ಕೆಸರಿನ ಹೊಂಡದಲ್ಲಿ ಬಿದ್ದಿದ್ದ ಕಾಡಾನೆಯನ್ನು ಎತ್ತಿದ ಗ್ರಾಮಸ್ಥರು: ವೈರಲ್ ವಿಡಿಯೋ
ಸುಂದರ್ಗಡ, ಅಕ್ಟೋಬರ್ 25: ಆಳವಾದ ಕೆಸರಿನ ಹೊಂಡದೊಳಗೆ ಬಿದ್ದು ಹೊರಬರಲಾಗದೆ ಪರದಾಡುತ್ತಿದ್ದ ಕಾಡಾನೆಯನ್ನು ಅರಣ್ಯಾಧಿಕಾರಿಗಳು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳೀಯರ ಸಹಾಯದಿಂದ ಎರಡು ಗಂಟೆ ಸತತ ಕಾರ್ಯಾಚರಣೆ ನಡೆಸಿ ಹೊರ ತೆಗೆದ ಘಟನೆ ಒಡಿಶಾದ ಸುಂದರ್ಗಡ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ತೆರೆದ ಬಾವಿಯೊಂದಕ್ಕೆ ಕಾಡಾನೆ ಬಿದ್ದಿತ್ತು. ಇಡೀ ದೇಹ ಕೆಸರಿನಲ್ಲಿ ಹೂತುಹೋಗಿತ್ತು. ಅದರ ತಲೆ ಮತ್ತು ಬೆನ್ನಿನ ಭಾಗ ಮಾತ್ರ ಹೊರಕ್ಕೆ ಕಾಣಿಸುತ್ತಿತ್ತು. ಬಾವಿಯ ಸುತ್ತಲೂ ಜನರು ನೆರೆದು ಗದ್ದಲ ಎಬ್ಬಿಸಿದ್ದರಿಂದ ಆನೆ ಮತ್ತಷ್ಟು ಉದ್ವಿಗ್ನಗೊಂಡಿತ್ತು. ಹರಸಾಹದ ಪಟ್ಟ ಅಧಿಕಾರಿಗಳು ಸ್ಥಳೀಯರ ಸಹಾಯದಿಂದ ಹಗ್ಗ ಬಳಸಿ ಆನೆಯನ್ನು ಮೇಲೆತ್ತುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸಾಹಸದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೆಸರಿನಲ್ಲಿ ಹೂತುಕೊಂಡಿದ್ದ ಆನೆ ಮೇಲೇಳಲಾಗದ ಹತಾಶೆಯಿಂದ ಹೊರಳಾಡುತ್ತಿತ್ತು. ನಾಲ್ಕೂ ದಿಕ್ಕುಗಳಿಂದ ದಪ್ಪನೆಯ ಹಗ್ಗ, ಮರದ ದಿಮ್ಮಿಗಳನ್ನು ಬಳಸಿ ಆನೆಯನ್ನು ಮೇಲೆತ್ತಲು ಪ್ರಯತ್ನಿಸಲಾಯಿತು.
A heartwarming video of #elephant rescue from a well. It is from Sudargarh dist of #Odisha, where #Forest staff & locals were successful. Such incidents pose a danger to rescuers also. Elephant just ran away, maybe thank later. Sourced from #ANI. @susantananda3 pic.twitter.com/TBnwY3dZcV
— Parveen Kaswan, IFS (@ParveenKaswan) October 25, 2019
ಸುಮಾರು ಐದು ಟನ್ ತೂಕದ ಆನೆಯನ್ನು ನೀರಿನಿಂದ ಹೊರ ತೆಗೆಯಲು 75-80 ಮಂದಿ ಸಾಕಷ್ಟು ಶ್ರಮವಹಿಸಿದರು. ಆನೆ ಮತ್ತೆ ಕೆಸರಿನಲ್ಲಿ ಮುಳುಗದಂತೆ ತಡೆಯಲು ಅದರ ಹೊಟ್ಟೆಗೆ ಬಲವಾಗಿ ಹಗ್ಗ ಹಾಕಿ ಮೇಲೆಳೆದರು. ಕೆಸರಿನಿಂದ ಸ್ವಲ್ಪ ಮೇಲೆ ಬಂದ ಬಳಿಕ ಆನೆ ಕಾಲುಗಳನ್ನು ನೆಲಕ್ಕೂರಿ ಹೊರಬರುವಲ್ಲಿ ಸಫಲವಾಯಿತು.
ಸುತ್ತಲೂ ಸೇರಿದ್ದ ಜನರು ಹರ್ಷೋದ್ಗಾರ ಮಾಡಿದರು. ಇದರಿಂದ ಗಾಬರಿಯಾದ ಆನೆ ಜೋರಾಗಿ ಘೀಳಿಡುತ್ತಾ ಅಲ್ಲಿಂದ ಓಡಿತು. ಅದೃಷ್ಟವಶಾತ್ ಅದು ಜನರ ಮೇಲೆ ದಾಳಿ ಮಾಡಲಿಲ್ಲ.
A min of 75-80 people are required to pull and lift an adult elephant weighing around 5 tons. Thus this scene of lifting the elephant from the well,setting it free at Sundergarh today.Thanks to the local support, though they knew that it can be dangerous once de elephant is free. pic.twitter.com/3cb3KJJNQB
— Susanta Nanda IFS (@susantananda3) October 24, 2019
18 ಆನೆಗಳ ಗುಂಪು ಸುಂದರಗಡ ಜಿಲ್ಲೆಯ ದುಮೆರ್ತಾ ಹಳ್ಳಿಯ ಸಮೀಪ ಬುಧವಾರ ರಾತ್ರಿ ಬಂದಿದ್ದವು. ಆನೆಗಳನ್ನು ನೋಡಿ ಭಯಭೀತರಾದ ಗ್ರಾಮಸ್ಥರು ಅವುಗಳನ್ನು ಓಡಿಸಲು ಪ್ರಯತ್ನಿಸಿದರು. ಗುಂಪಿನಲ್ಲಿದ್ದ ಒಂದು ಆನೆ ಓಡುವಾಗ ತೆರೆದ ಬಾವಿಯೊಳಗಿನ ಕೆಸರಿನಲ್ಲಿ ಬಿದ್ದಿತು. ಗುರುವಾರ ಬೆಳಿಗ್ಗೆ ಅದನ್ನು ಮೇಲೆತ್ತುವ ಕಾರ್ಯಾಚರಣೆ ಆರಂಭವಾಯಿತು.
ಆರಂಭದಲ್ಲಿ ಜೆಸಿಬಿ ಯಂತ್ರ ಬಳಸಲು ಉದ್ದೇಶಿಸಲಾಗಿದ್ದರೂ, ಸುತ್ತಮುತ್ತ ಕೆಸರು ತುಂಬಿದ್ದ ಕಾರಣ ಆ ಯೋಜನೆಯನ್ನು ಕೈಬಿಡಲಾಯಿತು. ಎರಡು ಜೆಸಿಬಿಗಳನ್ನು ಅಲ್ಲಿಗೆ ತರಿಸಿ ಹೊಂಡವನ್ನು ಅಗೆದು ರಸ್ತೆ ನಿರ್ಮಾಣ ಮಾಡಲು ತೀರ್ಮಾನಿಸಲಾಗಿತ್ತು. ಆದರೆ ಅಲ್ಲಿಗೆ ಬರುವ ಮಾರ್ಗ ಸಂಪೂರ್ಣವಾಗಿ ಕೆಸರುಮಯವಾಗಿದ್ದರಿಂದ ಜೆಸಿಬಿ ಸ್ಥಳಕ್ಕೆ ತಲುಪುವುದೇ ಅಸಾಧ್ಯವಾಗಿತ್ತು ಎಂದು ಅರಣ್ಯಾಧಿಕಾರಿಯೊಬ್ಬರು ತಿಳಿಸಿದ್ದಾರೆ.