Breaking ಒಡಿಶಾ; ವರುಣನ ಆರ್ಭಟಕ್ಕೆ ಸಂಪರ್ಕ ಕಡಿದುಕೊಂಡ 42 ಹಳ್ಳಿಗಳು
ಭುವನೇಶ್ವರ, ಆಗಸ್ಟ್ 19: ಒಡಿಶಾದಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಸುಮಾರು 42 ಹಳ್ಳಿಗಳಿಗೆ ಹೊರಗಿನ ಪ್ರಪಂಚದಿಂದ ಸಂಪರ್ಕ ಕಡಿತಗೊಂಡಿರುವುದರಿಂದ ಜನರು ಸಮಸ್ಯೆಗಳಿಗೆ ಸಿಲುಕಿದ್ದಾರೆ.
ಮಹಾನದಿ ಮತ್ತು ಪೈಕಾ ನದಿಗಳ ಪ್ರವಾಹವು ಕಡಿಮೆಯಾಗಲು ಪ್ರಾರಂಭಿಸಿದೆ. ಆದರೆ, ಕುಜಾಂಗ್ ಮತ್ತು ತಿರ್ಟೋಲ್ ಬ್ಲಾಕ್ಗಳಲ್ಲಿನ ಸುಮಾರು 42 ಹಳ್ಳಿಗಳು ಹೊರಗಿನ ಪ್ರಪಂಚದಿಂದ ಸಂಪರ್ಕ ಕಡಿತಗೊಂಡಿವೆ. ಹೀಗಾಗಿ ಜನರು ಪ್ರವಾಹದ ಪರಿಣಾಮಗಳನ್ನು ನಿಭಾಯಿಸಲು ಇನ್ನೂ ಹೆಣಗಾಡುತ್ತಿದ್ದಾರೆ.
ಕುಜಂಗ್ನ 11 ಪಂಚಾಯತ್ಗಳ 34 ಗ್ರಾಮಗಳ 14,967 ನಿವಾಸಿಗಳು ಮತ್ತು ತಿರ್ತೋಲ್ನ ಎಂಟು ಗ್ರಾಮಗಳ 2,000 ನಿವಾಸಿಗಳು ದಿಕ್ಕು ತೋಚದಂತ ಸ್ಥಿತಿಯಲ್ಲಿದ್ದಾರೆ. ಕುಜಂಗ್ನ ಜಯಸಂಖ್ಪುರ ಗ್ರಾಮದ 200 ಕುಟುಂಬಗಳಿಗೆ ಇನ್ನೂ ಪರಿಹಾರ ಸಾಮಗ್ರಿಗಳು ಬಂದಿಲ್ಲ. ಹೊರ ಪ್ರಪಂಚದಿಮದ ಸಂಪರ್ಕ ಕಡಿತಗೊಂಡ ಗ್ರಾಮಕ್ಕೆ ಯಾವುದೇ ಅಧಿಕಾರಿ ಭೇಟಿ ನೀಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಅನೇಕ ಸಂತ್ರಸ್ತ ಗ್ರಾಮಸ್ಥರು ರಸ್ತೆಗಳಲ್ಲಿ ಆಶ್ರಯ ಪಡೆದಿದ್ದಾರೆ. ಒಡ್ಡುಗಳ ಮೇಲೆ ತಾತ್ಕಾಲಿಕ ಶೆಡ್ಗಳನ್ನು ನಿರ್ಮಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಶುಕ್ರವಾರ ಭಾರಿ ಮಳೆಯಾಗುವ ವರದಿ ನೀಡಿರುವ ಹವಾಮಾನ ಇಲಾಖೆ 17 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಿದೆ. ಗುರುವಾರದಂದು ಹವಾಮಾನ ಇಲಾಖೆ ಕಚೇರಿಯು ರಾಜ್ಯದ 20 ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತದೆ ಎಂದು ಆರೆಂಜ್ ಅಲರ್ಟ್ ನೀಡಿತ್ತು.
ಶುಕ್ರವಾರ ಕಟಕ್, ಕೇಂದ್ರಪಾರ ಮತ್ತು ಸಂಬಲ್ಪುರ ಸೇರಿದಂತೆ 17 ಜಿಲ್ಲೆಗಳಲ್ಲಿ 116 ರಿಂದ 204 ಮಿಮೀ ಭಾರಿ ಮಳೆಯಾಗುವ ಸೂಚನೆ ನೀಡಿದೆ. ಉಳಿದ 13 ಜಿಲ್ಲೆಗಳಲ್ಲಿ ಇಂದು ಅಧಿಕ ಮಳೆಯಾಗುವ ನಿರೀಕ್ಷೆಯಿದೆ.
ಜೊತೆಗೆ ನಾಳೆ ಶನಿವಾರದಂದು ಕಲಹಂಡಿ ಮತ್ತು ಪಶ್ಚಿಮ ಒಡಿಶಾದ ಏಳು ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಮುನ್ಸೂಚನೆಯನ್ನು ನೀಡಿದೆ.
ಈ ಪ್ರದೇಶದಲ್ಲಿ ಗಂಟೆಗೆ 45-55 ಕಿಮೀ ವೇಗದಲ್ಲಿ ಗಾಳಿ ಬೀಸುವ ನಿರೀಕ್ಷೆಯಿರುವುದರಿಂದ ಶುಕ್ರವಾರ ಮತ್ತು ಶನಿವಾರ ಕರಾವಳಿಯಲ್ಲಿ ಸಮುದ್ರಕ್ಕೆ ಇಳಿಯದಂತೆ ರಾಜ್ಯ ಸರ್ಕಾರ ಮೀನುಗಾರರಿಗೆ ಎಚ್ಚರಿಕೆ ನೀಡಿದೆ.
ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಗುರುವಾರ ರಾಜ್ಯದ 12 ಪ್ರವಾಹ ಪೀಡಿತ ಜಿಲ್ಲೆಗಳ ಪೈಕಿ ಐದು ಜಿಲ್ಲೆಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು. ಮುಂದಿನ 15 ದಿನಗಳ ಕಾಲ ಸಂತ್ರಸ್ತರಿಗೆ ಸಹಾಯವನ್ನು ನೀಡುವುದಾಗಿ ಘೋಷಿಸಿದರು.
ಅತಿ ಹೆಚ್ಚು ಹಾನಿಗೊಳಗಾಗಿರುವ ಖುದ್ರಾ, ಪುರಿ, ಕಟಕ್, ಕೇಂದ್ರಪಾರ ಮತ್ತು ಜಗತ್ಸಿಂಗ್ಪುರ ಜಿಲ್ಲೆಗಳ ಪ್ರವಾಹ ಪೀಡಿತ ಗ್ರಾಮಗಳ ಜನರಿಗೆ 15 ದಿನಗಳ ಕಾಲ ಪರಿಹಾರ ಘೋಷಿಸಿದ್ದಾರೆ.