ಆಟಿಕೆ ಗನ್ ಬಳಸಿ ಎರಡು ಬ್ಯಾಂಕ್ ದರೋಡೆ ಮಾಡಿದ ಉದ್ಯಮಿ!
ಭುವನೇಶ್ವರ್, ಅಕ್ಟೋಬರ್ 6: ಯೂಟ್ಯೂಬ್ ವಿಡಿಯೋಗಳನ್ನು ನೋಡಿ ಪ್ರಭಾವಿತನಾದ ಸಿದ್ಧ ಉಡುಪು ಮಾರಾಟಗಾರನೊಬ್ಬ ಆಟಿಕೆ ಗನ್ ತೋರಿಸಿ ಎರಡು ಬ್ಯಾಂಕ್ಗಳನ್ನು ದರೋಡೆ ಮಾಡಿರುವ ಘಟನೆ ಒಡಿಶಾದಲ್ಲಿ ನಡೆದಿದೆ.
25 ವರ್ಷದ ವ್ಯಾಪಾರಿ ಲಾಕ್ ಡೌನ್ ಸಂದರ್ಭದಲ್ಲಿ ವ್ಯಾಪಾರ ವಹಿವಾಟು ಇಲ್ಲದೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ. ಈ ನಷ್ಟವನ್ನು ಭರಿಸಿಕೊಳ್ಳಲು ಪ್ಲ್ಯಾನ್ ಮಾಡಿದ ಆತ, ಭುವನೇಶ್ವರದಲ್ಲಿ ಎರಡು ಬ್ಯಾಂಕ್ಗಳಿಂದ 12 ಲಕ್ಷ ರೂ ದರೋಡೆ ಮಾಡಿದ್ದಾನೆ. ಅದೂ ಕೇವಲ ಆಟಿಕೆ ಗನ್ಗಳನ್ನು ಬಳಸಿ.
ಮೈಸೂರು; ಎಟಿಎಂ ಯಂತ್ರ ಕೊರೆದು 12 ಲಕ್ಷ ದರೋಡೆ
ತಂಗಿಬಂಟಾ ಗ್ರಾಮದ ನಿವಾಸಿ ಸೌಮ್ಯರಂಜನ್ ಜೇನಾ ಅಲಿಯಾಸ್ ಟುಲು ಎಂಬಾತ ನಗರದ ಹೊರವಲಯದಲ್ಲಿರುವ ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಇಂಡಿಯಾಗಳಲ್ಲಿ ಕಳೆದ ತಿಂಗಳು ದರೋಡೆ ನಡೆಸಿದ್ದ ಎಂದು ಭುವನೇಶ್ವರ-ಕಟಕ್ ಪೊಲೀಸ್ ಕಮಿಷನರ್ ಸುಧಾಂಶು ಸಾರಂಗಿ ತಿಳಿಸಿದ್ದಾರೆ. ಮುಂದೆ ಓದಿ.
ಯೂಟ್ಯೂಬ್ ನೋಡಿ ಕಲಿತಿದ್ದ
ಸೆಪ್ಟೆಂಬರ್ 7ರಂದು ಇನ್ಫೋಸಿಟಿ ಪ್ರದೇಶದ ಸಮೀಪದಲ್ಲಿನ ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಮತ್ತು ಸೆ. 28ರಂದು ಮಂಚೇಶ್ವರ್ ಪ್ರದೇಶದಲ್ಲಿನ ಬ್ಯಾಂಕ್ ಆಫ್ ಇಂಡಿಯಾದ ಬರಿಮುಂಡಾ ಶಾಖೆಯಿಂದ ಸುಮಾರು 12 ಲಕ್ಷ ರೂ.ಗಳನ್ನು ಆತ ದರೋಡೆ ಮಾಡಿದ್ದ. ಯೂಟ್ಯೂಬ್ ವಿಡಿಯೋಗಳನ್ನು ನೋಡಿದ್ದ ಆತನಿಗೆ ಆಟಿಕೆ ಬಂದೂಕುಗಳನ್ನು ಬಳಸಿ ಬ್ಯಾಂಕ್ ದರೋಡೆ ಮಾಡುವ ಉಪಾಯ ಹೊಳೆದಿತ್ತು. ಆತನಿಂದ 10 ಲಕ್ಷ ರೂ.ಗೂ ಅಧಿಕ ನಗದು ಹಣ, ಒಂದು ವಾಹನ ಹಾಗೂ ದರೋಡೆಗೆ ಬಳಸಿದ್ದ ಆಟಿಕೆ ಪಿಸ್ತೂಲನ್ನು ವಶಪಡಿಸಿಕೊಳ್ಳಲಾಗಿದೆ.
ಸ್ಕೂಟಿ ನೀಡಿದ ಸುಳಿವು
ಬ್ಯಾಂಕ್ನಲ್ಲಿ ಕೆಲವೇ ಸಿಬ್ಬಂದಿ ಇದ್ದ ಸಮಯದಲ್ಲಿ ಹೆಲ್ಮೆಟ್ ಧರಿಸಿ ಒಳ ಪ್ರವೇಶಿಸಿದ್ದ ಜೇನಾ, ನಗದು ಹಣ ನೀಡುವಂತೆ ಬೆದರಿಸಿದ್ದ. ಬ್ಯಾಂಕ್ ಲೂಟಿ ಮಾಡಲು ಆತ ಸ್ಕೂಟಿಯಲ್ಲಿ ಬಂದಿದ್ದ. ಆಟಿಕೆ ಪಿಸ್ತೂಲು ಬಳಸಿ ಮೊದಲ ಬ್ಯಾಂಕ್ ದರೋಡೆ ಮಾಡಿದ ಬಳಿಕ ನಿಜವಾದ ಪಿಸ್ತೂಲು ಮತ್ತು ಗುಂಡುಗಳನ್ನು ಖರೀದಿಸಿದ್ದ. ಆತ ಬಳಸಿದ್ದ ಸ್ಕೂಟಿ ಹಾಗೂ ಬ್ಯಾಂಕ್ನಲ್ಲಿನ ಇತರೆ ಪುರಾವೆಗಳು ಆತನನ್ನು ಪತ್ತೆ ಹಚ್ಚಲು ನೆರವಾಗಿದ್ದವು. ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊರೊನಾ ಕಾಲ ಸಂಕಷ್ಟ, ತನ್ನ ಮನೆಯನ್ನೇ ದೋಚಿದ ನಟಿ
ದರೋಡೆ ಹಣದಲ್ಲಿ ಸಾಲದ ಕಂತು
ಆರೋಪಿ ಎರಡೂ ಬ್ಯಾಂಕ್ಗಳಲ್ಲಿ ಖಾತೆಗಳನ್ನು ಹೊಂದಿದ್ದ. ಸುಮಾರು 19 ಲಕ್ಷ ರೂ.ದಷ್ಟು ಸಾಲ ಕೂಡ ಪಡೆದಿದ್ದ. ಸಾಲಗಳನ್ನು ಪಡೆದು ಆತನ ವ್ಯಾಪಾರ ಆರಂಭಿಸಿದ್ದ. ಆರಂಭದಲ್ಲಿ ಆತ 9-10 ಲಕ್ಷ ರೂ.ದಷ್ಟು ವಹಿವಾಟು ನಡೆಸಿದ್ದ. ಆದರೆ ಲಾಕ್ ಡೌನ್ ಸಂದರ್ಭದಲ್ಲಿ ತೀವ್ರ ಹೊಡೆತ ಬಿದ್ದಿತ್ತು. ಲೂಟಿ ಮಾಡಿದ ಬಳಿಕ ತನ್ನ ಸಾಲದ ಬಾಕಿಯಲ್ಲಿ ಸ್ವಲ್ಪ ಮೊತ್ತವನ್ನು ಪಾವತಿಸಲು ಬ್ಯಾಂಕ್ಗೆ ಬಂದಿದ್ದ.
ಎಟಿಎಂ ಒಡೆದಿದ್ದ ಬಾಲಕ
ಲಾಕ್ಡೌನ್ ಸಂದರ್ಭದಲ್ಲಿ ಒಡಿಶಾದಲ್ಲಿ ಅನೇಕ ಬ್ಯಾಂಕ್ ದರೋಡೆ ಹಾಗೂ ಎಟಿಎಂಗಳ ದರೋಡೆಗಳು ನಡೆದಿದ್ದವು. 9ನೇ ತರಗತಿ ಓದುತ್ತಿದ್ದ 14 ವರ್ಷದ ಬಾಲಕ ಯೂಟ್ಯೂಬ್ ನೋಡಿ ಎಟಿಎಂ ಒಡೆಯಲು ಪ್ರಯತ್ನಿಸಿ ಬಂಧನಕ್ಕೆ ಒಳಗಾಗಿದ್ದ ಘಟನೆ ಭುವನೇಶ್ವರದಲ್ಲಿ ನಡೆದಿತ್ತು.