ಪ್ರತಿ ಕುಟುಂಬಕ್ಕೂ ಉಚಿತ ಸ್ಮಾರ್ಟ್ ಫೋನ್ ಘೋಷಿಸಿದ ಸರ್ಕಾರ!
ಭುವನೇಶ್ವರ್, ನವೆಂಬರ್.17: ಒಡಿಶಾದ ನಕ್ಸಲ್ ಪೀಡಿತ ಪ್ರದೇಶದಲ್ಲಿ ವಾಸವಿರುವ ಎಲ್ಲ ಕುಟುಂಬಗಳಿಗೂ ಉಚಿತವಾಗಿ ಸ್ಮಾರ್ಟ್ ಫೋನ್ ನೀಡುವುದಾಗಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸರ್ಕಾರವು ಮಂಗಳವಾರ ಘೋಷಿಸಿದೆ.
ಮಾಲ್ಕನ್ ಗಿರಿ ಜಿಲ್ಲೆಯ ನಕ್ಸಲ್ ಪೀಡಿತ ಸ್ವಾಭಿಮಾನ್ ಅಂಚಲ್ ಪ್ರದೇಶದ ನಿವಾಸಿಗಳ ಜೊತೆಗೆ ಸಿಎಂ ನವೀನ್ ಪಟ್ನಾಯಕ್ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದರು. ಈ ವೇಳೆ ಎಲ್ಲ ಕುಟುಂಬ ಸದಸ್ಯರಿಗೆ ಸರ್ಕಾರದ ವತಿಯಿಂದ ಉಚಿತವಾಗಿ ಸ್ಮಾರ್ಟ್ ಫೋನ್ ನೀಡುವುದಾಗಿ ಘೋಷಿಸಿದರು.
ಅಂತರ್-ಜಾತಿ ವಿವಾಹದ ಪ್ರೋತ್ಸಾಹಧನ ಅರ್ಜಿ ಸಲ್ಲಿಕೆಗೆ ಹೊಸ ವೆಬ್ ಸೈಟ್
ಸ್ವಾಭಿಮಾನ್ ಅಂಚಲ್ ಪ್ರದೇಶವು ನನಗೆ ಯಾವಾಗಲೂ ಅತ್ಯಂತ ಪ್ರಿಯವಾಗಿದೆ. ಈ ಪ್ರದೇಶದ ಜನರ ಅಭಿವೃದ್ಧಿಗಾಗಿ ನಾನು ಸದಾ ಶ್ರಮಿಸುತ್ತೇನೆ. ಸರ್ಕಾರದ ವತಿಯಿಂದ ಸ್ಮಾರ್ಟ್ ಫೋನ್ ನೀಡಲಾಗುತ್ತಿದ್ದು, ಈ ಪ್ರದೇಶದ ಜನರು ದೇಶದ ಬೇರೆ ಭಾಗಗಳಲ್ಲಿರುವ ಜನರೊಂದಿಗೆ ಸಂಪರ್ಕ ಸಾಧಿಸುವುದಕ್ಕೆ ಸಹಕಾರಿ ಆಗಲಿದೆ. ಜೊತೆಗೆ ಇಲ್ಲಿನ ವಿದ್ಯಾರ್ಥಿಗಳಿಗೆ ಆನ್ ಲೈನ್ ಮೂಲಕ ಶಿಕ್ಷಣ ಪಡೆಯಲು ಉಪಯೋಗವಾಗಲಿದೆ ಎಂದರು.
ಈ ಪ್ರದೇಶದಲ್ಲಿ 4ಜಿ ನೆಟ್ ವರ್ಕ್ ಸೇವೆ:
ಒಡಿಶಾದ ನಕ್ಸಲ್ ಪೀಡಿತ ಪ್ರದೇಶವಾಗಿರುವ ಸ್ವಾಭಿಮಾನ್ ಅಂಚಲ್ ನಲ್ಲಿ ಸದ್ಯದ ಮಟ್ಟಿಗೆ ನಾಲ್ಕು ಮೊಬೈಲ್ ನೆಟ್ ವರ್ಕ್ ಗಳಿವೆ. ಮುಂದಿನ ಕೆಲವೇ ದಿನಗಳಲ್ಲಿ 4ಜಿ ಸೌಲಭ್ಯವನ್ನು ಈ ಪ್ರದೇಶದ ಜನರಿಗೂ ಒದಗಿಸಲಾಗುವುದು ಎಂದು ನವೀನ್ ಪಟ್ನಾಯಕ್ ಭರವಸೆ ನೀಡಿದ್ದಾರೆ.
ಕಳೆದ 2018ರಲ್ಲಿ ಸ್ವಾಭಿಮಾನ್ ಅಂಚಲ್ ಪ್ರದೇಶಕ್ಕೆ ಭೇಟಿ ನೀಡಿದ್ದ ಸಿಎಂ ನವೀನ್ ಪಟ್ನಾಯಕ್, 100 ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್ ಘೋಷಿಸಿದ್ದರು. ಶಿಕ್ಷಣ, ವೈದ್ಯಕೀಯ ಸೌಲಭ್ಯ, ಕುಡಿಯುವ ನೀರು, ನೀರಾವರಿ, ಸಂಪರ್ಕ, ವಸತಿ, ಬ್ಯಾಂಕಿಂಗ್ ಸೇವೆ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸುವುದಕ್ಕಾಗಿ ಘೋಷಿಸಿದ ಪ್ಯಾಕೇಜ್ ಮೊತ್ತವನ್ನು ತದನಂತರದಲ್ಲಿ 215 ಕೋಟಿ ರೂಪಾಯಿಗೆ ಹೆಚ್ಚಿಸಲಾಗಿತ್ತು.