ಒಡಿಶಾದಲ್ಲಿ ವಾಹನ ಪಲ್ಟಿಯಾಗಿ 11 ಮಂದಿ ಪ್ರಯಾಣಿಕರ ದುರ್ಮರಣ
ಭುವನೇಶ್ವರ್, ಫೆಬ್ರವರಿ.01: ಒಡಿಶಾದಲ್ಲಿ ಪ್ರಯಾಣಿಕರು ತುಂಬಿದ ವಾಹನವೊಂದು ಪಲ್ಟಿಯಾಗಿ ಭಾರಿ ದುರಂತ ಸಂಭವಿಸಿದೆ. ಭಾನುವಾರ ರಾತ್ರಿ ನಡೆದ ವಾಹನ ಅಪಘಾತದಲ್ಲಿ 11 ಮಂದಿ ದುರ್ಮರಣ ಹೊಂದಿದ್ದು, ಹಲವು ಗಾಯಗೊಂಡಿರುವ ಘಟನೆ ಕೋರಾಪುತ್ ಜಿಲ್ಲೆಯ ಮರ್ತಹಂಡಿ ಬಳಿ ನಡೆದಿದೆ.
ಒಡಿಶಾದ ಮರ್ತಹಂಡಿ ಪಂಚಾಯತ್ ವ್ಯಾಪ್ತಿಯಲ್ಲಿ ಸಂಬಂಧಿಕರ ಅಂತ್ಯಕ್ರಿಯೆಗಾಗಿ ಛತ್ತೀಸ್ ಗಢದ ಸಿಂಧಿಗುಡ ಗ್ರಾಮದಿಂದ 35ಕ್ಕೂ ಹೆಚ್ಚು ಮಂದಿ ವಾಹನವೊಂದನ್ನು ಮಾಡಿಕೊಂಡು ಹೋಗಿದ್ದರು. ಅಂತ್ಯಕ್ರಿಯೆ ಮುಗಿಸಿಕೊಂಡು ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ.
ಧಾರವಾಡ ಅಪಘಾತ; ಮೃತರ ಕುಟುಂಬದವರಿಂದ ಪ್ರತಿಭಟನೆ
ಇನ್ನು, ಅಪಘಾತದಲ್ಲಿ ಮೃತಪಟ್ಟವರೆಲ್ಲ ಛತ್ತೀಸ್ ಗಢ ಮೂಲದವರು ಎಂದು ತಿಳಿದು ಬಂದಿದೆ. 35 ಮಂದಿ ಪ್ರಯಾಣಿಕರಿದ್ದ ವಾಹನದಲ್ಲಿ 11 ಮಂದಿ ದುರಂತದಲ್ಲಿ ಪ್ರಾಣ ಬಿಟ್ಟಿದ್ದರೆ, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ:
ಒಡಿಶಾದಲ್ಲಿ ಸಂಭವಿಸಿದ ಅಪಘಾತದಲ್ಲಿ ಸ್ಥಳದಲ್ಲೇ 11 ಮಂದಿ ಪ್ರಯಾಣಿಕರು ಮೃತಪಟ್ಟಿದ್ದು, ಗಾಯಗೊಂಡವರ ಪೈಕಿ ಹಲವರ ಸ್ಥಿತಿ ಗಂಭೀರವಾಗಿದೆ. ಈ ಹಿನ್ನೆಲೆ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ. ಇನ್ನು, ಅಪಘಾತಕ್ಕೆ ಕಾರಣ ಏನು ಎಂಬುದರ ಬಗ್ಗೆ ನಿಖರ ಮಾಹಿತಿ ಸಿಕ್ಕಿಲ್ಲ ಎಂದು ಹೇಳಲಾಗುತ್ತಿದೆ.