ಮಿಶನ್ ಶಕ್ತಿ: ಮಹಿಳಾ ಸಬಲೀಕರಣಕ್ಕೆ "ಒಡಿಶಾ 50" ಯೋಜನೆ
ಭುವನೇಶ್ವರ್, ಫೆಬ್ರವರಿ.18: ಭಾರತದ ಆರ್ಥಿಕತೆಯ ಶಕ್ತಿ ವೃದ್ಧಿಸುವಲ್ಲಿ ಮಹಿಳೆಯರು ಮಹತ್ವದ ಪಾತ್ರ ವಹಿಸಲಿದ್ದಾರೆ. ಆದರೆ ಪುರುಷರಿಗೆ ಹೋಲಿಸಿ ನೋಡಿದಾಗ ಮಹಿಳೆಯರಿಗೆ ಸಮಯದ ಕೊರತೆಯು ಹೆಚ್ಚಾಗಿ ಕಾಡುತ್ತದೆ ಎಂದು ಮಿಷನ್ ಶಕ್ತಿ ನಿರ್ದೇಶಕಿ ಸುಜಾತ ಕಾರ್ತಿಕೇಯನ್ ತಿಳಿಸಿದ್ದಾರೆ.
ದೇಶದ ತಳಮಟ್ಟದಿಂದಲೂ ಮಹಿಳೆಯರಲ್ಲಿ ನಾಯಕತ್ವದ ಗುಣವನ್ನು ವೃದ್ಧಿಸುವ ಮತ್ತು ಅದಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ವಿಧಾನಗಳನ್ನು ರೂಪಿಸಬೇಕಿದೆ. ಮಹಿಳಾ ಸಬಲೀಕರಣಕ್ಕಾಗಿ ಸಂಬದ್ ಗ್ರೂಪ್ ಸಹಯೋಗದೊಂದಿಗೆ ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ ಮತ್ತು ಖಿಮ್ಜಿ ಫೌಂಡೇಷನ್ "ಒಡಿಶಾ 50" ಎಂಬ ಕಾರ್ಯಯೋಜನೆಗಳನ್ನು ರೂಪಿಸಿದೆ.
ಉತ್ತರಾಖಂಡದ ಒಂದು ದಿನದ ಸಿಎಂ ಆದ 19 ವರ್ಷದ 'ನಾಯಕಿ'
ಮಿಶನ್ ಶಕ್ತಿ ಬಗ್ಗೆ ನಿರ್ದೇಶಕಿ ಸುಜಾತ ಕಾರ್ತಿಕೇಯನ್ ಮಾತನಾಡಿದರು. ಮಹಿಳಾ ಸಬಲೀಕರಣ ಹಾಗೂ ಇತರೆ ಯಾವುದೇ ವಿಷಯಗಳಾಗಲಿ ಸರ್ಕಾರ ಒಂದರಿಂದಲೇ ಬದಲಾವಣೆ ಸಾಧ್ಯವಿಲ್ಲ. ಸ್ವಯಂಪ್ರೇರಿತರಾಗಿ ಮಹಿಳೆಯರು, ಸಂಘ-ಸಂಸ್ಥೆಗಳು ಸರ್ಕಾರದ ಜೊತೆಗೆ ಕೈಜೋಡಿಸಬೇಕು. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಮಹಿಳೆಯರಲ್ಲಿ ನಾಯಕತ್ವದ ಗುಣ ಬೆಳೆಸುವುದಕ್ಕೆ ಉತ್ತೇಜನ ನೀಡುವುದೇ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಕೊರೊನಾ ವಾರಿಯರ್ಸ್ ಆಗಿ ಮಹಿಳೆಯರ ಕಾರ್ಯ
ದೇಶಾದ್ಯಂತ ಕೊರೊನಾವೈರಸ್ ಸೋಂಕು ಕಾಡುತ್ತಿದ್ದ ಸಂದರ್ಭದಲ್ಲಿ ಮಹಿಳಾ ಸಂಘಟನೆಗಳು ಮತ್ತು ಸ್ವಯಂ-ಸೇವಕ ಸಂಸ್ಥೆಗಳು ಕೊರೊನಾ ಯೋಧರಂತೆ ಕಾರ್ಯ ನಿರ್ವಹಿಸಿದರು. ಜಾನಪದ ಗೀತೆಗಳ ಮೂಲಕ ಜಾಗೃತಿ ಮೂಡಿಸಿದರು. ನಾಯಕತ್ವವನ್ನು ವಹಿಸಿಕೊಂಡು ಸಾಮಾಜಿಕ ಅಂತರ ಮತ್ತು ಸ್ಯಾನಿಟೈಸರ್ ಬಳಕೆ ಬಗ್ಗೆ ಅರಿವು ಮೂಡಿಸಿದರು. ಇಷ್ಟಲ್ಲದೇ, ಮಹಿಳಾ ಸ್ವ-ಸಹಾಯ ಸಂಘಗಳು 70 ಲಕ್ಷ ಮಾಸ್ಕ್ ಗಳನ್ನು ಸಿದ್ಧಪಡಿಸಿ ಮಾರಾಟ ಮಾಡಿದರು. ಅದರಿಂದ ಬಂದ ಹಣದಲ್ಲಿ ಸ್ವಲ್ಪ ಭಾಗವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಕೊಡುಗೆಯಾಗಿ ನೀಡಿದವು ಎಂದು ಸುಜಾತ ಕಾರ್ತಿಕೇಯನ್ ತಿಳಿಸಿದ್ದಾರೆ.
ಮಾರ್ಚ್ ತಿಂಗಳಿನಲ್ಲಿ 500 ಮಹಿಳೆಯರಿಗೆ ತರಬೇತಿ
ಸ್ವ-ಸಹಾಯ ಸಂಘದ ಮಹಿಳಾ ಸದಸ್ಯರನ್ನು ಬ್ಯಾಂಕಿನ ಪ್ರತಿನಿಧಿಯಾಗಿ ನೇಮಿಸಲಾಗಿದೆ. ಈ ಮಹಿಳಾ ಸದಸ್ಯರು ಬೇರೆ ಮಹಿಳೆಯರನ್ನು ಬ್ಯಾಂಕಿಗೆ ಕರೆ ತರುವ ಕಾರ್ಯವನ್ನು ಮಾಡಲಿದ್ದಾರೆ. ಮುಂದಿನ ಮಾರ್ಚ್ ತಿಂಗಳಿನಲ್ಲಿ 500 ಮಹಿಳೆಯರಿಗೆ ಬ್ಯಾಂಕಿಂಗ್ ವಲಯಕ್ಕೆ ಸಂಬಂಧಿಸಿದಂತೆ ತರಬೇತಿ ನೀಡುವುದಕ್ಕೆ ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.
ಮೂರು ಜಿಲ್ಲೆಗಳಲ್ಲಿ ಭತ್ತ ಸಂಗ್ರಹಿಸಿದ ಮಹಿಳೆಯರ ಬಗ್ಗೆ ಮೆಚ್ಚುಗೆ
ಸಂಬಲಾಪುರ್, ಕಾಳಹಂದಿ, ಬರ್ಗರ್ ಜಿಲ್ಲೆಗಳಲ್ಲಿ ಸ್ವ-ಸಹಾಯ ಸಂಘಗಳು ಮತ್ತು ಸಂಘಗಳ ನೆರವಿನಿಂದ ಹಲವು ಮಹಿಳೆಯರು ತಂತ್ರಜ್ಞಾನವನ್ನು ಮತ್ತು ಅತ್ಯಾಧುನಿಕ ಉಪಕರಣಗಳನ್ನು ಬಳಸಿಕೊಂಡು ಭತ್ತದ ಬೆಳೆಯನ್ನು ಸಂಗ್ರಹಿಸಿಟ್ಟುಕೊಳ್ಳುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮಹಿಳೆಯರ ಭಾಗವಹಿಸುವಿಕೆ ಬಗ್ಗೆ ಅರ್ಥಶಾಸ್ತ್ರಜ್ಞರ ಮಾತು
ಖ್ಯಾತ ಅರ್ಥಶಾಸ್ತ್ರಜ್ಞ ಮತ್ತು ಕೆಐಐಟಿ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ನ ಡೀನ್ ಪ್ರೊ. ಎಸ್.ಎನ್. ಮಿಶ್ರಾ ಈ ಸಂದರ್ಭದಲ್ಲಿ ತಮ್ಮ ಅಭಿಪ್ರಾಯ ಮಂಡಿಸಿದರು. ಮಹಿಳೆಯರು ಮತ್ತು ಪುರುಷರ ನಡುವಿನ ಸಮಾನತೆ ಮತ್ತು ನ್ಯಾಯದ ಬಗ್ಗೆ ತಿಳಿದುಕೊಳ್ಳಬೇಕಿದೆ. 2020ರ ಮಾನವಾಭಿವೃದ್ಧಿ ವರದಿ ಪ್ರಕಾರ, ಮಾರುಕಟ್ಟೆಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಪ್ರಮಾಣ ತೀರಾ ಕಡಿಮೆಯಾಗಿದೆ. ಉದಾಹರಣೆಗೆ ಪುರುಷರು ಶೇ.76ರಷ್ಟಿದ್ದರೆ, ಮಹಿಳೆಯರ ಪ್ರಮಾಣ ಶೇ.23.5ರಷ್ಟಿದೆ. ಚೀನಾದಲ್ಲಿ ಹೋಲಿಸಿ ನೋಡಿದರೆ ಪುರುಷರ ಭಾಗವಹಿಸುವಿಕೆ ಪ್ರಮಾಣ ಶೇ.67ರಷ್ಟಿದ್ದರೆ, ಮಹಿಳೆಯರ ಪ್ರಮಾಣ ಶೇ.60ರಷ್ಟಿದೆ ಎಂದು ತಿಳಿಸಿದ್ದಾರೆ.
ಭಾರತದಲ್ಲಿ ಮಹಿಳೆಯರ ಭಾಗವಹಿಸುವಿಕೆ ಪ್ರಮಾಣ ಕಡಿಮೆ
ಇಡೀ ದೇಶದ ಆರ್ಥಿಕ ವಲಯದಲ್ಲಿ ಪುರುಷರಿಗೆ ಹೋಲಿಸಿದ್ದಲ್ಲಿ ಮಹಿಳೆಯರ ಭಾಗವಹಿಸುವಿಕೆ ಪ್ರಮಾಣವು ತೀರಾ ಕಡಿಮೆಯಾಗಿದೆ. ಒಡಿಶಾದಲ್ಲಿ ಪ್ರಸ್ತುತ ಮಹಿಳಾ ಭಾಗವಹಿಸುವಿಕೆ ಪ್ರಮಾಣ ಶೇ.22ರಷ್ಟಿದ್ದು, 10 ವರ್ಷಗಳ ಹಿಂದೆ ಈ ಪ್ರಮಾಣವು ಶೇ.35ರಷ್ಟಿತ್ತು. ನೀತಿ ಆಯೋಗದ ವರದಿ ಪ್ರಕಾರ, ಶೇ.30ರಷ್ಟು ಪುರುಷರು ಎಂಜಿನಿಯರಿಂಗ್ ಪದವಿ ಶಿಕ್ಷಣ ಪಡೆದರೆ ಶೇ.4ರಷ್ಟು ಮಹಿಳೆಯರು ಮಾತ್ರ ಎಂಜಿನಿಯರ್ ಪದವಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ ಎಂದು ಮಿಶ್ರಾ ಹೇಳಿದ್ದಾರೆ.