10 ಹೆಕ್ಟೇರ್ ಪ್ರದೇಶದಲ್ಲಿ ಆನೆಗಳಿಗಾಗಿ ಪುನರ್ವಸತಿ ಕೇಂದ್ರ
ಭುವನೇಶ್ವರ, ಸೆಪ್ಟೆಂಬರ್ 16 : ಆನೆ ಮತ್ತು ಮಾನವನ ಸಂಘರ್ಷ ತಡೆಯಲು ಒಡಿಶಾ ಸರ್ಕಾರ ಆನೆಗಳ ಪುನರ್ವಸತಿ ಕೇಂದ್ರವನ್ನು ಆರಂಭಿಸಲಿದೆ. 10 ಹೆಕ್ಟೇರ್ ಪ್ರದೇಶದಲ್ಲಿ ಈ ಕೇಂದ್ರ ನಿರ್ಮಾಣವಾಗಲಿದೆ.
ಗಾಯಗೊಂಡ, ಗುಂಪಿನಿಂದ ಬೇರ್ಪಟ್ಟ, ರಕ್ಷಣೆ ಮಾಡಲಾಗದ ಆನೆಗಳನ್ನು ನೋಡಿಕೊಳ್ಳಲು ಪುನರ್ವಸತಿ ಕೇಂದ್ರ ಆರಂಭವಾಗಲಿದೆ. ಇದಕ್ಕಾಗಿ ಕೇಂದ್ರ ಸರ್ಕಾರದ ಅನುಮತಿಯನ್ನು ಒಡಿಶಾ ಸರ್ಕಾರ ಪಡೆದಿದೆ.
ಕರ್ನಾಟಕದಲ್ಲಿ ಒಂದೇ ತಿಂಗಳಲ್ಲಿ 4 ಆನೆಗಳ ಸಾವು; ಹೀಗೇ ಮುಂದುವರೆದರೆ ಹೇಗೆ?
ಸೆಪ್ಟೆಂಬರ್ 21ರ ಸೋಮವಾರ ಆನೆಗಳ ಪುನರ್ವಸತಿ ಕೇಂದ್ರ ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡಲಾಗುತ್ತದೆ. ಮೂರು ತಿಂಗಳಿನಲ್ಲಿ ಯೋಜನೆಯನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿದೆ.
ಈ ಪುನರ್ವಸತಿ ಕೇಂದ್ರದಿಂದ ಮಾನವ ಮತ್ತು ಆನೆಗಳ ಸಂಘರ್ಷ ತಡೆಯಬಹುದು ಎಂದು ಅಂದಾಜಿಸಲಾಗಿದೆ. ಪ್ರತಿ ವರ್ಷ ರಾಜ್ಯದಲ್ಲಿ ಸುಮಾರು 70 ಆನೆಗಳು ವಿವಿಧ ಕಾರಣಕ್ಕೆ ಸಾವನ್ನಪ್ಪುತ್ತವೆ. 100 ಜನರು ಆನೆ ದಾಳಿಯಲ್ಲಿ ಪ್ರಾಣ ಕಳೆದುಕೊಳ್ಳುತ್ತಾರೆ ಎಂದು ಅಂದಾಜಿಸಲಾಗಿದೆ.
ಅರಣ್ಯ ಇಲಾಖೆ ಉಸ್ತುವಾರಿ
ಒಡಿಶಾ ಸರ್ಕಾರ 10 ಹೆಕ್ಟೇರ್ ಪ್ರದೇಶದಲ್ಲಿಆನೆಗಳ ಪುನರ್ವಸತಿ ಕೇಂದ್ರ ನಿರ್ಮಾಣ ಮಾಡಲಿದೆ. ಇದಕ್ಕೆ ಸುಮಾರು 6 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಕೇಂದ್ರದಲ್ಲಿ ಆಹಾರ, ನೀರು, ನಿರ್ವಹಣೆ ಮುಂತಾದ ವ್ಯವಸ್ಥೆಗಳ ಮೇಲ್ವಿಚಾರಣೆಯನ್ನು ಅರಣ್ಯ ಇಲಾಖೆಗೆ ನೀಡಲಾಗುತ್ತದೆ.
ಆನೆಗಳ ರಕ್ಷಣೆಯಲ್ಲಿ ಮಹತ್ವದ ಹೆಜ್ಜೆ
ಗಾಯಗೊಂಡ, ಗುಂಪಿನಿಂದ ಬೇರ್ಪಟ್ಟ ಆನೆಗಳಿಗೆ ಪುನರ್ವಸತಿ ಕೇಂದ್ರದಲ್ಲಿ ಆಶ್ರಯ ನೀಡಲಾಗುತ್ತದೆ. ಕಾಡಿನಲ್ಲಿ ರಕ್ಷಣೆ ಮಾಡಲಾದ ಆನೆ ಮರಿಗಳನ್ನು ಕೇಂದ್ರದಲ್ಲಿ ಸಾಕಲಾಗುತ್ತದೆ. ಆನೆಗಳ ರಕ್ಷಣೆಯಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ ಎಂದು ಸರ್ಕಾರ ಹೇಳಿದೆ.
12 ಜನರನ್ನು ಕೊಂದಿದ್ದ ಆನೆ
ಪುನರ್ವಸತಿ ಕೇಂದ್ರದಿಂದಾಗಿ ಆನೆ, ಮಾನವ ಸಂಘರ್ಷ ಕಡಿಮೆಯಾಗುವ ನಿರೀಕ್ಷೆ ಇದೆ. ಕಳೆದ ವರ್ಷ ಆನೆಯೊಂದು 12 ಜನರನ್ನು ಕೊಂದಿತ್ತು. ಅದನ್ನು ಸೆರೆ ಹಿಡಿದು ಚಿಕ್ಕ ಮೃಗಾಲಯದಲ್ಲಿ ಇಡಲಾಗಿತ್ತು. ಪುನರ್ವಸತಿ ಕೇಂದ್ರದಲ್ಲಿ ಇಂತಹ ಆನೆಗಳಿಗೆ ವಾಸ್ತವ್ಯದ ವ್ಯವಸ್ಥೆ ಮಾಡಲಾಗುತ್ತದೆ.
2 ಸಾವಿರ ಆನೆಗಳಿವೆ
ಕೇರಳದಲ್ಲಿ ಸ್ಫೋಟಕ ತುಂಬಿದ್ದ ಹಣ್ಣು ತಿಂದು ಆನೆ ಮೃತಪಟ್ಟ ಪ್ರಕರಣದ ಬಳಿಕ ಆನೆಗಳ ಸಂರಕ್ಷಣೆಗೆ ಯೋಜನೆ ರೂಪಿಸುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚಿಸಿತ್ತು. ಅಂಕಿ ಅಂಶಗಳ ಪ್ರಕಾರ ಒಡಿಶಾದಲ್ಲಿ 2 ಸಾವಿರಕ್ಕೂ ಅಧಿಕ ಆನೆಗಳಿವೆ.