ಒಡಿಶಾ: ಭಾರಿ ಮಳೆ, ಪ್ರವಾಹಕ್ಕೆ ಮತ್ತೆ ಐದು ಮಂದಿ ಬಲಿ
ಭುವನೇಶ್ವರ, ಆಗಸ್ಟ್ 29: ಒಡಿಶಾದ ಐದು ಜಿಲ್ಲೆಗಳಲ್ಲಿ ಮಳೆ ಮತ್ತು ಪ್ರವಾಹದ ಅಬ್ಬರದಿಂದ ಜನಜೀವನ ತತ್ತರಿಸಿದೆ. ಮನೆ ಕುಸಿತ ಮತ್ತು ನೀರಿನಲ್ಲಿ ಮುಳುಗಿ ಹೋದ ಪ್ರತ್ಯೇಕ ಘಟನೆಗಳಲ್ಲಿ ಐದು ಮಂದಿ ಜೀವ ಕಳೆದುಕೊಂಡಿದ್ದಾರೆ ಎಂದು ವಿಶೇಷ ಪರಿಹಾರ ಆಯುಕ್ತ ಪ್ರದೀಪ್ ಕುಮಾರ್ ಜೆನಾ ಶುಕ್ರವಾರ ತಿಳಿಸಿದ್ದಾರೆ.
ಬಾರ್ಗಾಡ್, ನೌಪಡ, ಜಜ್ಪುರ್, ಬಾಳೇಶ್ವರ್ ಮತ್ತು ಭದ್ರಾಕ್ನಲ್ಲಿ ಮನೆಗಳು ಕುಸಿದಿವೆ. ಕೆಲವರು ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಇದರಿಂದ ಇನ್ನೂ ಐದು ಸಾವುಗಳು ವರದಿಯಾಗಿವೆ. ಇದಕ್ಕೂ ಮುನ್ನ ಮಯೂರ್ಭಂಜ್, ಕೊಯಿಂಝರ್ ಮತ್ತು ಸುಂದರ್ಗಡದಲ್ಲಿ ಏಳು ಮಂದಿ ಮಳೆಯಿಂದಾಗಿ ಜೀವ ಕಳೆದುಕೊಂಡಿದ್ದರು. ಇಬ್ಬರು ನಾಪತ್ತೆಯಾಗಿದ್ದರು ಎಂದು ಅವರು ವಿವರಿಸಿದ್ದಾರೆ.
ಪ್ರವಾಹ ಪರಿಸ್ಥಿತಿಯ ನಿರ್ವಹಣೆಗೆ ಒಡಿಶಾ 11 ಜಿಲ್ಲೆಗಳಲ್ಲಿ ಸರ್ಕಾರ ರಾಷ್ಟ್ರೀಯ ವಿಪತ್ತು ಸ್ಪಂದನಾ ದಳ, ಒಡಿಶಾ ವಿಪತ್ತು ತ್ವರಿತ ಕ್ರಿಯಾ ತಂಡ ಮತ್ತು ಅಗ್ನಿಶಾಮಕ ದಳಗಳ 39 ತಂಡಗಳನ್ನು ನಿಯೋಜನೆ ಮಾಡಿದೆ. ಶನಿವಾರ ಐದು ಹೆಚ್ಚುವರಿ ಎನ್ಡಿಆರ್ಎಫ್ ತಂಡಗಳು ಸೇರಿಕೊಳ್ಳಲಿವೆ.
ಒಡಿಶಾದ ವಿವಿಧ ಭಾಗಗಳಲ್ಲಿ ಕೆಲವು ದಿನಗಳಿಂದ ವಿಪರೀತ ಮಳೆ ಸುರಿಯುತ್ತಿದೆ. ಇದರಿಂದ ನದಿಗಳು ಉಕ್ಕಿ ಹರಿಯುತ್ತಿದ್ದು, ಅನೇಕ ಹಳ್ಳಿಗಳು ಜಲಾವೃತವಾಗಿವೆ.