ಹೌರಾ- ಜಗದಾಳ್ ಪುರ್ ಸಮಲೇಶ್ವರಿ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿ ಮೂವರು ಸಾವು
ಭುವನೇಶ್ವರ್ (ಒಡಿಶಾ), ಜೂನ್ 25: ಟವರ್ ಕಾರ್ ಗೆ ಡಿಕ್ಕಿ ಹೊಡೆದ ನಂತರ ಹೌರಾ- ಜಗದಾಳ್ ಪುರ್ ಸಮಲೇಶ್ವರಿ ಎಕ್ಸ್ ಪ್ರೆಸ್ ರೈಲು ಎಂಜಿನ್, ಎರಡನೆ ದರ್ಜೆಯ ಬೋಗಿ, ಲಗೇಜ್ ವ್ಯಾನ್ ಹಳಿ ತಪ್ಪಿ, ಮೂವರು ರೈಲ್ವೆ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ರಾಯಗಢ ಜಿಲ್ಲೆಯಲ್ಲಿ ಮಂಗಳವಾರ ಟವರ್ ಕಾರ್ ದುರಸ್ತಿ ನಡೆಯುತ್ತಿತ್ತು.
ಉತ್ತರಪ್ರದೇಶದಲ್ಲಿ ಪೂರ್ವ ಎಕ್ಸ್ಪ್ರೆಸ್ ರೈಲು ಪಲ್ಟಿ, 20 ಮಂದಿಗೆ ಗಾಯ
ಟೆಕ್ನಿಷಿಯನ್ ಸುರೇಶ್, ಸೀನಿಯರ್ ಸೆಕ್ಷನ್ ಎಂಜಿನಿಯರ್ ಸಾಗರ್, ಎಲೆಕ್ಟ್ರಿಕಲ್ ಟೆಕ್ನಿಷಿಯನ್ ಗೌರಿ ನಾಯ್ಡು ಮೃತರು. ಮೂಲಗಳ ಪ್ರಕಾರ, ಟವರ್ ಕಾರ್ ಗೆ ಡಿಕ್ಕಿಯಾದ ನಂತರ ರೈಲಿನ ಎಂಜಿನ್ ಗೂ ಬೆಂಕಿ ಹೊತ್ತಿಕೊಂಡಿದೆ. ಆ ನಂತರ ಅದನ್ನು ಬೇರ್ಪಡಿಸಲಾಗಿದೆ. ಈ ಘಟನೆಯು ಸಿಂಗಾಪುರ್ ರಸ್ತೆ ಹಾಗೂ ಕ್ಯೂತುಗುಡದ ಮಧ್ಯೆ ಸಂಜೆ ನಾಲ್ಕೂ ಮೂವತ್ತರ ಹೊತ್ತಿಗೆ ಸಂಭವಿಸಿದೆ.
ರೈಲಿನಲ್ಲಿ ಇದ್ದ ನೂರಾ ನಲವತ್ತೆಂಟು ಪ್ರಯಾಣಿಕರೂ ಸುರಕ್ಷಿತವಾಗಿದ್ದಾರೆ. ಅವರನ್ನು ರಾಯಗಡಕ್ಕೆ ಕರೆದೊಯ್ಯಲಾಗಿದೆ. ಬೇರ್ಪಡಿಸಿದ ಬೋಗಿಗಳನ್ನು ಮತ್ತೊಂದು ಎಂಜಿನ್ ಸಹಾಯದಿಂದ ರಾಯಗಡಕ್ಕೆ ಮತ್ತೆ ತರಲಾಗಿದೆ. ಜಗದಾಳ್ ಪುರ್ ಹಾಗೂ ಕೋರಾಪುಟ್ ಗೆ ಎರಡು ಬಸ್ ಹಾಗೂ ಪ್ರಯಾಣಿಕರಿಗೆ ಊಟದ ವ್ಯವಸ್ಥೆ ಮಾಡಿದ್ದಾಗಿ ಸಾರ್ವಜನಿಕ ಸಂಪರ್ಕಾಧಿಕಾರಿ ಜೆ.ಪಿ.ಮಿಶ್ರಾ ಹೇಳಿದ್ದಾರೆ.
ಕರ್ತವ್ಯದಲ್ಲಿ ಲೋಪ ಎಸಗಿದ ಆರೋಪದಲ್ಲಿ ಕ್ಯೂತುಗುಡ ಮತ್ತು ಸಿಂಗಪುರ್ ರಸ್ತೆಯ ಸ್ಟೇಷನ್ ಮಾಸ್ಟರ್ ಗಳನ್ನು ಅಮಾನತು ಮಾಡಲಾಗಿದೆ ಹಾಗೂ ತನಿಖೆಗೆ ಆದೇಶ ನೀಡಲಾಗಿದೆ.