ಏಪ್ರಿಲ್ 30ರವಗೆ ಲಾಕ್ಡೌನ್ ಮುಂದುವರೆಸಿದ ಭಾರತದ ಮೊದಲ ರಾಜ್ಯ
ಭುವನೇಶ್ವರ, ಏಪ್ರಿಲ್ 09: ಭಾರತದಲ್ಲಿ ಲಾಕ್ಡೌನ್ ಮುಂದುವರೆಯುತ್ತದೆಯೇ..? ಎನ್ನುವ ಪ್ರಶ್ನೆ ಅನೇಕರಿಗೆ ಇದೆ. ಇದೀಗ ಒಡಿಶಾ ಲಾಕ್ಡೌನ್ ಅನ್ನು ಏಪ್ರಿಲ್ 30ರವಗೆ ಮುಂದುಡಿಕೆ ಮಾಡಿದ ಮೊದಲ ರಾಜ್ಯವಾಗಿದೆ.
ಕೊರೊನಾ ವೈರಸ್ ಪ್ರಕರಣಗಳನ್ನು ಗಮನಿಸಿದ ಅಲ್ಲಿನ ಸರ್ಕಾರ ಈ ತಿಂಗಳ ಕೊನೆಯವರೆಗೆ ಲಾಕ್ಡೌನ್ ಮಾಡುವ ನಿರ್ಧಾರ ಮಾಡಿದೆ. ಏಪ್ರಿಲ್ 14ರ ನಂತರ ಇನ್ನು 15 ದಿನವನ್ನು ಲಾಕ್ಡೌನ್ ಆಗಿ ಘೋಷಣೆ ಮಾಡಿದೆ. ಈ ತಿಂಗಳ ಕೊನೆಯವರೆಗೆ ಜನರ ಅನಗತ್ಯ ಓಡಾಟಕ್ಕೆ ಬ್ರೇಕ್ ಹಾಕಿದೆ.
ಕೊರೊನಾ ರೋಗಿಗಳಿಗಾಗಿ ಒಡಿಶಾದಲ್ಲಿ ಅತಿ ದೊಡ್ಡ ಆಸ್ಪತ್ರೆ ಸಜ್ಜು
ಅಲ್ಲಿನ ಶಾಲಾ ಕಾಲೇಜುಗಳಿಗೆ ಜೂನ್ 17ರವರೆಗೆ ರಜೆ ಘೋಷಣೆ ಮಾಡಲಾಗಿದೆ. ಅಲ್ಲದೆ ರೈಲು ಹಾಗೂ ವಿಮಾನ ಸಂಚಾರವನ್ನು ಆರಂಭ ಮಾಡಬಾರದು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. ಈ ವಿಷಯವನ್ನು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ತಿಳಿಸಿದ್ದಾರೆ.
ವಿಡಿಯೋ ಸಂದೇಶದಲ್ಲಿ ಮಾತನಾಡಿರುವ ಅವರು ''ರಾಜ್ಯದ ಆರ್ಥಿಕತೆಗಿಂತ ಜನರ ಆರೋಗ್ಯ ಮುಖ್ಯ. ಸದ್ಯದ ಪರಿಸ್ಥಿತಿಯನ್ನು ಎದುರಿಸಲು ಲಾಕ್ಡೌನ್ ಮುಂದುವರೆಸುವ ನಿರ್ಧಾರ ತೆಗೆದುಕೊಂಡಿದ್ದೇವೆ. ಜನರ ಶಿಸ್ತು ಕೊರೊನಾ ವಿರುದ್ಧ ಹೋರಾಡಲು ಶಕ್ತಿ ನೀಡಿದಂತಾಗಿದೆ'' ಎಂದಿದ್ದಾರೆ.
ಒಡಿಶಾದಲ್ಲಿ 42 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢವಾಗಿವೆ. ಒಬ್ಬ ವ್ಯಕ್ತಿ ಕೊರೊನಾದಿಂದ ಮರಣ ಹೊಂದಿದ್ದಾರೆ