ಒಡಿಶಾದಲ್ಲಿ ಮುಂದುವರೆದ ಪ್ರವಾಹ ಪರಿಸ್ಥಿತಿ: ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್
ಭುವನೇಶ್ವರ, ಆಗಸ್ಟ್ 19: ವಾಯುಭಾರ ಕುಸಿತ ಹೆಚ್ಚಳದಿಂದ ಒಡಿಶಾ ರಾಜ್ಯದ ಹಲವು ಭಾಗಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಅದರಲ್ಲೂ ಕರಾವಳಿ ಭಾಗದ ಜಿಲ್ಲೆಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಳೆಯಿಂದಾಗಿ ಮಹಾನದಿ ಜಲಾನಯನ ಪ್ರದೇಶದಲ್ಲಿನ ಪ್ರವಾಹ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದಾದ ಕಾರಣ, ಸಂತ್ರಸ್ತ ಪ್ರದೇಶಗಳಲ್ಲಿನ ಜನರಿಗೆ ನೆರವು ನೀಡುವಂತೆ ರಾಜ್ಯ ಸರ್ಕಾರವು ಜಿಲ್ಲಾಡಳಿತಗಳಿಗೆ ಸೂಚನೆ ನೀಡಿದೆ ಎಂದು ವಿಶೇಷ ಪರಿಹಾರ ಆಯುಕ್ತ ಪಿ.ಕೆ ಜೆನಾ ತಿಳಿಸಿದ್ದಾರೆ.
ಹದಿನೈದು ದಿನಗಳಲ್ಲಿ ಮೂರನೇ ಒಂದು ಭಾಗದಷ್ಟು ಭಾರಿ ಮಳೆಯು ಜಗತ್ಸಿಂಗ್ಪುರ ಮತ್ತು ರಾಯಗಡ ಜಿಲ್ಲೆಗಳಲ್ಲಿ ಮತ್ತು ಉತ್ತರ ವಲಯದ ಸುವರ್ಣರೇಖಾ ಜಲಾನಯನದ ಕೆಲವು ಪ್ರದೇಶಗಳಲ್ಲಿ ಪ್ರವಾಹವನ್ನು ಉಂಟುಮಾಡಿದೆ ಎಂದು ಕಂದಾಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Breaking ಒಡಿಶಾ; ವರುಣನ ಆರ್ಭಟಕ್ಕೆ ಸಂಪರ್ಕ ಕಡಿದುಕೊಂಡ 42 ಹಳ್ಳಿಗಳು
ಹವಾಮಾನ ಇಲಾಖೆಯ ಪ್ರಕಾರ ಜಗತ್ಸಿಂಗ್ಪುರ ಜಿಲ್ಲೆಯಲ್ಲಿ ಕಳೆದ ರಾತ್ರಿ 107 ಮಿಲಿ ಮೀಟರ್ ಮಳೆಯಾಗಿದೆ.
ಪೂರ್ವ-ಮಧ್ಯ ಬಂಗಾಳ ಕೊಲ್ಲಿಯ ಈಶಾನ್ಯ ಮತ್ತು ಪಕ್ಕದ ಪ್ರದೇಶಗಳಲ್ಲಿನ ಕಡಿಮೆ ಒತ್ತಡದ ಪ್ರದೇಶವು ವಾಯುವ್ಯಕ್ಕೆ ಚಲಿಸಿದ್ದು ಹೆಚ್ಚಿನ ವಾಯುಭಾರ ಕುಸಿತದ ಕೇಂದ್ರೀಕೃತವಾಗಿದೆ, ಇದು ಬಾಲಸೋರ್ನಿಂದ ಸುಮಾರು 310 ಕಿಲೋ ಮೀಟರ್ ಪೂರ್ವ-ಆಗ್ನೇಯಕ್ಕೆ ಕೇಂದ್ರೀಕೃತವಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಹಲವು ಜಿಲ್ಲೆಗಳಿಗೆ ರೆಡ್ ಅಲರ್ಟ್
ಶುಕ್ರವಾರ ವಾಯುಭಾರ ಕುಸಿತ ತೀವ್ರಗೊಳ್ಳುವ ಸಾಧ್ಯತೆ ಹೆಚ್ಚಿದ್ದು, ಸಂಜೆ ವೇಳೆಗೆ ಬಾಲಸೋರ್ ಮತ್ತು ಸಾಗರ್ ದ್ವೀಪಗಳ ನಡುವೆ ಪಶ್ಚಿಮ ಬಂಗಾಳ ಮತ್ತು ಒಡಿಶಾ ಕರಾವಳಿಯನ್ನು ದಾಟುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದು ಒಡಿಶಾ, ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್ನಾದ್ಯಂತ ಪಶ್ಚಿಮ-ವಾಯುವ್ಯ ದಿಕ್ಕಿನಲ್ಲಿ ಚಲಿಸುತ್ತದೆ ಮತ್ತು ಉತ್ತರ ಛತ್ತೀಸ್ಗಢದ ಕಡೆಗೆ ಚಲಿಸುತ್ತದೆ ಮತ್ತು ಕ್ರಮೇಣ ದುರ್ಬಲವಾಗುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಮುನ್ಸೂಚನೆಯ ದೃಷ್ಟಿಯಿಂದ, ಒಡಿಶಾ ಸರ್ಕಾರವು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಜಿಲ್ಲಾಡಳಿತಗಳಿಗೆ ಸೂಚನೆ ನೀಡಿದೆ. ಕಿಯೋಂಜಾರ್, ಬಾಲಸೋರ್, ಭದ್ರಕ್ ಮತ್ತು ಮಯೂರ್ಭಂಜ್ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಮುನ್ಸೂಚನೆ ಇದ್ದು ರೆಡ್ ಅಲರ್ಟ್ ಘೋಷಿಸಲಾಗಿದೆ.
12 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಿದ ಐಎಂಡಿ
ಮಳೆಯಿಂದಾಗಿ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಬಹುದು, ಪ್ರವಾಹಗಳು, ಭೂಕುಸಿತಗಳು ಅಥವಾ ದುರ್ಬಲ ಗುಡ್ಡಗಾಡು ಪ್ರದೇಶಗಳಲ್ಲಿ ಮಣ್ಣಿನ ಕುಸಿತಗಳಿಂದ ರಸ್ತೆಗಳು ಮತ್ತು ಮನೆಗಳಿಗೆ ಹಾನಿಯಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರಪಾದ, ಜಗತ್ಸಿಂಗ್ಪುರ, ಕಟಕ್, ಧೆಂಕನಲ್ ಮತ್ತು ಅಂಗುಲ್ ಸೇರಿದಂತೆ 12 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಜಾರ್ಸುಗುಡ, ಬರ್ಗಢ, ಕಲಹಂಡಿ, ಕಂಧಮಾಲ್, ಗಂಜಾಂ, ನಯಾಗಢ, ಖುರ್ಧಾ ಮತ್ತು ಪುರಿಗಳಿಗೆ ಹಳದಿ ಎಚ್ಚರಿಕೆ ನೀಡಲಾಗಿದೆ.
ಭರ್ತಿಯಾಗಿರುವ ಹಿರಾಕುಡ್ ಜಲಾಶಯ
ಶನಿವಾರದವರೆಗೆ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಹಿರಾಕುಡ್ ಜಲಾಶಯದಲ್ಲಿ ಬೆಳಿಗ್ಗೆ 8 ಗಂಟೆಗೆ ನೀರಿನ ಮಟ್ಟ 622.37 ಅಡಿ ಇತ್ತು, ಪೂರ್ಣ ಪ್ರಮಾಣದ ಎತ್ತರ 630 ಅಡಿ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಛತ್ತೀಸ್ಗಢದ ಮಹಾನದಿ ನದಿಯ ಮೇಲ್ಭಾಗದ ಜಲಾನಯನ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಂಭವವಿರುವುದರಿಂದ ಹಿರಾಕುಡ್ ಜಲಾಶಯದಲ್ಲಿ ನೀರಿನ ಮಟ್ಟ 622 ಅಡಿ ಒಳಗ ಇರುವಣತೆ ನೋಡಿಕೊಳ್ಳಲಾಗುತ್ತಿದೆ ಎಂದು ಜಲಸಂಪನ್ಮೂಲ ಇಲಾಖೆಯ ಮುಖ್ಯ ಎಂಜಿನಿಯರ್ ಬಿ.ಕೆ.ಮಿಶ್ರಾ ಹೇಳಿದ್ದಾರೆ. ಜಲಾಶಯಕ್ಕೆ 2.94 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದ್ದರೆ, 4.76 ಲಕ್ಷ ಕ್ಯೂಸೆಕ್ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ ಎಂದು ಮಿಶ್ರಾ ಹೇಳಿದರು.
13 ಜಿಲ್ಲೆಗಳಲ್ಲಿ 5 ಲಕ್ಷ ಜನರಿಗೆ ತೊಂದರೆ
ಕಟಕ್ ಬಳಿಯ ಮುಂಡಲಿ ಬ್ಯಾರೇಜ್ನಲ್ಲಿ 8 ಲಕ್ಷ ಕ್ಯೂಸೆಕ್ನೊಳಗೆ ನೀರಿನ ಮಟ್ಟವನ್ನು ಕಾಯ್ದುಕೊಳ್ಳಲು ಪ್ರಯತ್ನಗಳು ನಡೆಯುತ್ತಿವೆ, ಉತ್ತರ ಒಡಿಶಾದ ಸುವರ್ಣರೇಖಾ ಮತ್ತು ಬುಧಬಲಂಗ್ ನದಿಗಳಲ್ಲಿ ಪ್ರವಾಹವನ್ನು ನಿಯಂತ್ರಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು. ಹಿರಾಕುಡ್ ಅಣೆಕಟ್ಟಿನ ಇನ್ನೂ ನಾಲ್ಕು ಗೇಟ್ಗಳನ್ನು ಮುಚ್ಚಲಾಗಿದ್ದು, 24 ಗೇಟ್ಗಳು ತೆರೆದಿವೆ ಎಂದು ವಿಶೇಷ ಪರಿಹಾರ ಆಯುಕ್ತರು ತಿಳಿಸಿದ್ದಾರೆ.
ಪ್ರವಾಹದಿಂದಾಗಿ 13 ಜಿಲ್ಲೆಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಜನ ತೊಂದರೆಗೀಡಾಗಿದ್ದಾರೆ. ಗುರುವಾರದವರೆಗೆ 90,000 ಜನರನ್ನು 190 ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ.