ಚಂದ್ರಯಾನದ ಬಳಿಕ ಇಸ್ರೋದ ಮುಂದಿನ ಯೋಜನೆ ಗಗನಯಾನ
ಭುವನೇಶ್ವರ, ಸೆಪ್ಟೆಂಬರ್ 21: ಸೆ. 7ರ ಮಧ್ಯರಾತ್ರಿ ಚಂದ್ರನ ಅಂಗಳದ ಮೇಲೆ ಇಳಿಯುವ ಕೊನೆಯ ಹಂತದಲ್ಲಿ ಸಂಪರ್ಕ ಕಡಿದುಕೊಂಡಿದ್ದ ವಿಕ್ರಂ ಲ್ಯಾಂಡರ್, ಮತ್ತೆ ಸಂವಹನಕ್ಕೆ ಸಿಗುತ್ತದೆ ಎಂಬ ನಿರೀಕ್ಷೆ ಹುಸಿಯಾಗಿದೆ. ಚಂದ್ರನ ಮೇಲೆ ಕಗ್ಗತ್ತಲು ಕವಿದು ಚಳಿ ಆವರಿಸುವ ದಿನ ಬಂದಿದೆ. ಇಷ್ಟು ದಿನವಾದರೂ ಇಸ್ರೋದ ಪ್ರಯತ್ನಕ್ಕೆ ಓಗೊಡದ ವಿಕ್ರಮ ಮತ್ತೆ ಸಿಗುವ ಕನಸು ಬಹುತೇಕ ಭಗ್ನವಾಗಿದೆ.
ಶನಿವಾರ ಕಳೆಯುತ್ತಿದ್ದಂತೆಯೇ ಚಂದ್ರನಲ್ಲಿ ವಿಪರೀತ ಶೀತ ಉಂಟಾಗಲಿದೆ. -200 ಡಿಗ್ರಿವರೆಗೂ ಇಲ್ಲಿ ಥಂಡಿ ಇರಲಿದೆ. ಈ ಸ್ಥಿತಿಯಲ್ಲಿ ವಿಕ್ರಮ ಬದುಕುವುದಿಲ್ಲ. ಏಕೆಂದರೆ ಅದು ಜೀವ ಉಳಿಸಿಕೊಳ್ಳಲು ಬೇಕಿರುವುದು ಸೂರ್ಯನ ಕಿರಣ. ಲ್ಯಾಂಡರ್ನ ಸೋಲಾರ್ ಪ್ಯಾನೆಲ್ಗಳು ಶಾಖದಿಂದ ಶಕ್ತಿ ಉತ್ಪಾದಿಸಿದಾಗ ಮಾತ್ರ ವಿಕ್ರಂ ಕಾರ್ಯಾಚರಣೆ ಮಾಡಲು ಸಾಧ್ಯವಿತ್ತು. ಇನ್ನು 14 ದಿನ ಅಲ್ಲಿ ಸೂರ್ಯನ ನಂಟು ಇರದ ಕಾರಣ ವಿಕ್ರಂ ಲ್ಯಾಂಡರ್ ಸಂಪೂರ್ಣ ಸ್ತಬ್ಧವಾಗಲಿದೆ. 14 ದಿನಗಳ ಬಳಿಕ ಸೂರ್ಯನ ಕಿರಣಗಳು ಲ್ಯಾಂಡರ್ ಮೇಲೆ ಬಿದ್ದರೂ ಅದು ಮತ್ತೆ ಜೀವ ಪಡೆದುಕೊಳ್ಳುವುದಿಲ್ಲ. ಹಾಗೇನಾದರೂ ಆದರೆ ಅದು ಪವಾಡವೇ ಸರಿ.
'ವಿಕ್ರಂ'ಗೆ ಇಂದು ಕೊನೇ ದಿನ: ಸಂಪರ್ಕದ ಬಗ್ಗೆ ಇಸ್ರೋ ಹೇಳಿದ್ದೇನು?
ವಿಕ್ರಂ ಲ್ಯಾಂಡರ್ ಜತೆಗೆ ಸಂಪರ್ಕ ಸಾಧಿಸುವ ಪ್ರಯತ್ನವನ್ನು ಇಸ್ರೋ ಕೈಬಿಡಲಿದೆ. ಜತೆಗೆ ತನ್ನ ಮುಂದಿನ ಯೋಜನೆಗಳತ್ತ ಗಮನ ಹರಿಸಲಿದೆ.
ಕಮರಿದ ಲ್ಯಾಂಡರ್ ಸಂಪರ್ಕ ಆಸೆ
ಲ್ಯಾಂಡರ್ ಸಂಪರ್ಕ ಪಡೆಯುವ ಆಸೆಯನ್ನು ಇಸ್ರೋ ಕೈಬಿಟ್ಟಿದೆ. ಲ್ಯಾಂಡರ್ ಮತ್ತು ರೋವರ್ ಕೈಕೊಟ್ಟರೂ ಚಂದ್ರಯಾನ-2 ಯೋಜನೆಯಲ್ಲಿ ರವಾನೆಯಾದ ಆರ್ಬಿಟರ್ ಚಂದ್ರನ ಹೊರಭಾಗದಲ್ಲಿ ಸುತ್ತಾಡುತ್ತಾ ತನ್ನೆಲ್ಲ ಚಟುವಟಿಕೆಗಳನ್ನು ಸುಗಮವಾಗಿ ನಿರ್ವಹಿಸುತ್ತಿರುವುದು ಸಂತಸದ ಸಂಗತಿ. ಈ ಖುಷಿಯನ್ನು ಹಂಚಿಕೊಂಡಿರುವ ಇಸ್ರೋ ಅಧ್ಯಕ್ಷ ಕೆ. ಶಿವನ್ ಅವರು, ಚಂದ್ರಯಾನ-2ದ ಕುರಿತ ಒಂದು ಹಂತದ ಪ್ರಯತ್ನಗಳು ಮುಗಿದಿವೆ. ಇನ್ನು ಆರ್ಬಿಟರ್ ಜತೆಗಿನ ಸಂಪರ್ಕವನ್ನು ಇಸ್ರೋ ಕೇಂದ್ರ ಮುಂದುವರಿಸಿ ಮಾಹಿತಿಗಳನ್ನು ಕಲೆಹಾಕಲಿದೆ. ಅದರ ಜತೆ ತನ್ನ ಮುಂದಿನ ಯೋಜನೆಯತ್ತ ಇಸ್ರೋ ಗಮನ ಹರಿಸಲಿದೆ ಎಂದು ತಿಳಿಸಿದ್ದಾರೆ.
ಆರ್ಬಿಟರ್ ಸುಗಮ ಕಾರ್ಯಾಚರಣೆ: ಶಿವನ್
ಚಂದ್ರಯಾನ-2ರ ಲ್ಯಾಂಡರ್ ಸಂಪರ್ಕಕ್ಕೆ ಸಿಗದೆ ಹೋದರೂ ಆರ್ಬಿಟರ್ ಚೆನ್ನಾಗಿ ಕಾರ್ಯನಿರ್ವಹಿಸುತ್ತಿದೆ. ಆರ್ಬಿಟರ್ನಲ್ಲಿ ಎಂಟು ಸಾಧನಗಳಿದ್ದು, ಪ್ರತಿಯೊಂದು ಸಾಧನವೂ ತನ್ನದೇ ಆದ ಹೊಣೆಗಾರಿಕೆಗಳನ್ನು ಯಶಸ್ವಿಯಾಗಿ ನಿಭಾಯಿಸುತ್ತಿವೆ. ಚಂದ್ರಯಾನ 2 ಯೋಜನೆಯನ್ನು ಶೇ 98ರಷ್ಟು ಯಶಸ್ವಿ ಎಂದು ಪರಿಗಣಿಸಬಹುದು ಎಂದು ಕೆ. ಶಿವನ್ ಮಾಹಿತಿ ನೀಡಿದ್ದಾರೆ.
ಚಂದ್ರಯಾನ-2ದ ಆರ್ಬಿಟರ್ ಯಶಸ್ವಿ ಕಾರ್ಯಾಚರಣೆ: ಇಸ್ರೋ
ಆರ್ಬಿಟರ್ನಲ್ಲಿ ಇರುವ ಪೇಲೋಡ್ ಗಳು
ಟೆರೇನ್ ಮ್ಯಾಪಿಂಗ್ ಕ್ಯಾಮೆರಾ 2, ಚಂದ್ರಯಾನ್ 2 ಸಾಫ್ಟ್ ಎಕ್ಸ್ ರೇ ಸ್ಪೆಕ್ಟೋಮೀಟರ್, ಸೋಲಾರ್ ಎಕ್ಸ್ ರೇ ಮಾನಿಟರ್, ಆರ್ಬಿಟರ್ ಹೈ ರೆಸೊಲ್ಯೂಷನ್ ಕ್ಯಾಮೆರಾ, ಐಆರ್ ಸ್ಪೆಕ್ಟ್ರೋಮೀಟರ್, ಡುವಲ್ ಫ್ರೀಕ್ವೆನ್ಸಿ ಸಿಂಥೆಟಿಕ್ ಆಪೆರ್ಚರ್ ರೇಡಾರ್, ಅಟ್ಮೋಸ್ಪೆರಿಕ್ ಕಾಂಪೋಸಿಷನಲ್ ಎಕ್ಸ್ಪ್ಲೋರರ್, ಡುವೆಲ್ ಫ್ರೀಕ್ವೆನ್ಸಿ ರೇಡಿಯೋ ಸೈನ್ಸ್ ಎಕ್ಸ್ಪೆರಿಮೆಂಟ್- ಇದು ಆರ್ಬಿಟರ್ನಲ್ಲಿ ಕಾರ್ಯನಿರ್ವಹಿಸುವ ಎಂಟು ಪೇಲೋಡ್ಗಳಾಗಿವೆ.
ಮುಂದಿನ ಯೋಜನೆ ಗಗನಯಾನ
ಸಂಪರ್ಕ ಕಡಿದುಕೊಂಡಿದ್ದ ವಿಕ್ರಂ ಲ್ಯಾಂಡರ್ ಎಲ್ಲಿದೆ, ಹೇಗಿದೆ ಎಂಬ ಮಾಹಿತಿಯ ಜತೆಗೆ ಅದನ್ನು ಸಂಪರ್ಕ ಮಾಡಲು ನಡೆಸಿರುವ ಪ್ರಯತ್ನಗಳು ಸಫಲವಾಗಿಲ್ಲ. ಲ್ಯಾಂಡರ್ ಜತೆಗೆ ಸಂವಹನ ಸಾಧಿಸಲು ನಮಗೆ ಸಾಧ್ಯವಾಗಿಲ್ಲ ಎಂದು ಕೆ. ಶಿವನ್ ವಿವರಿಸಿದ್ದಾರೆ. ಹಾಗೆಯೇ ಇಸ್ರೋದ ಮುಂದಿನ ಆದ್ಯತೆ ಗಗನಯಾನ ಯೋಜನೆ ಎಂದು ತಿಳಿಸಿದ್ದಾರೆ.
ಚಂದ್ರಯಾನದ ವಿಕ್ರಂ ಲ್ಯಾಂಡರ್ ಬಗ್ಗೆ ನಾಸಾ ತಿಳಿಸಿದ ಸಂಗತಿ
ಗಗನಯಾನ ಯೋಜನೆ ಏನು? ಯಾವಾಗ?
ಭಾರತದ ಮೊದಲ ಗಗನಯಾನ ಯೋಜನೆಯನ್ನು 2022ರಲ್ಲಿ ನಡೆಸಲು ಇಸ್ರೋ ತಯಾರಿ ನಡೆಸುತ್ತಿದೆ. ಅಂದರೆ ಬಾಹ್ಯಾಕಾಶಕ್ಕೆ ಮೊದಲ ಬಾರಿಗೆ ಭಾರತದಿಂದ ಮಾನವರನ್ನು ಕಳುಹಿಸುವ ಯೋಜನೆ. ಈ ಯೋಜನೆಗೆ ತಗುಲುವ ವೆಚ್ಚ ಅಂದಾಜು 10,000 ಕೋಟಿ ರೂ. 2021ರಲ್ಲಿ ಭಾರತ ಈ ಬಗ್ಗೆ ಪರೀಕ್ಷಾರ್ಥ ಪ್ರಯೋಗಗಳನ್ನು ನಡೆಸಲಿದೆ. ಕನಿಷ್ಠ ಮೂವರು ಗಗನಯಾನಿಗಳು ಬಾಹ್ಯಾಕಾಶ ಪ್ರಯಾಣ ಮಾಡಲಿದ್ದಾರೆ. ಈ ಮಾನವಸಹಿತ ಗಗನನೌಕೆಯು ಭೂಮಿಯ ಕಕ್ಷೆಯಲ್ಲಿ ಐದರಿಂದ ಏಳು ದಿನ ವಾಸ್ತವ್ಯ ಹೂಡಲಿದೆ.