ ಕಾನ್ಸ್ಟೆಬಲ್ ಆಗಿದ್ದ ಮನೋಜ್ ಕುಮಾರ್ ಬೆಹ್ರಾ ಅವರ ಕುಟುಂಬ ಕಡುಬಡತನದ ಬೇಗೆಯಲ್ಲಿ ಬಳಲುತ್ತಿತ್ತು. ಮನೆಗೆ ಆಧಾರವಾಗಿದ್ದ ಮಗನನ್ನು ಕಳೆದುಕೊಂಡ ಕುಟುಂಬ ಆಘಾತಕ್ಕೆ ಒಳಗಾಗಿತ್ತು. ಈಗ ಅವರ ದುಃಖ ದುಪ್ಪಟ್ಟಾಗಿದೆ. ಹುತಾತ್ಮ ಮನೋಜ್ ಕುಮಾರ್ ಅವರಿಗೆ ಸರ್ಕಾರ ನೀಡಿದ ಎಲ್ಲ ಆರ್ಥಿಕ ಸಹಾಯಗಳನ್ನು ಪಡೆದುಕೊಂಡ ಬಳಿಕ ಅವರ ಪತ್ನಿ ಮನೆಬಿಟ್ಟು ಹೋಗಿದ್ದಾರೆ ಎಂದು 'ಇಂಡಿಯಾ ಟುಡೆ' ವರದಿ ಮಾಡಿದೆ.
ಆರ್ಥಿಕ ಸಹಾಯ ನಿರೀಕ್ಷಿಸಿದ್ದರು
ಕಟಕ್ ಜಿಲ್ಲೆಯ ನಿಯಾಲಿ ಪ್ರದೇಶದ ರತನ್ಪುರದಲ್ಲಿನ ಹುತಾತ್ಮ ಕಾನ್ಸ್ಟೆಬಲ್ ಮನೋಜ್ ಕುಮಾರ್ ಕುಟುಂಬ, ಕಡೇಪಕ್ಷ ಮಗನ ಹೆಸರಿಗೆ ಸರ್ಕಾರದಿಂದ ಹಣಕಾಸಿನ ಸಹಾಯ ದೊರಕುತ್ತದೆ. ಅದರಿಂದ ಹೇಗೋ ಬದುಕಬಹುದು ಎಂದು ನಿರೀಕ್ಷಿಸಿದ್ದರು. ಹುತಾತ್ಮರಿಗ ಪತ್ನಿ ಇದ್ದರೆ ಅವರ ಕೈಗೇ ಪರಿಹಾರದ ಹಣ ಸಿಗುತ್ತದೆ, ಹೀಗೆ ಸಿಕ್ಕ ಎಲ್ಲ ಹಣವನ್ನೂ ತೆಗೆದುಕೊಂಡು ಸೊಸೆ ಮನೆಬಿಟ್ಟಿದ್ದಾಳೆ ಎಂದು ಮನೋಜ್ ಕುಟುಂಬ ಕಣ್ಣೀರಿಟ್ಟಿದೆ.
ನಮ್ಮ ಹಣೆಬರಹ ಸರಿಯಿಲ್ಲ
'ಸರ್ಕಾರದಿಂದ ಎಲ್ಲ ಹಣಕಾಸಿನ ಸಹಾಯ ಪಡೆದುಕೊಂಡ ನಂತರ ನಮ್ಮ ಸೊಸೆ ನಮ್ಮನ್ನೆಲ್ಲ ಬಿಟ್ಟು ಹೋಗಿದ್ದಾಳೆ. ಉಗ್ರರ ದಾಳಿಯಲ್ಲಿ ಜೀವ ಕಳೆದುಕೊಂಡ ಯೋಧರ ಕುಟುಂಬದವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಣಕಾಸಿನ ನೆರವು ನೀಡಿವೆ. ರಾಜ್ಯ ಸರ್ಕಾರದಿಂದ ಅವಳಿಗೆ ಸುಮಾರು 25 ಲಕ್ಷ ರೂ ಮತ್ತು ಕೇಂದ್ರ ಸರ್ಕಾರದಿಂದ 30 ಲಕ್ಷ ರೂ ಸಿಕ್ಕಿತ್ತು. ಮಗನನ್ನು ಕಳೆದುಕೊಂಡ ನಮ್ಮ ಹಣೆಬರಹವೇ ಸರಿ ಇಲ್ಲ' ಎಂದು ಮನೋಜ್ ತಂದೆ ಜಿತೇಂದ್ರ ಬೆಹ್ರಾ ಅಳಲು ತೋಡಿಕೊಂಡರು.
ಹಿಜ್ಬುಲ್ ಉಗ್ರರ ಜೊತೆ ದೇವಿಂದರ್ ನಂಟು; ಎನ್ಐಗೆ ಸಿಕ್ತು ಸಾಕ್ಷಿ
ಹಣದ ಮೇಲೆ ನಮಗೆ ಹಕ್ಕು ಇಲ್ಲವಂತೆ
'ನಮ್ಮ ಮಗನೇ ನಮಗೆ ಎಲ್ಲವೂ ಆಗಿದ್ದ. ಅವನ ಸಾವಿನ ಬಳಿಕ ನಮ್ಮ ಬದುಕು ಶೋಚನೀಯವಾಗಿದೆ. ಅವನು ಬದುಕಿದ್ದಾಗ ನಮ್ಮನ್ನು ಅವನೇ ನೋಡಿಕೊಳ್ಳುತ್ತಿದ್ದ. ಸರ್ಕಾರ ನಮಗೆ ನೀಡಿದ ಹಣವನ್ನೆಲ್ಲಾ ನಮ್ಮ ಸೊಸೆಯ ಖಾತೆಯೇ ಜಮೆ ಮಾಡಲಾಗಿದೆ. ಆ ಹಣದ ಮೇಲೆ ನಮಗೆ ಯಾವ ಹಕ್ಕೂ ಇಲ್ಲ ಎಂದು ಈಗ ಆಕೆ ಹೇಳುತ್ತಿದ್ದಾಳೆ. ನನಗೆ ಏನು ಮಾಡುವುದೋ ತೋಚುತ್ತಿಲ್ಲ. ಸಹಾಯಕ್ಕಾಗಿ ಎಲ್ಲಿಗೆ ಹೋಗಬೇಕೋ ತಿಳಿಯುತ್ತಿಲ್ಲ' ಎಂದು ಕಣ್ಣೀರಿಟ್ಟರು.
ಉದ್ಯೋಗ ತಿರಸ್ಕರಿಸಿದ್ದ ಸೊಸೆ
ಮನೋಜ್ ಪತ್ನಿ ಎಲಿಲತಾ ಬೆಹ್ರಾಗೆ ಸರ್ಕಾರ ಉದ್ಯೋಗದ ಆಫರ್ ನೀಡಿತ್ತು. ಆದರೆ ಮಗಳು ತುಂಬಾ ಚಿಕ್ಕವಳಾಗಿದ್ದು, ಅವಳನ್ನು ಬೆಳೆಸಬೇಕು. ಹೀಗಾಗಿ ಮೂರು ವರ್ಷದ ಬಳಿಕವಷ್ಟೇ ತಾನು ಉದ್ಯೋಗಕ್ಕೆ ಸೇರಿಕೊಳ್ಳಲು ಸಾಧ್ಯ ಎಂದು ಆ ಆಹ್ವಾನವನ್ನು ಅವರು ತಿರಸ್ಕರಿಸಿದ್ದರು.
ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ತಮಗೆ ಒಟ್ಟು 51 ಲಕ್ಷ ರೂ ಹಣ ಬಂದಿರುವುದನ್ನು ಎಲಿಲತಾ ಒಪ್ಪಿಕೊಂಡಿದ್ದಾರೆ. ಮಗಳಿಗೆ ಐದು ವರ್ಷ ತುಂಬಿದ ಬಳಿಕವಷ್ಟೇ ಉದ್ಯೋಗಕ್ಕೆ ಸೇರುವುದಾಗಿ ಅವರು ತಿಳಿಸಿದ್ದಾರೆ. 'ಸರ್ಕಾರದಿಂದ ನನಗೆ 51 ಲಕ್ಷ ರೂ ಹಣಕಾಸಿನ ಸಹಾಯ ಸಿಕ್ಕಿದೆ. ಈ ಹಣದಿಂದ ನನ್ನ ಮಗಳಿಗೆ ಉತ್ತಮ ಶಿಕ್ಷಣ ಕೊಡಿಸುತ್ತೇನೆ' ಎಂದು ತಿಳಿಸಿದ್ದಾರೆ.